'ಪೆದ್ರೊ'ಗೆ ಅವಕಾಶ ನಿರಾಕರಿಸಿದ್ದು ಏಕೆ? ಸಿನಿಮೋತ್ಸವದಿಂದ ಹೊರಗುಳಿದ ಕನ್ನಡ ಸಿನಿಮಾಗಳಾವುವು?
ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವ ನಾಳೆ (ಮಾರ್ಚ್ 3)ರಂದು ಪ್ರಾರಂಭವಾಗಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ಈ ಸಿನಿಮೋತ್ಸವ ಆಗಾಗ್ಗೆ ವಿವಾದಗಳಿಗೂ ಕಾರಣವಾಗುವುದು ಮಾಮೂಲು.
ಈ ಬಾರಿಯೂ ಸಹ ಸಿನಿಮೋತ್ಸವ ಪ್ರಾರಂಭವಾಗುವ ಮುನ್ನವೇ ಸಿನಿಮೋತ್ಸವದ ಬಗ್ಗೆ ಟೀಕೆ ಎದುರಾಗಿದೆ. ಕನ್ನಡದ ಕೆಲ ಒಳ್ಳೆಯ ಸಿನಿಮಾಗಳನ್ನು ಸಿನಿಮೋತ್ಸವದಿಂದ ಹೊರಗಿಟ್ಟಿರುವುದನ್ನು ಕೆಲ ಸಿನಿಮಾ ಪ್ರೇಮಿಗಳು ಖಂಡಿಸಿದ್ದಾರೆ.
ಹಲವು ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರಶಸ್ತಿ, ಮನ್ನಣೆ ಪಡೆದಿರುವ ಕನ್ನಡ ಸಿನಿಮಾ 'ಪೆದ್ರೊ' ಈ ಬಾರಿಯ ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣುತ್ತಿಲ್ಲ. 'ಪೆದ್ರೊ' ಮಾತ್ರವಲ್ಲ ವಿದೇಶಿ ಸಿನಿಮೋತ್ಸವಗಳಲ್ಲಿ ಪ್ರದರ್ಶಿತಗೊಂಡ ಇನ್ನೂ ಕೆಲವು ಕನ್ನಡ ಸಿನಿಮಾಗಳಿಗೆ ನಮ್ಮದೇ ಅಂತರಾಷ್ಟ್ರೀಯ ಸಿನಿಮೋತ್ಸವದ ಬಾಗಿಲು ಮುಚ್ಚಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಯುವ ನಿರ್ದೇಶನಕ ನಟೇಶ ಹೆಗಡೆ ನಿರ್ದೇಶನದ 'ಪೆದ್ರೊ' ಸಿನಿಮಾಕ್ಕೆ ಸಿನಿಮೋತ್ಸವದಿಂದ ಹೊರಗೆ ಇಡಲಾಗಿದೆ. ''ಸಿನಿಮಾವು ಧಾರ್ಮಿಕ ಸೂಕ್ಷ್ಮ ವಿಚಾರಗಳ ಕತೆಯನ್ನು ಹೊಂದಿದೆ. ಹಾಗಾಗಿ ಸಿನಿಮಾವನ್ನು ಸಿನಿಮೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿಲ್ಲ'' ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹೇಳಿದ್ದಾರೆ. ಇದು 'ಪೆದ್ರೊ' ಚಿತ್ರತಂಡವನ್ನು ಹಾಗೂ ಸಿನಿಮಾ ಪ್ರೇಮಿಗಳನ್ನು ಇನ್ನಷ್ಟು ಕೆರಳಿಸಿದೆ.
ತಮ್ಮ ಸಿನಿಮಾವನ್ನು ಸಿನಿಮೋತ್ಸವದಲ್ಲಿ ಪ್ರದರ್ಶನ ಮಾಡದೇ ಇರುವ ಬಗ್ಗೆ ನಿರ್ಮಾಪಕ ರಿಷಬ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಪ್ರಕಟಿಸಿದ್ದು, ಇದು ಸಿನಿಮಾಕ್ಕೆ ಮಾಡಿದ ಅನ್ಯಾಯವವಲ್ಲ ಪ್ರೇಕ್ಷಕನಿಗೆ ಮಾಡಿದ ಅನ್ಯಾಯ. ಇಂಥಹಾ ಕಹಿಗುಳಿಗೆಗಳು ಆರೋಗ್ಯಕ್ಕೆ ಒಳ್ಳೆಯದು'' ಎಂದಿದ್ದಾರೆ. 'ಪೆದ್ರೊ' ನಿರ್ದೇಶಕ ನಟೇಶ ಹೆಗಡೆ ಸಹ ಸಿನಿಮಾ ಬಿಐಎಫ್ಎಫ್ನಲ್ಲಿ ಪ್ರದರ್ಶನಗೊಳ್ಳದೇ ಇರುವ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
'ಪೆದ್ರೊ' ಮಾತ್ರವೇ ಅಲ್ಲ ಕನ್ನಡದ 'ನೀಲಿ ಹಕ್ಕಿ' ಸಿನಿಮಾವನ್ನು ಸಹ ಆಯ್ಕೆ ಮಂಡಳಿಯು ಹೊರಗಿಟ್ಟಿದೆ. ಗಣೇಶ್ ಹೆಗಡೆ ನಿರ್ದೇಶನದ ಈ ಸಿನಿಮಾ ಸಹ ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್, ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವ, ಮೆಲ್ಬೋರ್ನ್ ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಆದರೆ ಬೆಂಗಳೂರು ಸಿನಿಮೋತ್ಸವದಿಂದ ಸಿನಿಮಾವನ್ನು ಹೊರಗಿಡಲಾಗಿದೆ. ಸಿನಿಮಾವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲು ಪಾಲಿಸಲಾಗುವ ಮಾನದಂಡಗಳೇನು? ಎಂದು ನಿರ್ದೇಶಕ ಗಣೇಶ್ ಹೆಗಡೆ ಪ್ರಶ್ನೆ ಮಾಡಿದ್ದಾರೆ.
ಬಿಎಂ ಗಿರಿರಾಜ್ ನಿರ್ದೇಶನದ 'ಕನ್ನಡಿಗ' ಸಿನಿಮಾವನ್ನು ಸಹ ಸಿನಿಮೋತ್ಸವದಿಂದ ಹೊರಗೆ ಇಡಲಾಗಿದೆ. ''ನಮ್ಮ ಚಿತ್ರ 'ಕನ್ನಡಿಗ' ವನ್ನೂ ಕೂಡ, biffes ಅವರ ಪ್ರದರ್ಶನ ಪಟ್ಟಿಯಿಂದ ಹೊರಗಿಟ್ಟಿದೆ. ಲಿಪಿಕಾರರ ಇತಿಹಾಸ, ಕನ್ನಡ ಕೃತಿಗಳ ಉಳಿವಿಗೆ ತ್ಯಾಗ ಮಾಡಿದವರ ಕಥನ ನೋಡಲು ಯೋಗ್ಯವಲ್ಲ ಅಂತ ನಿರ್ಧರಿಸಿದವರ ಹೊಟ್ಟೆ ತಣ್ಣಗಿರಲಿ. Zee 5 appಲ್ಲಿ ಕನ್ನಡಿಗ ಇದೆ. ಬಿಡುವು ಮಾಡಿಕೊಂಡು ನೋಡಿ'' ಎಂದು ಫೇಸ್ಬುಕ್ ಪೋಸ್ಟ್ ಹಾಕಿದ್ದಾರೆ ಗಿರಿರಾಜ್.
'ಪೆದ್ರೊ', 'ನೀಲಿ ಹಕ್ಕಿ' ಜೊತೆಗೆ 'ಕೋಳಿ ಕಾಲು' ಸಿನಿಮಾಕ್ಕೂ ವಿದೇಶಿ ಸಿನಿಮೋತ್ಸವಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು, ಆದರೆ ಆ ಸಿನಿಮಾವನ್ನೂ ಚಿತ್ರೋತ್ಸವದಿಂದ ಹೊರಗಿಡಲಾಗಿದೆ. 'ಪಿಂಕಿ ಎಲ್ಲಿ?' ಮತ್ತು 'ದಾರಿಯಾವುದಯ್ಯಾ ವೈಕುಂಠಕ್ಕೆ' ಸಿನಿಮಾಗಳು ಪ್ರದರ್ಶನಕ್ಕೆ ಅರ್ಹತೆ ಗಿಟ್ಟಿಸಿಕೊಂಡಿವೆ. ಸಿನಿಮೋತ್ಸವವು ಮಾರ್ಚ್ 3 ರಂದು ಉದ್ಘಾಟನೆಗೊಳ್ಳಲಿದೆ. ಮಾರ್ಚ್ 10 ಕ್ಕೆ ಅಂತ್ಯವಾಗಲಿದೆ.


Click it and Unblock the Notifications











