Don't Miss!
- Lifestyle ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- News ಮಳೆ ಬರದೇ ಇದ್ದರೆ ಮುಗೀತು ಕಥೆ!
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಬಿಎಂಪಿಗೆ ಕೋಟ್ಯಂತರ ಹಣ ವಂಚನೆ: ರಾಕ್ಲೈನ್ ವಿರುದ್ಧ ದೂರು
ಸಿನಿಮಾಕ್ಕೆ ಮಾತ್ರವೇ ಸೀಮಿತವಾಗಿದ್ದ ನಟ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಅಂಬರೀಶ್ ಕಾಲವಾದ ನಂತರ ಮಂಡ್ಯದಲ್ಲಾದ ರಾಜಕೀಯ ಬೆಳವಣಿಗೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸುಮಲತಾ ಬೆನ್ನಿಗೆ ನಿಂತು ಅವರು ಚುನಾವಣೆಯಲ್ಲಿ ಗೆದ್ದ ಬಳಿಕ ರಾಜಕೀಯವಾಗಿಯೂ ಸಕ್ರಿಯರಾಗಿದ್ದಾರೆ.
ಇತ್ತೀಚೆಗೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಕ್ಲೈನ್ ವೆಂಕಟೇಶ್ ಎಚ್ಚರಿಕೆ ನೀಡುವ ಧಾಟಿಯಲ್ಲಿ ಮಾತನಾಡಿದ್ದರು. ಆ ನಂತರ ಜೆಡಿಎಸ್ ಕಾರ್ಯಕರ್ತರು ವಿರುದ್ಧ ರಾಕ್ಲೈನ್ ವಿರುದ್ಧ ಪ್ರತಿಭಟನೆ ಮಾಡಿದ್ದರು, ಕೆಲವರು ರಾಕ್ಲೈನ್ ಮನೆಗೆ ಬಾಟಲಿ ಎಸೆದಿದ್ದರು.
ಇದೀಗ ರಾಕ್ಲೈನ್ ವೆಂಕಟೇಶ್ ವಿರುದ್ಧ ಬಿಜೆಪಿ ರಾಜ್ಯ ಮುಖಂಡರೊಬ್ಬರು ವಂಚನೆ ದೂರು ದಾಖಲಿಸಿದ್ದಾರೆ. ರಾಕ್ಲೈನ್ ವೆಂಕಟೇಶ್, ಬಿಬಿಎಂಪಿಗೆ ಕೋಟ್ಯಂತರ ಹಣ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ರಾಕ್ಲೈನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿಯ ಪ್ರಮುಖ ಮುಖಂಡರಲ್ಲಿ ಒಬ್ಬರಾಗಿರುವ ಎನ್ಆರ್.ರಮೇಶ್, ರಾಕ್ಲೈನ್ ವೆಂಕಟೇಶ್ ವಿರುದ್ಧ ಗುರುತರವಾದ ಆರೋಪ ಮಾಡಿದ್ದು, ರಾಕ್ಲೈನ್ ವೆಂಕಟೇಶ್ ಬಿಬಿಎಂಪಿಗೆ ಸುಮಾರು 8.50 ಕೋಟಿ ರುಪಾಯಿಗೂ ಹೆಚ್ಚು ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇವೆ ಎಂದು ಸಹ ಅವರು ಹೇಳಿದ್ದಾರೆ.
ರಾಕ್ಲೈನ್ ಮಾಲ್ ಹೆಸರು ಇರಲಿಲ್ಲ: ಎನ್ಆರ್ ರಮೇಶ್
''ಕಳೆದ ವಾರವಷ್ಟೆ ಬಿಬಿಎಂಪಿ ಮುಖ್ಯ ಆಯುಕ್ತರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಆ ಪಟ್ಟಿಯಲ್ಲಿ ರಾಕ್ಲೈನ್ ವೆಂಕಟೇಶ್ ಒಡೆತನದ ರಾಕ್ಲೈನ್ ಮಾಲ್ ಹೆಸರು ಇರಲಿಲ್ಲ. ಬೇರೆ ಬೇರೆ ಕಾರಣಗಳಿಂದಾಗಿ ಪ್ರಭಾವಿ ಎನಿಸಿಕೊಂಡಿರುವವರು ರಾಕ್ಲೈನ್ ವೆಂಕಟೇಶ್ ಅವರ ಒಡೆತನದ ರಾಕ್ಲೈನ್ ಮಾಲ್ ಆಸ್ತಿ ತೆರಿಗೆ ವಿಷಯ ಕೆದಕಿಕೊಂಡು ಹೋದಾಗ ಗೊತ್ತಾಯ್ತು ಅವರು ನಿರಂತರವಾಗಿ ಬಹಳ ವರ್ಷಗಳಿಂದ ದೊಡ್ಡ ಮೊತ್ತದ ತೆರಿಗೆ ಹಣ ವಂಚನೆಯನ್ನು ಬಿಬಿಎಂಪಿಗೆ ಮಾಡುತ್ತಲೇ ಬಂದಿದ್ದಾರೆ ಎಂದು'' ಎಂದಿದ್ದಾರೆ ಎನ್ಆರ್ ರಮೇಶ್.
2013ರಲ್ಲಿ 5 ಕೋಟಿ ತೆರಿಗೆ ಬಾಕಿ ಇತ್ತು: ಎನ್ಆರ್ ರಮೇಶ್
''2008ರಲ್ಲಿ ಎಸ್ಇಎಸ್ ಪದ್ಧತಿ ಜಾರಿಗೆ ಬಂದಾಗ 2013ರವರೆಗೆ ಅವರ ಬಾಕಿ 2.75 ಕೋಟಿವರೆಗೆ ಇತ್ತು. ಅದಕ್ಕೆ ಸಂಬಂಧಿಸಿದಂತೆ ಮೂರು ಡಿಮ್ಯಾಂಡ್ ನೊಟೀಸ್ಗಳನ್ನು ಪಾಲಿಕೆಯ ಕಂದಾಯ ಅಧಿಕಾರಿಗಳು ನೀಡಿದ್ದರು. ಬಾಕಿ ಉಳಿಸಿದ್ದ ತೆರಿಗೆ ಮತ್ತು ಅದಕ್ಕೆ ದಂಡ, ಬಡ್ಡಿ ಸೇರಿ 5 ಕೋಟಿ ಹಣವನ್ನು ಅವರು ಪಾಲಿಕೆಗೆ ಕಟ್ಟಬೇಕಾಗಿರುತ್ತದೆ. ಆದರೆ 2013ರಲ್ಲಿ ಧಿಡೀರನೆ ರಾಕ್ಲೈನ್ ಮಾಲ್ನ ಪಿಐಡಿ ಸಂಖ್ಯೆಯೇ ಬದಲಾಗಿಬಿಟ್ಟಿದೆ'' ಎಂದು ಸಂಚಿನ ವಿವರ ಬಿಚ್ಚಿಟ್ಟಿದ್ದಾರೆ ರಮೇಶ್.
ಬಿಬಿಎಂಪಿ ಅಧಿಕಾರಿಯ ನೆರವು ಪಡೆದು ವಂಚನೆ
''ಬಿಬಿಎಂಪಿಯ ಐಟಿ ಅಡ್ವೈಸರ್ ಆಗಿದ್ದ ಶೇಷಾದ್ರಿ ಎಂಬುವರ ನೆರವು ಪಡೆದು ಪಿಐಡಿ ಸಂಖ್ಯೆಯನ್ನೇ ಬದಲಿಸಿ ತಮ್ಮ ಆಸ್ತಿಯನ್ನೇ ರಾಕ್ಲೈನ್ ವೆಂಕಟೇಶ್ ಮರೆಮಾಚಿದ್ದಾರೆ. ಇದು ಬಹಳ ದೊಡ್ಡ ಮಟ್ಟದ ವಂಚನೆ. ಅದರ ಬಳಿಕ 2013ರಿಂದ ಈವರೆಗೆ ಅವರು ಕಟ್ಟದಿರುವ, ಮರೆಮಾಚಿರುವ ಆಸ್ತಿಯ ತೆರಿಗೆ ಹಾಗೂ ಅದರ ದಂಡ, ಬಡ್ಡಿ ಎಲ್ಲ ಸೇರಿಸಿ ಸುಮಾರು 8.50 ಕೋಟಿಗೂ ಹೆಚ್ಚು ಹಣ ರಾಕ್ಲೈನ್ ವೆಂಕಟೇಶ್ ಪಾವತಿಸಬೇಕಿದೆ. ಇಷ್ಟು ಹಣವನ್ನು ರಾಕ್ಲೈನ್ ವೆಂಕಟೇಶ್ ವಂಚನೆ ಮಾಡಿದ್ದಾರೆ. ಇದಕ್ಕೆ ಸಂಬಂಧ ಪಟ್ಟಂತೆ ಈವರೆಗೆ ಆರು ನೊಟೀಸ್ ನೀಡಲಾಗಿದೆ. ಇದಕ್ಕೆ ಸ್ಟೇ ಅನ್ನೂ ವೆಂಕಟೇಶ್ ತರಲು ಯತ್ನಿಸಿದ್ದರು ಆದರೆ ನ್ಯಾಯಾಲಯವು ರಾಕ್ಲೈನ್ ಅರ್ಜಿಯನ್ನು ವಜಾ ಮಾಡಿ ತೆರಿಗೆ ಪಾವತಿಸುವಂತೆ ತಾಕೀತು ಮಾಡಿದೆ'' ಎಂದಿದ್ದಾರೆ ರಮೇಶ್.
ಆಸ್ತಿ ವಿಸ್ತೀರ್ಣದಲ್ಲಿ ವಂಚನೆ
ರಾಕ್ಲೈನ್ ವೆಂಕಟೇಶ್ ಎಸ್ಇಎಸ್ ಪದ್ಧತಿಯಲ್ಲಿ ತಮ್ಮ ಆಸ್ತಿಯನ್ನು ಕೇವಲ 48,500 ಚದರ ವಿಸ್ತೀರ್ಣ ಇರುವುದಾಗಿ ಘೋಷಿಸಿಕೊಂಡಿದ್ದರು. ಆದರೆ ನಾವು ನೀಡಿದ ದೂರಿನ ಆಧಾರದ ಮೇಲೆ ಬಿಬಿಎಂಪಿಯವರು ಅಳತೆ ಹಾಕಿದ ಸಂದರ್ಭದಲ್ಲಿ ಗೊತ್ತಾಗಿದ್ದು ರಾಕ್ಲೈನ್ ವೆಂಕಟೇಶ್ ಅವರ ರಾಕ್ಲೈನ್ ಮಾಲ್ ಆಸ್ತಿ ಬರೋಬ್ಬರಿ 1,22,743 ಚದರ ಅಡಿ ಇದೆಯೆಂದು. ಅಂದರೆ ಸುಮಾರು 73000 ಚದರ ಅಡಿಯ ಕಟ್ಟಡವನ್ನು ಅವರು ದಾಖಲೆಗೇ ತರದೆ ತೆರಿಗೆ ವಂಚನೆ ಮಾಡಿದ್ದಾರೆ. ಹಾಗಾಗಿ ಈ ಕೂಡಲೇ ರಾಕ್ಲೈನ್ ವೆಂಕಟೇಶ್ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಬೇಕು, ಪಿಐಡಿ ಸಂಖ್ಯೆ ಬದಲಾವಣೆ ಕುರಿತಾಗಿ ಪ್ರತ್ಯೇಕ ಪ್ರಕರಣ ಹಾಗೂ ತಮ್ಮ ಒಟ್ಟು ನಿರ್ಮಿತಿ ಕಟ್ಟಡದ ವಿಸ್ತೀರ್ಣ ಮರೆ ಮಾಚಿ ಮಾಡಿದ ವಂಚನೆ ಬಗ್ಗೆಯೂ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಶಿಕ್ಷೆಗೆ ಗುರಿ ಮಾಡಬೇಕು ಎಂದು ಎನ್ಆರ್ ರಮೇಶ್ ಒತ್ತಾಯಿಸಿದ್ದಾರೆ.
ದೂರು ನೀಡಿರುವ ಎನ್ಆರ್.ರಮೇಶ್
''2013ರಿಂದ ಈವರೆಗೆ ರಾಕ್ಲೈನ್ ವೆಂಕಟೇಶ್ ವಂಚಿಸಿರುವ ಮೊತ್ತ ಹಾಗೂ ಅದಕ್ಕೆ ಹಿಂದಿನ ಐದು ವರ್ಷ ರಾಕ್ಲೈನ್ ವೆಂಕಟೇಶ್ ವಂಚಿಸಿರುವ ಎಲ್ಲ ಮೊತ್ತವನ್ನು ಕೂಡಲೇ ಕಟ್ಟಿಸಿಕೊಳ್ಳಬೇಕು, ಪಿಐಡಿ ಸಂಖ್ಯೆ ಬದಲಾವಣೆಯಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ನಾನು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ನೀಡಿದ್ದೇನೆ. ನನ್ನ ದೂರಿಗೆ ಸ್ಪಂದಿಸಿರುವ ವಿಶೇಷ ಆಯುಕ್ತರು, ರಾಕ್ಲೈನ್ ವೆಂಕಟೇಶ್ ಪ್ರಕರಣದ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಇಲಾಖೆಗೆ ಸೂಚಿಸಿದ್ದಾರೆ. ಈ ಹಗರಣಕ್ಕೆ ತಾರ್ಕಿಕ ಅಂತ್ಯವನ್ನು ಆಯುಕ್ತರು ಮತ್ತು ಅಧಿಕಾರಗಳು ನೀಡಬೇಕೆಂದು ನಾನು ಮನವಿ ಮಾಡುತ್ತೇನೆ'' ಎಂದಿದ್ದಾರೆ ಎನ್ಆರ್ ರಮೇಶ್.
ಬಿಜೆಪಿ ಮುಖಂಡರೇ ದೂರು ನೀಡಿದ್ದಾರೆ
ರಾಕ್ಲೈನ್ ವೆಂಕಟೇಶ್ಗೆ ಸೇರಿದ ರಾಕ್ಲೈನ್ ಶಾಪಿಂಗ್ ಮಾಲ್ಗೆ ಸಂಬಂಧಿಸಿದಂತೆ 48500 ಚದರ ಅಡಿಗೆ ಮಾತ್ರವೇ ಆಸ್ತಿ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಆ ಮಾಲ್ 1.22 ಲಕ್ಷಕ್ಕೂ ಹೆಚ್ಚು ಚದರ ಅಡಿ ವಿಸ್ತೀರ್ಣ ಹೊಂದಿದೆ. ಹಾಗಾಗಿ ಬಾಕಿ ಇರುವ 74000 ಚದರ ಅಡಿ ಆಸ್ತಿಗೆ 2013ರಿಂದಲೂ ತೆರಿಗೆ ಪಾವತಿಸಿಯೇ ಇಲ್ಲ. ಇನ್ನು 2008ರಿಂದ 2013ರ ವರೆಗೆ 5 ಕೋಟಿಗೂ ಹೆಚ್ಚು ತೆರಿಗೆಯನ್ನು ಪಾವತಿಸಬೇಕಿತ್ತು ಆದರೆ ಪಿಐಡಿ ನಂಬರ್ ಬದಲಾಯಿಸಿಕೊಂಡು ಆ ತೆರಿಗೆಯನ್ನೂ ವಂಚಿಸಿದ್ದಾರೆ ಎಂಬ ಎರಡು ಗುರುತರ ಆರೋಪಗಳನ್ನು ರಾಕ್ಲೈನ್ ವೆಂಕಟೇಶ್ ಮಾಡಿದ್ದಾರೆ. ವಿಶೇಷವೆಂದರೆ ಬಿಜೆಪಿ ಬೆಂಲದಿಂದ ಗೆದ್ದಿರುವ ಸುಮಲತಾ ಅಂಬರೀಶ್ ಅವರ ಆಪ್ತರಾಗಿದ್ದಾರೆ ರಾಕ್ಲೈನ್ ವೆಂಕಟೇಶ್ ಆದರೆ ಈಗ ಬಿಜೆಪಿ ಮುಖಂಡರೇ ರಾಕ್ಲೈನ್ ವೆಂಕಟೇಶ್ ವಿರುದ್ಧ ದೂರು ನೀಡಿದ್ದಾರೆ.