'ಲವ್ ಯೂ ರಚ್ಚು' ದುರಂತ: ಕೆ ಮಂಜು ಹೇಳಿಕೆಗೆ ನೆಟ್ಟಿಗರು ಗರಂ
'ಲವ್ ಯೂ ರಚ್ಚು' ಸಿನಿಮಾದ ದುರಂತ ಪ್ರಕರಣದ ನಂತರ ಭದ್ರತೆ ಬಗ್ಗೆ ಮತ್ತೊಮ್ಮೆ ಚರ್ಚೆಗಳು ಶುರುವಾಗಿದೆ. ಅಂದು 'ಮಾಸ್ತಿಗುಡಿ' ದುರಂತ ಸಂಭವಿಸಿದಾಗಲೇ ಇಂತಹದ್ದೇ ಚರ್ಚೆಗಳು ಹುಟ್ಟಿಕೊಂಡಿದ್ದವು. ಸಿನಿಮಾ ಚಿತ್ರೀಕರಣ ವೇಳೆ ಮುಂಜಾಗ್ರತೆ ವಹಿಸುವ ಬಗ್ಗೆ ವಾಣಿಜ್ಯ ಮಂಡಳಿ, ಒಕ್ಕೂಟದ ಸಂಘಟನೆಗಳು, ಕಾರ್ಮಿಕರು ಎಲ್ಲರೂ ಮಾತನಾಡಿದ್ದರು. ಬಹುಶಃ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ನಿಜವಾಗಲೂ ಮುಂಜಾಗ್ರತೆ ಬಗ್ಗೆ ಎಚ್ಚರಿಕೆ ವಹಿಸಿದ್ದೆ ಆಗಿದ್ದರೆ ಹೈಟೆನ್ಷನ್ ವೈರ್ ಕೆಳಗೆ ಶೂಟಿಂಗ್ ಮಾಡುತ್ತಿರಲಿಲ್ಲ.
Recommended Video
ಇತ್ತೀಚಿಗಷ್ಟೆ ಖಾಸಗಿ ಜಮೀನಿನಲ್ಲಿ ಶೂಟಿಂಗ್ ಮಾಡುವ ವೇಳೆ ಸಾಹಸ ಕಲಾವಿದ ವಿವೇಕ್ ಹೈಟೆನ್ಷನ್ ಕರೆಂಟ್ ವೈರ್ ತಗುಲಿ ಸಾವನ್ನಪ್ಪಿದ್ದರು. ಈ ಸಂಬಂಧ ಫೈಟ್ ಮಾಸ್ಟರ್ ವಿನೋದ್, ನಿರ್ದೇಶಕ ಶಂಕರ್ ಹಾಗೂ ಕ್ರೇನ್ ಆಪರೇಟರ್ನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಗೆ ರಾಮನಗರ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಘಟನೆ ಬಗ್ಗೆ ಅನೇಕರ ವಿಷಾದ ವ್ಯಕ್ತಪಡಿಸಿದ್ದು, ಚಿತ್ರೀಕರಣ ಸಂಬಂಧ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಈ ಕುರಿತು ನಿರ್ಮಾಪಕ ಕೆ ಮಂಜು ಪ್ರತಿಕ್ರಿಯೆ ನೀಡಿ, ''ಹಾದಿಯಲ್ಲಿ ಹೋಗೋರು ಬರೋರೆಲ್ಲಾ ಸಿನಿಮಾ ಮಾಡೋದ್ರಿಂದ ಇಂತಹ ಘಟನೆ ಆಗ್ತಿದೆ, ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿದೆ'' ಎಂದರು.
ಆಗಸ್ಟ್ 11 ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಅನುಮತಿ ನೀಡುವಂತೆ ಮನವಿ ಮಾಡಿದರು. ತಜ್ಞರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ 'ಲವ್ ಯೂ ರಚ್ಚು' ದುರಂತ ಬಗ್ಗೆ ಬಸವರಾಜ್ ಬೊಮ್ಮಾಯಿ ವಿಷಾದ ವ್ಯಕ್ತಪಡಿಸಿದರಂತೆ. ಮುಂದೆ ಓದಿ...

ನಿರ್ಮಾಪಕ ಕೆ ಮಂಜು ಹೇಳಿದ್ದೇನು?
ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೆ ಮಂಜು, ''ಸಿನಿಮಾ ಮಾಡಬೇಕು ಅಂದ್ರೆ ತರಬೇತಿ ಪಡೆದಿರಬೇಕು. ಹಾದಿಯಲ್ಲಿ ಹೋಗೋರು ಬರೋರು ಸಿನಿಮಾ ಮಾಡಿದ್ರೆ ಹಿಂಗೆ ಆಗೋದು. ಅದಕ್ಕೆ ಸಂಬಂಧಪಟ್ಟಂತೆ ಸಂಘಟನೆಯಿಂದ ಅಗತ್ಯ ಪ್ರಮಾಣಪತ್ರ ಕಡ್ಡಾಯ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಫಿಲಂ ಚೇಂಬರ್, ನಿರ್ಮಾಪಕರು, ಒಕ್ಕೂಟದವರು ಸೇರಿ ಯಾವ ರೀತಿ ನಿಯಮಗಳು ಇರಬೇಕು ಎಂದು ಚರ್ಚೆ ಮಾಡಿ ಸಿಎಂಗೆ ಕೊಡ್ತೇವೆ'' ಎಂದು ತಿಳಿಸಿದರು.

ಕೆ ಮಂಜು ಸಹ ಅದೇ ಹಾದಿಯಲ್ಲಿ ಬಂದವರು
ಹಾದಿಯಲ್ಲಿ ಹೋಗೋರೆಲ್ಲಾ ಸಿನಿಮಾ ಮಾಡ್ತಾರೆ ಎಂದು ಕೆ ಮಂಜು ಹೇಳಿದ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಕೆ ಮಂಜು ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳಲಿ. ಇದಕ್ಕೂ ಮುಂಚೆ ಅವರು ಸಹ ಅದೇ ಹಾದಿಯಲ್ಲಿ ಬಂದವರು ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೃತ ಕುಟುಂಬಕ್ಕೆ ಪರಿಹಾರ ಸಿಗಬೇಕು
ಇದೇ ವೇಳೆ ಮಾತು ಮುಂದವರಿಸಿದ್ದ ಕೆ ಮಂಜು 'ಮೃತ ವಿವೇಕ್ ಕುಟುಂಬಕ್ಕೆ ಪರಿಹಾರ ಸಿಗಬೇಕು. ಆ ನಿಟ್ಟಿನಲ್ಲಿ ಚರ್ಚೆ ಮಾಡಿ ಏನು ಮಾಡಬಹುದು ಎಂದು ನಿರ್ಧಾರ ಮಾಡಲಾಗುತ್ತದೆ' ಎಂದು ಮಾಹಿತಿ ನೀಡಿದರು. ಅದಾಗಲೇ 'ಲವ್ ಯೂ ರಚ್ಚು' ಸಿನಿಮಾದ ನಿರ್ಮಾಪಕ ಗುರುದೇಶಪಾಂಡೆ, ವಿವೇಕ್ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡುವುದಾಗಿ ಪ್ರಕಟಿಸಿದ್ದಾರೆ.

ಶೀಘ್ರದಲ್ಲಿ ಕಟ್ಟುನಿಟ್ಟಿನ ನಿಯಮ
ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳು ಜಾರಿಯಲ್ಲಿದೆ. ಆದರೆ ಅದನ್ನು ಸರಿಯಾಗಿ ಪಾಲನೆ ಮಾಡ್ತಿಲ್ಲ ಎಂದು ಸಿಎಂ ಬೇಸರ ವ್ಯಕ್ತಪಡಿಸಿದ್ದರು. ಈಗಿರುವ ನಿಯಮಗಳನ್ನು ಪರಿಷ್ಕರಿಸಿ ಅಂತಿಮ ಪಟ್ಟಿಯನ್ನು ತಯಾರಿಸಿ ಕೊಡಿ ಎಂದು ಫಿಲಂ ಚೇಂಬರ್ಗೆ ಸೂಚಿಸಲಾಗಿದೆ. ಈ ಸಂಬಂಧ ವಾಣಿಜ್ಯಮಂಡಳಿ, ಒಕ್ಕೂಟ, ನಿರ್ಮಾಪಕರು ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ. ಬಳಿಕ ಆ ನಿಯಮಗಳನ್ನು ಸರ್ಕಾರ ಅವಲೋಕಿಸಿ ಆದೇಶ ಮಾಡುತ್ತದೆ.


Click it and Unblock the Notifications











