ಬಿಟೌನ್ನಲ್ಲಿ ಮೊದಲ ಹೆಜ್ಜೆ: ಖುಷಿ ಹಂಚಿಕೊಂಡ ಪವನ್ ಒಡೆಯರ್
ಸ್ಯಾಂಡಲ್ವುಡ್ ನಿರ್ದೇಶಕ ಪವನ್ ಒಡೆಯರ್ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಪವನ್ ಒಡೆಯರ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಗೂಗ್ಲಿ ಚಿತ್ರದ ಮೂಲಕ ಜನಪ್ರಿಯತೆಗಳಿಸಿದ್ದರು. ಇದೀಗ ಪವನ್ ಒಡೆಯರ್ ಬಾಲಿವುಡ್ನಲ್ಲಿ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಪವನ್ ಒಡೆಯರ್ ನಿರ್ದೆಶನದ ಮೊದಲ ಬಾಲಿವುಡ್ ಚಿತ್ರಕ್ಕೆ 'ನೋಟರಿ' ಎಂದು ಶೀರ್ಷಿಕೆ ಇಡಲಾಗಿದೆ. ಇಂದಿನಿಂದ(ಅಕ್ಟೋಬರ್ 6)ರಿಂದ ಬಾಲಿವುಡ್ನಲ್ಲಿ 'ನೋಟರಿ' ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಇದೇ ಮೊದಲ ಬಾರಿ ಪವನ್ ಒಡೆಯರ್ ಬೇರೆ ಭಾಷೆ ನಟರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಈ ಖುಷಿಯ ವಿಚಾರವನ್ನು ಸ್ವತಃ ಪವನ್ ಒಡೆಯರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ನೋಟರಿ' ಸ್ಕ್ರಿಪ್ಟ್ನ ಮೊದಲ ಪುಟದ ಫೋಟೋ ಹಂಚಿಕೊಂಡಿರುವ ಪವನ್ ಒಡೆಯರ್, ಹೊಸ ಆರಂಭ, 'ನೋಟರಿ' ನನ್ನ ಮೊದಲ ಬಾಲಿವುಡ್ ಚಿತ್ರ ಎಂದು ಬರೆದುಕೊಂಡಿದ್ದಾರೆ. ಗೂಗ್ಲಿ ಚಿತ್ರದ ನಿರ್ದೇಶಕನ ಹೊಸ ಆರಂಭಕ್ಕೆ ಸಿನಿಮಾ ತಾರೆಯರು ಸೇರಿ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

'ನೋಟರಿ' ಚಿತ್ರದಲ್ಲಿ ಬೆಂಗಾಲಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಪರಂಬ್ರತ ಚಟ್ಟೋಪಾಧ್ಯಾಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುಳ್ಳು ಹೇಳಲ್ಲ ಎನ್ನುವ ಸಿದ್ಧಾಂತ ಹೊಂದಿರುವ ವ್ಯಕ್ತಿ ಸುಳ್ಳು ಹೇಳುವ ಪರಿಸ್ಥಿತಿಗೆ ಬಿದ್ದಾಗ ಹೇಗೆ ಚಡಪಡಿಸುತ್ತಾನೆ ಎನ್ನುವುದು ನೋಟರಿ ಚಿತ್ರದ ಕಥಾ ವಸ್ತು ಎಂದು ವರದಿಯಾಗಿದೆ. ಇನ್ನು ಈ ಚಿತ್ರದಲ್ಲಿ ಪರಂಬ್ರತಾ ಚಟ್ಟೋಪಾಧ್ಯಾಯ ಅವರಿಗೆ ಜೋಡಿಯಾಗಿ ಗೀತಾ ಬಸ್ರಾ ನಟಿಸುತ್ತಿದ್ದಾರೆ.
ಪವನ್ ಒಡೆಯರ್ 'ನೋಟರಿ' ಚಿತ್ರಕ್ಕೆ ತಾವೇ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಮುಂಬೈ ಮೂಲದ ತಶಾ ಭಂಬ್ರಾ ಹಾಗೂ ಸ್ಪರ್ಶ್ ಖೆಟರ್ ಪಾಲ್ ನೋಟರಿ ಸಿನಿಮಾಗೆ ಚಿತ್ರಕಥೆ ಬರೆದಿದ್ದು, ರೋಹಿತ್ ಕುಲಕರ್ಣಿ ಹಾಗೂ ಮೌಸಿನ್ ಜಾವೇದ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ನಿನ್ನೆ(ಅಕ್ಟೋಬರ್ 5) ವಿಜಯದಶಮಿಯ ವಿಶೇಷ ದಿನ ಸೆಟ್ಟೇರಿರುವ ಪವನ್ ಒಡೆಯರ್ ಮೊದಲ ಬಾಲಿವುಡ್ ಚಿತ್ರ 'ನೋಟರಿ' ಚಿತ್ರೀಕರಣ ಇಂದಿನಿಂದ ಆರಂಭವಾಗಿದೆ.
ಭೋಪಾಲ್ನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಪರಂಬ್ರತ ಚಟ್ಟೋಪಾಧ್ಯಾಯ, ಗೀತಾ ಬಸ್ರಾ, ದಲಿಪ್ ತಾಹಿಲ್,ಮನೋಜ್ ಜೋಶಿ,ಸಹರ್ಶ್ ಶುಕ್ಲಾ ಮತ್ತು ಮೋಹನ್ ಅಗಾಶೆ ಮೊದಲ ದಿನದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸುಮಾರು 20 ದಿನಗಳ ಕಾಲ ಭೋಪಾಲ್ನಲ್ಲಿ ಚಿತ್ರೀಕರಣ ನಡೆಯಲಿದ್ದು, ಬಳಿಕ ಮುಂಬೈನಲ್ಲಿ ನೋಟರಿ ಸಿನಿಮಾವನ್ನು ಚಿತ್ರೀಕರಿಸಲು ನಿರ್ದೇಶಕ ಪವನ್ ಒಡೆಯರ್ ಮುಂದಾಗಿದ್ದಾರೆ. ಒಟ್ಟಾರೆ ದೊಡ್ಡ ಮಟ್ಟದಲ್ಲಿ 'ನೋಟರಿ' ಸಿನಿಮಾವನ್ನು ತೆರೆ ಮೇಲೆ ತರಲು ಪವನ್ ಒಡೆಯರ್ ಹೆಜ್ಜೆ ಇಟ್ಟಿದ್ದಾರೆ.
ಸುಮಾರು ಒಂದು ದಶಕದಿಂದ ಕನ್ನಡ ಚಿತ್ರರಂಗಲ್ಲಿ ನಿರ್ದೇಶಕನಾಗಿ, ನಿರ್ಮಾಪಕನಾಗಿರುವ ಪವನ್ ಒಡೆಯರ್ ಅವರು ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಗೂಗ್ಲಿ', ಪವರ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ರಣವಿಕ್ರಮ', ನಟಸಾರ್ವಭೌಮ' ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಲ್ಲದೆ 'ಡೊಳ್ಳು' ಎನ್ನುವ ವಿಶೇಷ ಕಥಾಹಂದರ ಹೊಂದಿರುವ ಚಿತ್ರವನ್ನು ಪವನ್ ಒಡೆಯರ್ ನಿರ್ಮಾಣ ಮಾಡಿದ್ದಾರೆ. 'ಡೊಳ್ಳು' ಚಿತ್ರ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದು, 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ 'ಅತ್ಯುತ್ತಮ ಕನ್ನಡ ಸಿನಿಮಾ'ಪ್ರಶಸ್ತಿಗೆ ಪಾತ್ರವಾಗಿದೆ.
ನಿರ್ದೇಶನ ಹಾಗೂ ನಿರ್ಮಾಣ ಎರಡರಲ್ಲೂ ಸೈ ಎನಿಸಿಕೊಂಡಿರುವ ಪವನ್ ಒಡೆಯರ್ ಇತ್ತೀಚಿಗೆ ನಡೆದ ಆಸ್ಕರ್ ಪ್ರಶಸ್ತಿಗೆ ಚಿತ್ರಗಳ ಆಯ್ಕೆಯಲ್ಲಿ ತೀರ್ಪುಗಾರರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಪವನ್ ಒಡೆಯರ್ ನಿರ್ದೇಶಕನಾಗಿ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದ್ದಾರೆ.


Click it and Unblock the Notifications











