ಕಲಾಕೇಸರಿ ಉದಯಕುಮಾರ್ ಸಂಸ್ಮರಣೆಯ 'ನೃತ್ಯೋದಯ'
ಕಲಾಕೇಸರಿ ನಟಸಾಮ್ರಾಟ್ ಪವನಸುತ ಉದಯ್ ಕುಮಾರ್ ರವರು ಕನ್ನಡ ನಾಡು, ಚಲನಚಿತ್ರರಂಗ ಕಂಡ ಅಭೂತಪೂರ್ವ ಅಪ್ರತಿಮ ಕಲಾವಿದರು. ಇದಿಷ್ಟೇ ಅಲ್ಲದೇ ಕನ್ನಡ ನಾಡು-ನುಡಿಗಾಗಿ ಸೇವೆಸಲ್ಲಿಸಿದ ನಾಡಭಟ, ನಾಟಕಕಾರ, ಚಿಂತಕ, ವಾಗ್ಮಿ, ಸಾಂಸ್ಕೃತಿಕ ಹರಿಕಾರ, ಕೃತಿರಚನಕಾರ, ವಚನಪದರಚನಕಾರ, ಪ್ರಚಂಡ ಭಾಷಾಭಿಮಾನಿ, ಕನ್ನಡ-ಸಂಸ್ಕೃತ-ತೆಲುಗು ಭಾಷೆಗಳಲ್ಲಿ ಶುದ್ಧಶಾಸ್ತ್ರೀಯ ಸಂಗೀತ ಕೃತಿಗಳನ್ನು ರಚಿಸಿ ಇಂದಿಗೂ ಜನಮಾನಸದಲ್ಲಿ ಅಳಿಯದ ಛಾಪನ್ನು ಮೂಡಿಸಿರುವ ಕಲಾಭೀಷ್ಮ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಕಲಾಕೇಸರಿಯವರ ನಿಕಟವರ್ತಿಗಳಾಗಿದ್ದ ಖೋಡೆ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಹರಿ.ಎಲ್.ಖೋಡೆರವರು ನೆನಪಿಸಿಕೊಂಡರು.
ಕಲಾಕೇಸರಿ ಉದಯ್ ಕುಮಾರ್ ರವರು ರಚಿಸಿರುವ ಸಂಗೀತ ಕೃತಿಗಳ ನೃತ್ಯರೂಪಕ "ನೃತ್ಯೋದಯ" ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವ ನೃತ್ಯಪಟುಗಳನ್ನು ಒಳಗೊಂಡ ಅನುರಾಗ್ ಕಲಾಗುರುಕುಲದ ಕಲಾವಿದರಿಂದ ನೃತ್ಯನಮನವನ್ನು ಸಲ್ಲಿಸಲಾಗಿ, ರಮಣಿ ಸುಂದರೇಶ್ ರವರು ಕಲಾಕೇಸರಿಯವರ ಜನಪ್ರಿಯ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿ ಗಾನನಮನವನ್ನು ಸಲ್ಲಿಸಿದರು.

ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕರಾದ ರಾಜನ್ ರವರು (ರಾಜನ್-ನಾಗೇಂದ್ರ), ಹಿರಿಯ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದರಾದ ಡಾ.ಆರ್.ಟಿ.ರಮಾ, ಹಿರಿಯಪತ್ರಕರ್ತರಾದ ಡಾ. ವಿಜಯಾ, ಕರ್ನಾಟಕ ಕಲಾವಿದರ ಸಂಘದ ಕಾರ್ಯದರ್ಶಿಗಳಾದ ದೊಡ್ಡಣ್ಣ, ಪೋಷಕ ಕಲಾವಿದರ ಸಂಘದ ಅಧ್ಯಕ್ಷರಾದ ಬ್ಯಾಂಕ್ ಜನಾರ್ಧನ್, ಕರ್ನಾಟಕ ಚಲನಚಿತ್ರರಂಗ ನಿರ್ದೇಶಕರ ಸಂಘದ ಅಧ್ಯಕ್ಷರಾದ ಹೆಚ್.ವಿಶ್ವನಾಥ್, ಲಕ್ಷ್ಮಿವಜ್ರಮುನಿರವರು ಪವನಸುತ ಕೇಸರಿ ಕಲಾಶಾಲಾ(ನೋಂ)ಪ್ರತಿಷ್ಠಾನದ ಗೌರವಾರ್ಪಣೆಯನ್ನು ಸ್ವೀಕರಿಸಿದರು.

ಸಾಹಿತ್ಯ ಕ್ಷೇತ್ರದ ದಿಗ್ಗಜರು, ಪತ್ರಿಕಾ ಮಾಧ್ಯಮ ಮಿತ್ರರು, ಚಿಂತಕರೊಂದಿಗೆ ಉದಯರಿಗೆ ಇದ್ದ ಸ್ನೇಹ, ವಿಶ್ವಾಸಗಳನ್ನು ನೆನಪಿಸಿಕೊಂಡು ಅವರ ಸಾಹಿತ್ಯಕೃತಿಗಳು, ವಚನಗಳು, ನಾಟಕಗಳು, ಜನಸಾಮಾನ್ಯರಿಗೆ ತಲುಪಬೇಕು ಹಾಗು ಅವು ಇಂದಿಗೂ ಪ್ರಸ್ತುತ ಮತ್ತು ರಂಗಭೂಮಿ ಅಳವಡಿಕೆಯಾಗಬೇಕೆಂಬ ಆಸೆಯನ್ನು ಹಿರಿಯಪತ್ರಕರ್ತರಾದ ಡಾ.ವಿಜಯಾರವರು ತೋಡಿಕೊಂಡರು.

ಕಲಾವಿದರಾಗಿ ಮೇರುಸಾಧಕರಾದರೂ ತಮ್ಮ ಸಹಕಲಾವಿದರೊಂದಿಗೆ ಉದಯಣ್ಣರಿಗೆ ಇದ್ದ ಸೌಜನ್ಯ-ಆತ್ಮೀಯತೆಯನ್ನು ನೆನೆದ ಕರ್ನಾಟಕ ಕಲಾವಿದರ ಸಂಘದ ಕಾರ್ಯದರ್ಶಿಗಳಾದ ದೊಡ್ಡಣ್ಣನವರು ಗೌರವಾರ್ಪಣೆಯನ್ನು ಸ್ವೀಕರಿಸಿ, ತಮಗೆ ಸಂದ ಗೌರವ ಇಡೀ ಚಿತ್ರರಂಗಕ್ಕೆ ದೊರೆತ ಗೌರವ ಎಂಬ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಕಲಾಕೇಸರಿಯವರ ಜನ್ಮದಿನಾಚರಣೆಯ ಅಂಗವಾಗಿ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಕನ್ನಡ ಚಲನಚಿತ್ರರಂಗ ಕೈಜೋಡಿಸಿ "ಕಲಾಕೇಸರಿ ಜೀವಮಾನ ಸಾಧನಾ ಪ್ರಶಸ್ತಿ"ಯನ್ನು ಚಿತ್ರರಂಗದ ಸಾಧಕರಿಗೆ ನೀಡಬೇಕೆಂದು ಅಭಿಪ್ರಾಯಪಟ್ಟರು. ಪ್ರತಿಷ್ಠಾನದ ಎಲ್ಲಾ ಯೋಜನೆಗಳೂ ಪ್ರಶಂಸನೀಯ ಹಾಗೂ ಚಿತ್ರರಂಗದ ಸಹಕಾರ ಸದಾಕಾಲ ಇರುವುದಾಗಿ ತಿಳಿಸಿದರು. (ಫಿಲ್ಮಿಬೀಟ್ ಕನ್ನಡ)

ಗೌರವಾರ್ಪಣೆಗೆ ಭಾಜನರಾದ ಪೋಷಕ ಕಲಾವಿದರ ಸಂಘದ ಅಧ್ಯಕ್ಷರಾದ ಶ್ರೀ ಬ್ಯಾಂಕ್ ಜನಾರ್ಧನ್ರವರು ಕಲಾಕೇಸರಿಯವರ ನೆನಪಿನ ಪ್ರತಿಷ್ಠಾನದ ಎಲ್ಲಾ ಯೋಜನೆಗಳಿಗೂ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರ ಸದಾ ಇರುವುದಾಗಿ ಆಶ್ವಾಸನೆಯನ್ನು ನೀಡಿ ಕಲಾಕೇಸರಿಯವರೊಂದಿಗಿನ ತಮ್ಮ ಚಿತ್ರರಂಗಪಯಣವನ್ನು ಹಂಚಿಕೊಂಡರು.
ನೃತ್ಯೋದಯ ಕಾರ್ಯಕ್ರಮದ ರೂವಾರಿ ಕಲಾಕೇಸರಿಯವರ ಪುತ್ರ ವಿಕ್ರಮ್ ಉದಯ್ಕುಮಾರ್ ಕಲಾಕೇಸರಿಯವರ ಸಂಸ್ಮರಣೆಯಲ್ಲಿ 'ಕಲಾಕೇಸರಿ ಸಹಾಯನಿಧಿ', 'ಕಲಾಕೇಸರಿ ವಿದ್ಯಾನಿಧಿ' ಮತ್ತು 'ಕಲಾಕೇಸರಿ ಆರೋಗ್ಯನಿಧಿ' ಯ ಮುಖೇನ ಪ್ರತಿಷ್ಠಾನವು ಸಮಾಜಸೇವೆಯಲ್ಲಿ ತೊಡಗಿಕೊಂಡಿರುವುದಾಗಿ ಮತ್ತು ಕಲಾಪ್ರಾಕಾರಗಳೆಲ್ಲವೂ ಒಂದೇ ಸೂರಿನಡಿ ಕಲಿಯುವಂತಾಗಲು ‘ಕಲಾಕೇಸರಿ ಕಲಾವಿಶ್ವವಿದ್ಯಾನಿಲಯ'ದ ಸ್ಥಾಪನೆಯಾಗಲು ಕನ್ನಡಿಗರೆಲ್ಲರ ಸಹಕಾರವನ್ನು ಕೋರಿ ಪ್ರತಿಷ್ಠಾನದ ಪರವಾಗಿ ಸ್ವಾಗತಿಸಿ ಪ್ರಾಸ್ತಾವಿಕನುಡಿಗಳನ್ನಾಡಿದರು.


Click it and Unblock the Notifications











