ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ: ಸುಮಲತಾ, ರಾಕ್ಲೈವ್ ವೆಂಕಟೇಶ್ ಮನೆಗೆ ಭದ್ರತೆ
ಸಂಸದೆ, ನಟಿ ಸುಮಲತಾ ಅಂಬರೀಶ್ ಹಾಗೂ ನಟ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮನೆಗೆ ಬಿಗಿ ಭದ್ರತೆಯನ್ನು ಬೆಂಗಳೂರು ಪೊಲೀಸರು ಒದಗಿಸಿದ್ದಾರೆ.
ಸುಮಲತಾ ಹಾಗೂ ರಾಕ್ಲೈನ್ ವೆಂಕಟೇಶ್ ಅವರು ನಿನ್ನೆ ಎಚ್.ಡಿ.ಕುಮಾರಸ್ವಾಮಿ ಕುರಿತಂತೆ ಹೇಳಿಕೆ ನೀಡಿದ್ದು, ಮಾಜಿ ಸಿಎಂ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಜೊತೆಗೆ ಸಿನಿಮೀಯ ರೀತಿಯಲ್ಲಿ ಎಚ್ಚರಿಕೆಯನ್ನೂ ಸಹ ರಾಕ್ಲೈವ್ ವೆಂಕಟೇಶ್ ನೀಡಿದ್ದಾರೆ.
ಸುಮಲತಾ ಅವರ ಬೆಂಗಳೂರಿನ ಮನೆಯ ಬಳಿ ನಲವತ್ತಕ್ಕೂ ಹೆಚ್ಚು ಪೊಲೀಸರು, ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಮಹಾಲಕ್ಷ್ಮಿ ಲೇಔಟ್ನಲ್ಲಿ ರಾಕ್ಲೈವ್ ವೆಂಕಟೇಶ್ ಮುಂದೆ ಪೊಲೀಸರು ಕಾವಲಿದ್ದಾರೆ. ರಾಕ್ಲೈವ್ ವೆಂಕಟೇಶ್ ಮನೆಗೆ ಹೋಗುವ ದಾರಿಯಲ್ಲಿ ಬ್ಯಾರಿಕೇಟ್ ಹಾಕಲಾಗಿದ್ದು ಹೋಗಿ ಬರುವ ವಾಹನಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಜೆಡಿಎಸ್ ಕಾರ್ಯಕರ್ತರು ಸುಮಲತಾ ಹಾಗೂ ರಾಕ್ಲೈನ್ ವೆಂಕಟೇಶ್ ಮನೆಯ ಮುಂದೆ ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ಹಾಗಾಗಿ ಇಬ್ಬರ ಮನೆಗೆ ಬಿಗಿ ಭದ್ರತೆಯನ್ನು ಪೊಲೀಸರು ಒದಗಿಸಿದ್ದಾರೆ. ರಾಕ್ಲೈನ್ ಮನೆಯ ಬಳಿ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರು, ಸುಮಲತಾ ಅಂಬರೀಶ್ ಹಾಗೂ ಅಂಬರೀಶ್ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದಕ್ಕೆ ಸಿಟ್ಟಿಗೆದ್ದಿದ್ದ ರಾಕ್ಲೈವ್ ವೆಂಕಟೇಶ್ ನಿನ್ನೆ ಮಾಧ್ಯಮಗಳೊಟ್ಟಿಗೆ ಮಾತನಾಡಿ, ''ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗಿದ್ದೇ ಕುಮಾರಸ್ವಾಮಿ. ಅವರು ತಮ್ಮ ದುರ್ಬುದ್ಧಿಯನ್ನು ಬಿಡಬೇಕು. ಇಂಥಹಾ ಕುತಂತ್ರಗಳು ಹೆಚ್ಚು ದಿನ ನಡೆಯುವುದಿಲ್ಲ. ಅಂಬರೀಶ್ ಬಗ್ಗೆ ಮಾತನಾಡಲು ಅವನ್ಯಾರು, ಅಂಬಿ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು'' ಎಂದಿದ್ದರು.
ಅಷ್ಟೇ ಅಲ್ಲದೆ, ಕುಮಾರಸ್ವಾಮಿ ಬಹಳ ಕೀಳೂ ಮಟ್ಟದ ರಾಜಕೀಯ ಮಾಡಿದ್ದರು, ''ನನ್ನ ಹಾಗೂ ಸುಮಲತಾ ನಡುವೆ ಸಬಂಧ ಕಲ್ಪಿಸಲು ಯತ್ನಿಸಿದ್ದರು'' ಎಂಬ ಗಂಭೀರ ಆರೋಪವನ್ನು ಸಹ ರಾಕ್ಲೈನ್ ವೆಂಕಟೇಶ್ ಮಾಡಿದ್ದರು.


Click it and Unblock the Notifications











