ರಾಜಕೀಯ ಕೆಲಸದ ನಡುವೆಯೂ ಹೊಸ ಸಿನಿಮಾಗೆ ಉಪ್ಪಿ ಗ್ರೀನ್ ಸಿಗ್ನಲ್
ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಸಿನಿಮಾಗಳ ಜೊತೆಗೆ ಪ್ರಜಾಕೀಯದಲ್ಲೂ ಬ್ಯುಸಿಯಾಗಿದ್ದಾರೆ. ಇನ್ನೇನು ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಿಯಲ್ ಸ್ಟಾರ್ ನಿರತರಾಗಿದ್ದಾರೆ. ಹಾಗಂತ ಉಪ್ಪಿ ಪ್ರಜಾಕೀಯದತ್ತ ಮಾತ್ರ ಗಮನ ಹರಿಸಿಲ್ಲ, ಇತ್ತ ಸಿನಿಮಾಗಳನ್ನು ಮಾಡುತ್ತಾ, ಪ್ರಜಾಕೀಯ ಮತ್ತು ಸಿನಿಮಾ ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಪ್ರಜಾಕೀಯ ಕೆಲಸಗಳ ಒತ್ತಡದ ನಡುವೆಯೂ ರಿಯಲ್ ಸ್ಟಾರ್ ಈಗ ಮತ್ತೊಂದು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಈಗಾಗಲೇ ಉಪೇಂದ್ರ ಬಳಿ ಕೈ ತುಂಬ ಸಿನಿಮಾಗಳಿವೆ. ಇದರ ಜೊತೆಗೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಯುವ ನಿರ್ದೇಶಕ ಜೈ ರಾಮ್ ಭದ್ರಾವತಿ ನಿರ್ದೇಶನದ ಸಿನಿಮಾಗೆ ರಿಯಲ್ ಸ್ಟಾರ್ ಹೀರೋ ಆಗುತ್ತಿದ್ದಾರೆ. ಜೈ ರಾಮ್ ಈ ಹಿಂದೆ ಸುಮಂತ್ ಶೈಲೇಂದ್ರ ಅಭಿನಯದ 'ಚೆರ್ರಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈಗ ಯೂನಿಕ್ ಕತೆಯೊಂದಿಗೆ ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ.
ಅಂದ್ಹಾಗೆ, ಇನ್ನೂ ಹೆಸರಿಡದ ಉಪ್ಪಿಯ ಹೊಸ ಸಿನಿಮಾ ಲೋಕಸಭಾ ಚುನಾವಣೆಯ ನಂತರ ಸೆಟ್ಟೇರಲಿದೆಯಂತೆ. ಆದರೆ, ಈಗಾಗಲೇ ಉಪೇಂದ್ರ ಬಳಿ ಸಾಲು ಸಾಲು ಸಿನಿಮಾಗಳಿವೆ. ಸುಜಯ್ ಕೆ ಶ್ರೀಹರಿ ನಿರ್ದೇಶನದ 'ಹೋಮ್ ಮಿನಿಸ್ಟರ್' ಮತ್ತು ಆರ್ ಚಂದ್ರು ನಿರ್ದೇಶನದ 'ಐ ಲವ್ ಯು' ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಜೊತೆಗೆ ಮೌರ್ಯ ಡಿ ಎನ್ ಮತ್ತು ನಿರ್ದೇಶಕ ಶಶಾಂಕ್ ಜೊತೆಯೂ ಸಿನಿಮಾ ಮಾಡುತ್ತಿದ್ದಾರೆ. ಇದೆಲ್ಲದರ ಜೊತೆಗೀಗ ಜೈರಾಮ್ ಭದ್ರಾವತಿ ನಿರ್ದೇಶನದ ಚಿತ್ರಕ್ಕೂ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಪ್ರಜಾಕೀಯದಲ್ಲಿ ಶುರು ಮಾಡಿರುವ ಉಪೇಂದ್ರ ಇತ್ತ ಸಿನಿಮಾಗಳನ್ನು ಮಾಡುತ್ತಾ ಸಿನಿಮಾಭಿಮಾನಿಗಳನ್ನು ರಂಜಿಸುತ್ತಿದ್ದಾರೆ.


Click it and Unblock the Notifications











