ಪ್ರಶಾಂತ್ ಸಂಬರಗಿಗೂ ಚಿತ್ರೋದ್ಯಮಕ್ಕೂ ಸಂಬಂಧವಿಲ್ಲ: ಸಾ.ರಾ.ಗೋವಿಂದು ಗರಂ
ಕನ್ನಡ ಚಿತ್ರರಂಗಕ್ಕೆ ಮಾದಕ ವಸ್ತು ಮಾಫಿಯಾ ನಂಟಿದೆ ಎಂಬ ಆರೋಪದ ಬಗ್ಗೆ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ವಾಗ್ದಾಳಿ ನಡೆಸಿದರು.
Recommended Video
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾ.ರಾ.ಗೋವಿಂದು, 'ಪ್ರಶಾಂತ್ ಸಂಬರಗಿ ಅವರನ್ನು ಚಿತ್ರೋದ್ಯಮಿ, ಚಿತ್ರಕರ್ಮಿ ಎಂದೆಲ್ಲಾ ಕರೆಯಬೇಡಿ, ಅವರಿಗೂ ಚಿತ್ರೋದ್ಯಮಕ್ಕೂ ಯಾವುದೇ ಅಧಿಕೃತ ಸಂಬಂಧ ಇಲ್ಲ, ಅವರು ಚಿತ್ರೋದ್ಯಮಕ್ಕೆ ಸೇರಿದವರಲ್ಲ' ಎಂದರು.
'ಪ್ರಶಾಂತ್ ಸಂಬರಗಿ, ಒಂದು ಸಿನಿಮಾ ಮಾಡಿಲ್ಲ, ವಿತರಣೆ ಮಾಡಿಲ್ಲ, ನಟಿಸಿಲ್ಲ ಯಾವುದೇ ಹಂತದಲ್ಲಿಯೂ ಅವರು ಚಿತ್ರೋದ್ಯಮದೊಂದಿಗೆ ತೊಡಗಿಸಿಕೊಂಡಿಲ್ಲ. ಹಾಗಾಗಿ ನಾವು ಅವರನ್ನು ಚಿತ್ರೋದ್ಯಮಿ ಎಂದು ಒಪ್ಪಿಕೊಂಡಿಲ್ಲ' ಎಂದರು ಸಾ.ರಾ.ಗೋವಿಂದು.

ಪ್ರಶಾಂತ್ ಸಂಬರಗಿಯನ್ನು ಚಿತ್ರೋದ್ಯಮಿ ಎನ್ನಬೇಡಿ: ಗೋವಿಂದು
ಪ್ರಶಾಂತ್ ಸಂಬರಗಿ ಅವರು ಒಬ್ಬ ಸಾಮಾಜಿಕ ಕಾರ್ಯಕರ್ತರಾಗಿ ಸಮಾಜದ ಒಳಿತನ್ನು ಗಮನದಲ್ಲಿಟ್ಟುಕೊಂಡು ಆರೋಪ ಮಾಡಿದ್ದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಅವರು ಚಿತ್ರರಂಗದವರು, ಚಿತ್ರೋದ್ಯಮ ಕುಟುಂಬಕ್ಕೆ ಸೇರಿದವರು ಎಂಬುದನ್ನು ಒಪ್ಪುವುದಿಲ್ಲ' ಎಂದು ಸ್ಪಷ್ಟಪಡಿಸಿದರು ಸಾ.ರಾ.ಗೋವಿಂದು.

ರಘು ದೀಕ್ಷಿತ್ ವಿರುದ್ಧ ಆರೋಪ ಮಾಡಿದ್ದ ಪ್ರಶಾಂತ್ ಸಂಬರಗಿ
ಟಿವಿಯಲ್ಲಿ ಕುಳಿತುಕೊಂಡು ಸಂಗೀತ ನಿರ್ದೇಶಕ ರಘು ದೀಕ್ಷಿತ್ ವಿರುದ್ಧ ಆರೋಪ ಮಾಡಿದರು. ಆದರೆ ಆರೋಪಕ್ಕೆ ಪ್ರತಿಕ್ರಿಯಿಸಿದ ರಘು ದೀಕ್ಷಿತ್, 'ನನಗೆ ಸಂಗೀತ ಬಿಟ್ಟರೆ ಬೇರೇನೂ ಗೊತ್ತಿಲ್ಲ' ಎಂದರು. ಪ್ರಶಾಂತ್ ಸಂಬರಗಿ ಮಾಡಿದ ಆರೋಪಗಳೆಲ್ಲವೂ ಸಾಬೀತಾಗಬೇಕಲ್ಲ. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ' ಎಂದರು ಸಾ.ರಾ.ಗೋವಿಂದು.

ಚಿತ್ರರಂಗಕ್ಕೆ ಪ್ರಶಾಂತ್ ಸಂಬರಗಿ ಕೊಡುಗೆ ಶೂನ್ಯ: ಸಾ.ರಾ.ಗೋವಿಂದು
ಕನ್ನಡ ಚಿತ್ರರಂಗಕ್ಕೆ ಪ್ರಶಾಂತ್ ಸಂಬರಗಿ ಕೊಡುಗೆ ಶೂನ್ಯ ಎಂದು ಖಾರವಾಗಿಯೇ ಹೇಳಿದ ಸಾ.ರಾ.ಗೋವಿಂದು, ಒಂದೊಮ್ಮೆ ಪ್ರಶಾಂತ್ ಸಂಬರಗಿ ಹಾಗೂ ಇತರರು ಮಾಡಿರುವ ಆರೋಪ ನಿಜವಾಗಿ ಆರೋಪಿಗಳಿಗೆ ಶಿಕ್ಷೆಯಾದರೆ ಒಳ್ಳೆಯದೇ, ಒಂದು ವೇಳೆ ಆರೋಪ ಸಾಬೀತಾಗದಿದ್ದರೆ ಸುಳ್ಳು ಆರೋಪ ಮಾಡಿದವರ ಮೇಲೂ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ' ಎಂದರು ಸಾ.ರಾ.ಗೋವಿಂದು.

ಮಾಧ್ಯಮಗಳಲ್ಲಿ ಚಿತ್ರೋದ್ಯಮದ ಬಗ್ಗೆ ಮಾತು
ಪ್ರಶಾಂತ್ ಸಂಬರಗಿ ಅವರಿಗೆ ನೇರವಾಗಿ ಚಿತ್ರರಂಗಕ್ಕೆ ಯಾವುದೇ ಸಂಬಂಧ ಇಲ್ಲ. ಆದರೆ ಅವರು ಹಲವು ಬಾರಿ ಚಿತ್ರರಂಗದ ಕುರಿತು ಮಾಧ್ಯಮಗಳಲ್ಲಿ ಮಾತನಾಡಿದ್ದಾರೆ. ಈ ಹಿಂದೆ ಅರ್ಜುನ್ ಸರ್ಜಾ ವಿರುದ್ಧ ಮೀ ಟೂ ಆರೋಪ ಕೇಳಿಬಂದಾಗಲೂ ಅವರು ಚರ್ಚೆಗಳಲ್ಲಿ ಭಾಗವಹಿಸಿದ್ದರು. ಈಗ ಚಂದನವನದ ಕೆಲವು ಕಲಾವಿದರಿಗೆ ಮಾದಕ ವ್ಯಸನವಿದೆ ಎಂದು ಹೇಳಿದ್ದಾರೆ. ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹೆಸರನ್ನು ಅವರು ತೆಗೆದುಕೊಂಡಿದ್ದರು.


Click it and Unblock the Notifications











