ನಟ ಕಾರ್ತಿಕ್ ವಿಕ್ರಂ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್
'ನಾಗವಲ್ಲಿ V/S ಆಪ್ತಮಿತ್ರರು' ಸಿನಿಮಾದಲ್ಲಿ ಅಭಿನಯಿಸಿದ್ದ ಯುವ ನಟ ಕಾರ್ತಿಕ್ ವಿಕ್ರಂ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕಾರ್ತಿಕ್ ವಿಕ್ರಂ ನಿನ್ನೆ ರಾತ್ರಿ ಬಸವೇಶ್ವರ ನಗರದ ವಾಟರ್ ಟ್ಯಾಂಕ್ ಬಳಿ ಬರುತ್ತಿರುವಾಗ ಏಳು ಜನರ ತಂಡ ತನ್ನ ಮೇಲೆ ಅಡ್ಯಾಕ್ ಮಾಡಿದೆ ಎಂದು ಬಸವೇಶ್ವರ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಹಲ್ಲೆ ಮಾಡಿದ ವೇಳೆ ಕಿವಿಯ ಭಾಗಕ್ಕೆ ಹೊಡೆತ ಬಿದ್ದಿದೆ ಎಂದು ಪುಣ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ.
ಆದರೆ, ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಇದೀಗ ಸತ್ಯಾಂಶ ಬೆಳಕಿಗೆ ಬಂದಿದೆ. ನಟ ಕಾರ್ತಿಕ್ ವಿಕ್ರಂ ಕುಡಿದ ಮತ್ತಿನಲ್ಲಿ ತಾನೇ ವೋಕ್ಸ್ ವ್ಯಾಗನ್ ಕಾರಿಗೆ ಗುದ್ದಿದ್ದಾನೆ. ನಂತರ ತನ್ನ ಬಳಿ ಇರುವ ಮೊಬೈಲ್, ಲ್ಯಾಪ್ ಟಾಪ್ ಮತ್ತು ಕಾರ್ ಕೀ ನೀಡಿ ನಾಳೆ ನಿಮ್ಮ ಕಾರನ್ನು ರಿಪೇರಿ ಮಾಡಿಸಿಕೊಡುತ್ತೇನೆ ಎಂದು ಹೇಳಿದ್ದಾನೆ. ಮಾಡುವುದೆಲ್ಲ ಮಾಡಿ ಪೊಲೀಸ್ ಠಾಣೆಯಲ್ಲಿ ತನ್ನ ಮೇಲೆ ಯಾರೋ ಹಲ್ಲೆ ನಡೆಸಿದ್ದಾರೆ ಎಂಬ ನಾಟಕ ಆಡಿದ್ದಾನೆ. ಇನ್ನು ತಾನೇ ದೂರು ನೀಡಿ ತಾನೇ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ.

ಅಂದಹಾಗೆ, ಕಾರ್ತಿಕ್ ವಿಕ್ರಂ 'ಆಪ್ತಮಿತ್ರರು' ಎಂಬ ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲು ಈ ಸಿನಿಮಾಗೆ 'ಆಪ್ತಮಿತ್ರ 2' ಎಂದು ಹೆಸರಿಡಲಾಗಿದ್ದು, ನಂತರ ಅದನ್ನು 'ನಾಗವಲ್ಲಿ V/S ಆಪ್ತಮಿತ್ರರು' ಎಂದು ಬದಲಿಸಲಾಗಿತ್ತು. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ತಮ್ಮ ಸಿನಿಮಾದ ಬಿಡುಗಡೆಯ ಕೆಲಸದಲ್ಲಿ ತೋಡಗಿದ್ದ ಕಾರ್ತಿಕ್ ಈಗ ಈ ಅವತಾರ ಮಾಡಿಕೊಂಡಿದ್ದಾನೆ.


Click it and Unblock the Notifications











