'ಸಹಾಯ ಮಾಡಿ' ಅಂತ ಟ್ವೀಟ್ ಮಾಡಿ ಸುಮ್ಮನಾಗುವ ತಾರೆಯರ ಬಗ್ಗೆ ನೆಟ್ಟಿಗರಿಗೆ ಬೇಸರ.!
ದೇವರ ನಾಡು ಎಂದೇ ಕರೆಯಿಸಿಕೊಳ್ಳುವ... ಪ್ರವಾಸಿಗರನ್ನು ಕೈಬೀಸಿ ಕರೆಯುವ ಕೇರಳ ರಾಜ್ಯ ಇದೀಗ ಅಕ್ಷರಶಃ ನೀರಿನಲ್ಲಿ ಮುಳುಗಿದೆ. ಕುಂಭದ್ರೋಣ ಮಳೆ ಹಾಗೂ ಭೀಕರ ಪ್ರವಾಹದಿಂದ ಕೇರಳ ತತ್ತರಿಸಿ ಹೋಗಿದೆ.
ಕೇರಳ ರಾಜ್ಯದ ಹಲವು ಗ್ರಾಮಗಳು ಜಲಾವೃತ್ತಗೊಂಡಿದೆ. ಎಷ್ಟೋ ಮನೆಗಳಿಗೆ ನೀರು ನುಗ್ಗಿದೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಕೇರಳದ ಜನತೆಗೆ ಕನ್ನಡಿಗರೂ ಸೇರಿದಂತೆ ಹಲವರು ಸಹಾಯ ಹಸ್ತ ಚಾಚಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅಲ್ಲು ಅರ್ಜುನ್, ರಾಮ್ ಚರಣ್ ತೇಜಾ, ಚಿರಂಜೀವಿ, ವಿಜಯ್, ಕಾರ್ತಿಕ್, ಸೂರ್ಯ, ವಿಜಯ್ ದೇವರಕೊಂಡ, ಕಮಲ್ ಹಾಸನ್ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ನಟರು ಹಣ ಸಹಾಯ ಮಾಡಿದ್ದಾರೆ.
ಆದ್ರೆ, ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಅಭಿಶೇಕ್ ಬಚ್ಚನ್, ಅನುಷ್ಕಾ ಶರ್ಮಾ, ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೇರಳ ಜನತೆಗೆ ಸಹಾಯ ಮಾಡದೆ, ಕೇವಲ 'ಟ್ವಿಟ್ಟರ್'ನಲ್ಲಿ ''ಕೈಲಾದ ಸಹಾಯ ಮಾಡಿ'' ಎಂದು ಟ್ವೀಟ್ ಮಾಡಿ ಮುಗಿಸಿದ್ದಾರೆ.
ಇಂತಹ ಸೆಲೆಬ್ರಿಟಿಗಳ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಬರೀ ಟ್ವೀಟ್ ಮಾಡಿ ಸುಮ್ಮನಾಗಿರುವ ತಾರೆಯರ ವಿರುದ್ಧ ಟ್ವೀಟಿಗರು ಗರಂ ಆಗಿದ್ದಾರೆ. ಆರ್ಥಿಕ ನೆರವು ನೀಡದ ಸ್ಟಾರ್ ಗಳ ವಿರುದ್ಧ ಜನರು ಸಿಟ್ಟು ಮಾಡಿಕೊಂಡಿದ್ದಾರೆ. ಬೇಕಾದ್ರೆ, ಕೆಲ ಟ್ವೀಟ್ ಗಳನ್ನು ನೋಡಿರಿ...

ಅಮಿತಾಬ್ ಬಚ್ಚನ್ ಮಾಡಿರುವ ಟ್ವೀಟ್ ಇದು..
''ಪರಿಸ್ಥಿತಿ ತುಂಬಾ ಭಯಾನಕವಾಗಿದೆ. ದಯವಿಟ್ಟು ಸಹಾಯ ಮಾಡಿ'' ಎಂದು ಬಿಗ್ ಬಿ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಹಲವರಿಗೆ ಸಿಟ್ಟು ತರಿಸಿದೆ.
ಕಪ್ಪು ಹಣ ಇಟ್ಟುಕೊಂಡವರು ಸಹಾಯ ಮಾಡಲಿ...
''ನಾನು ಬಡವ.. ನನ್ನ ಕೈಯಲ್ಲಿ ಸಹಾಯ ಮಾಡಲು ಆಗಲ್ಲ. ಕಪ್ಪು ಹಣ ಇಟ್ಟುಕೊಂಡವರು ಸಹಾಯ ಮಾಡಬಹುದು'' ಎಂದು ಅಮಿತಾಬ್ ಬಚ್ಚನ್ ಮಾಡಿದ ಟ್ವೀಟ್ ಗೆ ಟ್ವೀಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ವಿರಾಟ್ ಕೊಹ್ಲಿಗೆ ಬಿಸಿ ಮುಟ್ಟಿಸಿದ ನೆಟ್ಟಿಗರು
''ಕೇರಳದಲ್ಲಿ ಇರುವವರೆಲ್ಲರೂ ಸುರಕ್ಷಿತವಾಗಿರಿ. ಪರಿಸ್ಥಿತಿ ಆದಷ್ಟು ಬೇಗ ಸುಧಾರಿಸಲಿ ಎಂದು ಆಶಿಸೋಣ. ಭಾರತೀಯ ಸೇನೆ ಹಾಗೂ ಎನ್.ಡಿ.ಆರ್.ಎಫ್ ಮಾಡಿದ ಸಹಾಯಕ್ಕೆ ನನ್ನ ಧನ್ಯವಾದಗಳು'' ಎಂದು ವಿರಾಟ್ ಕೊಹ್ಲಿ ಮಾಡಿದ ಟ್ವೀಟ್ ಗೆ ಟ್ವೀಟಿಗರೊಬ್ಬರು ತಿರುಗೇಟು ಕೊಟ್ಟಿದ್ದು ಹೀಗೆ - ''ನೀವು ಯಾರಿಗಾಗಿ ಇದನ್ನೆಲ್ಲಾ ಬರೆದಿದ್ದೀರೋ, ಅವರೆಲ್ಲ ಅದನ್ನ ಓದುವ ಪರಿಸ್ಥಿತಿಯಲ್ಲಿಲ್ಲ. ಬಹುತೇಕ ಮಂದಿ ಬಡವರು. ಟ್ವೀಟ್ ಮಾಡಬೇಕು ಎನ್ನುವ ಸಲುವಾಗಿ ಮಾಡಬೇಡಿ. ಅದರ ಬದಲು ಸಹಾಯ ಮಾಡಿ''
ನಿಮ್ಮ ಕೊಡುಗೆ ಏನು.?
''ಕೇರಳದಲ್ಲಿ ಇರುವವರಿಗೆ ನಮ್ಮ ಸಹಾಯ ಬೇಕಾಗಿದೆ. ಈ ಲಿಂಕ್ ಮೂಲಕ ನೀವು ಡೊನೇಟ್ ಮಾಡಬಹುದು'' ಎಂದು ಅಭಿಶೇಕ್ ಬಚ್ಚನ್ ಟ್ವೀಟ್ ಮಾಡಿದ್ದರು. ಅದಕ್ಕೆ, ''ನಾವು ಮಾಡಿದ್ದೇವೆ. ಇದಕ್ಕೆ ನಿಮ್ಮ ಕೊಡುಗೆ ಏನು ಅಂತ ನಾವು ತಿಳಿದುಕೊಳ್ಳಬೇಕಿದೆ'' ಎಂದು ಟ್ವೀಟಿಗರು ಬೇಸರದಿಂದ ಟ್ವೀಟ್ ಮಾಡಿದ್ದಾರೆ.
ನೀವು ಮೊದಲು ದಾನ ಮಾಡಿ...
''ಪ್ರವಾಹದಿಂದ ಕೇರಳದಲ್ಲಿ ಆಗಿರುವ ಅನಾಹುತ ಮನ ಕಲಕುವಂತಿದೆ. ನಮ್ಮ ಕೈಯಲ್ಲಿ ಎಷ್ಟಾಗುತ್ತೋ, ಅಷ್ಟು ಸಹಾಯ ಮಾಡಬೇಕು'' ಎಂದು ನಟಿ ಅನುಷ್ಕಾ ಶರ್ಮಾ ಟ್ವೀಟ್ ಮಾಡಿದ್ದರು. ಈ ಟ್ವೀಟ್ ನೋಡಿದವರು, ''ಮನೆಯಿಂದಲೇ ದಾನ ಶುರುವಾಗುತ್ತದೆ. ರಸ್ತೆಯಲ್ಲಿ ಜನ ಕಸ ಬಿಸಾಕಿದಾಗ, ನೀವು ತೋರಿದ ಗಟ್ಟಿ ಗುಂಡಿಗೆ ಇದರಲ್ಲಿಯೂ ತೋರಿಸಿ. ನೀವು ಮೊದಲು ಹಣವನ್ನ ದಾನ ಮಾಡಿ'' ಎಂದು ಬಿಸಿ ಮುಟ್ಟಿಸಿದ್ದಾರೆ.


Click it and Unblock the Notifications











