ಚಿತ್ರಮಂದಿರ ಭರ್ತಿ ಆದೇಶಕ್ಕೆ ಒತ್ತಾಯಿಸಿ ವಾಟಾಳ್ ನಾಗರಾಜ್ ಉಪವಾಸ ಸತ್ಯಾಗ್ರಹ
ಕೇಂದ್ರ ಸರ್ಕಾರದ ಆದೇಶದ ನಂತರವೂ ರಾಜ್ಯ ಸರ್ಕಾರವು ಚಿತ್ರಮಂದಿರಗಳ ಪೂರ್ಣ ಭರ್ತಿಗೆ ಅವಕಾಶ ನೀಡದೇ ಇರುವುದನ್ನು ಖಂಡಿಸಿ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಘೋಷಿಸಿದ್ದಾರೆ.
Recommended Video
ರಾಜ್ಯದ ಚಿತ್ರಮಂದಿರಗಳು ಪೂರ್ಣ ಪ್ರಮಾಣದ ಸೀಟು ಸಾಮರ್ಥ್ಯವನ್ನು ಬಳಸಿ ಕಾರ್ಯನಿರ್ವಹಿಸಲು ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಬೇಕು, ಇಲ್ಲವಾದರೆ ರಾಜ್ಯದಾದ್ಯಂತ ಪ್ರತಿಭಟನೆ ಮಾಡುವುದಾಗಿ ವಾಟಾಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರದ್ದು ಒಂದು ನೀತಿ ರಾಜ್ಯ ಸರ್ಕಾರದ್ದು ಒಂದು ನೀತಿ ಎಂಬಂತಾಗಿದೆ. ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಯಾರು ಸಲಹೆ ನೀಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಕೂಡಲೇ ರಾಜ್ಯದಾದ್ಯಂತ ಎಲ್ಲ ಚಿತ್ರಮಂದಿರಗಳು ಪೂರ್ಣ ಪ್ರಮಾಣದ ಆಸನದ ಭರ್ತಿಗೆ ಅವಕಾಶ ನೀಡಲೇಬೇಕು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಏಕಾಂಗಿ ಉಪವಾಸ ಮಾಡುವುದಾಗಿ ಹೇಳಿದ ವಾಟಾಳ್
50% ಸೀಟು ಭರ್ತಿಗೆ ಮಾತ್ರವೇ ಅವಕಾಶ ನೀಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಶೀಘ್ರವೇ ಹಿಂಪಡೆಯದಿದ್ದರೆ ನಾಳೆ (ಫೆಬ್ರವರಿ 04) ಮಧ್ಯಾಹ್ನ 12 ಗಂಟೆಗೆ ಏಕಾಂಗಿ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.

ಹೊಸ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ
ಎಲ್ಲ ಚಿತ್ರಮಂದಿರಗಳು 100% ಆಸನ ಸಾಮರ್ಥ್ಯವನ್ನು ಬಳಸಿಕೊಂಡು ಕಾರ್ಯನಿರ್ವಹಿಸಬಹುದು ಎಂದು ಎರಡು ದಿನದ ಹಿಂದಷ್ಟೆ ಕೇಂದ್ರ ಸರ್ಕಾರ ಆದೇಶ ನೀಡಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರವು ಈ ತಿಂಗಳ ಅಂತ್ಯದ ವರೆಗೂ ರಾಜ್ಯದ ಎಲ್ಲ ಚಿತ್ರಮಂದಿರಗಳು, ಮಲ್ಟಿಫ್ಲೆಕ್ಸ್ಗಳು 50% ಆಸನ ವ್ಯವಸ್ಥೆಯಲ್ಲಿಯೇ ಕಾರ್ಯ ನಿರ್ವಹಿಸಬೇಕು ಎಂದು ಆದೇಶ ಹೊರಡಿಸಿದೆ.

ಹಲವು ನಟರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ
ರಾಜ್ಯ ಸರ್ಕಾರದ ಹೊಸ ಆದೇಶಕ್ಕೆ ಚಿತ್ರರಂಗದ ಗಣ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್, ಧ್ರುವ ಸರ್ಜಾ, ದುನಿಯಾ ವಿಜಯ್, ಧನಂಜಯ್, ಪ್ರಶಾಂತ್ ನೀಲ್, ಕಾರ್ತಿಕ್ ಗೌಡ ಇನ್ನೂ ಹಲವರು ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಮನರಂಜನೆಗಿಂತಲೂ ಆರೋಗ್ಯ ಮುಖ್ಯ: ಸುಧಾಕರ್
ಈ ಬಗ್ಗೆ ಮಾತನಾಡಿರುವ ಸಚಿವ ಸುಧಾಕರ್, 'ಚಿತ್ರಮಂದಿರಗಳು ಎಲ್ಲ ಕಡೆಯಿಂದಲೂ ಮುಚ್ಚಿದ (ಕ್ಲೋಸ್ಡ್) ಪ್ರದೇಶ, ಎಸಿ ಇರೋ ಜಾಗ. ಸೋಂಕು ಬಹಳ ಬೇಗನೆ ಹರಡುವ ಸಾಧ್ಯತೆ. ನಾನೊಬ್ಬ ಸಚಿವನಾಗಿ ಜವಾಬ್ದಾರಿ ಇದೆ. ನನಗೆ ಇಷ್ಟ ಬಂದಂತೆ ಆದೇಶ ಮಾಡಲು ಸಾಧ್ಯವಿಲ್ಲ. ತಾಂತ್ರಿಕ ಸಲಹಾ ಸಮಿತಿ ಸಲಹೆ ಪ್ರಕಾರ ನಾವು ಮಾರ್ಗಸೂಚಿ ಬಿಡುಗಡೆ ಮಾಡಿದ್ದೇವೆ. ಮನರಂಜನೆಗಿಂತಲೂ ಆರೋಗ್ಯ ಮುಖ್ಯ ಎಂದಿದ್ದಾರೆ. ಮತ್ತೊಬ್ಬ ಸಚಿವ ಬಿ.ಸಿ.ಪಾಟೀಲ್, 'ಚಿತ್ರಮಂದಿರಗಳಿಗೆ 100% ಸೀಟು ಸಾಮರ್ಥ್ಯ ಬಳಸಿಕೊಳ್ಳಲು ಅವಕಾಶ ಕೊಡಬೇಕು' ಎಂದಿದ್ದಾರೆ.


Click it and Unblock the Notifications











