ದರ್ಶನ್ 'ಕುರುಕ್ಷೇತ್ರ'ದ ಮೊದಲ ಪ್ರದರ್ಶನ ಹೀಗಿರುತ್ತದೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಚಿತ್ರ 'ಮುನಿರತ್ನ ಕುರುಕ್ಷೇತ್ರ'. ಈ ವರ್ಷಪೂರ್ತಿ ಈ ಚಿತ್ರದ ಬಿಡುಗಡೆಗಾಗಿ ಕಾದ ಅಭಿಮಾನಿಗಳಿಗೆ ಇದೀಗ ನಿರ್ಮಾಪಕ ಮುನಿರತ್ನ ಒಂದು ಸಿಹಿ ಸುದ್ದಿ ನೀಡಿದ್ದಾರೆ.
'ಸಿನಿಮಾವನ್ನು ಮೊದಲು ನಾನು ನೋಡಿ, ಅದು ನನಗೆ ತೃಪ್ತಿ ನೀಡಿದ ಮೇಲೆ ಬಿಡುಗಡೆಯ ದಿನಾಂಕ ಘೋಷಣೆ ಮಾಡುತ್ತೇನೆ' ಎಂದಿದ್ದ ಮುನಿರತ್ನ ಈಗ ಚಿತ್ರವನ್ನ ರಿಲೀಸ್ ಮಾಡುವ ನಿರ್ಧಾರ ಮಾಡಿದ್ದಾರೆ. ಅದರಲ್ಲಿಯೂ ಚಿತ್ರದ ಮೊದಲ ಪ್ರದರ್ಶನವನ್ನು ವಿಶೇಷವಾಗಿ ಆಯೋಜನೆ ಮಾಡಲಿದ್ದಾರೆ.
ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿ ನಡೆದ ರಂಗ ಸಪ್ತಾಹದ ಅಂತಿಮ ದಿನದಂದು ರಾಜರಾಜೇಶ್ವರಿ ನಗರ ವಿಧಾನ ಸಭಾದ ಕ್ಷೇತ್ರದ ಶಾಸಕ ಮತ್ತು ಖ್ಯಾತ ನಿರ್ಮಾಪಕರಾದ ಮುನಿರತ್ನ ಉಪಸ್ಥಿತರಿದ್ದರು. ಈ ವೇಳೆ 'ಕುರುಕ್ಷೇತ್ರ'ದ ಬಗ್ಗೆ ಅವರು ಮಾತನಾಡಿದ್ದಾರೆ. ಮುಂದೆ ಓದಿ....

ಜನವರಿಯಲ್ಲಿ 'ಕುರುಕ್ಷೇತ್ರ'
ಹೊಸ ವರ್ಷದಲ್ಲಿ ಮುನಿರತ್ನ 'ಕುರುಕ್ಷೇತ್ರ' ಚಿತ್ರ ತೆರೆಕಾಣಲಿದೆ. ಈ ವಿಚಾರವನ್ನು ಖುದ್ದು ಮುನಿರತ್ನ ಅವರೇ ಹೇಳಿದ್ದಾರೆ. ಈ ವರ್ಷದ ಕೊನೆಗೆ ಸಿನಿಮಾ ಬರಬಹುದು ಎಂಬ ಪ್ರೇಕ್ಷಕರ ಊಹೆ ಸುಳ್ಳಾಗಿದೆ. ಅಂತೂ ಸಿನಿಮಾ ತೆರೆಗೆ ಬರಲಿದ್ದು, ದರ್ಶನ್ ಅಭಿಮಾನಿಗಳಿಗೆ ಖುಷಿಯಾಗಿದೆ.

ಮೊದಲ ಪ್ರದರ್ಶನ ಹೀಗಿರುತ್ತದೆ
'ಕುರುಕ್ಷೇತ್ರ' ಬಿಡುಗಡೆಗೂ ಮೊದಲೇ ಒಂದು ವಿಶೇಷ ಪ್ರದರ್ಶನವನ್ನು ಅಭಿಮಾನಿಗಳಿಗಾಗಿ ಮಾತ್ರ ಏರ್ಪಡಿಸಲಾಗಿದೆಯಂತೆ. ತಾವೇ ಥಿಯೇಟರ್ ಬಾಡಿಗೆ ಕೊಟ್ಟು ಪ್ರದರ್ಶನಗೊಳಿಸಲು ಅವಕಾಶ ಕಲ್ಪಿಸುವುದಾಗಿ ಮುನಿರತ್ನ ತಿಳಿಸಿದ್ದಾರೆ. ಕೊಡಗಿಗಾಗಿ ನಡೆದ ರಂಗ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಈ ವಿಷಯ ಹಂಚಿಕೊಂಡಿದ್ದಾರೆ.

ಕೊಡಗಿಗೆ 'ಕುರುಕ್ಷೇತ್ರ'ದ ಕೊಡುಗೆ
ಕೊಡಗಿನಲ್ಲಿ ನಿರಾಶ್ರಿತರಾಗಿರುವವರಲ್ಲಿ ಹತ್ತು ಮಂದಿ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಶಿಕ್ಷಣ ಒದಗಿಸುವುದು ಸೇರಿದಂತೆ ಒಂದಷ್ಟು ಜವಾಬ್ದಾರಿಗಳನ್ನು ಖುದ್ದು ತೆಗೆದುಕೊಳ್ಳುವುದಾಗಿ ಮುನಿರತ್ನ ಹೇಳಿದರು. 'ಕುರುಕ್ಷೇತ್ರ'ದ ಮೊದಲ ಪ್ರದರ್ಶನಕ್ಕೆ ಟಿಕೆಟ್ ನಲ್ಲಿ ಸಂಗ್ರಹವಾದ ಪೂರ್ತಿ ಹಣವನ್ನು ಕೊಡಗಿನ ಉದ್ಧಾರಕ್ಕೆ ಬಳಸುತ್ತೇನೆ ಎಂದು ಮುನಿರತ್ನ ಸ್ಪಷ್ಟ ಪಡಿಸಿದರು.

ಸದ್ಯದಲ್ಲಿಯೇ ಹಾಡುಗಳು
'ಕುರುಕ್ಷೇತ್ರ' ಸಿನಿಮಾ ಜನವರಿಗೆ ಬಿಡುಗಡೆ ಆಗುವುದಾಗಿ ಮುನಿರತ್ನ ಹೇಳಿದ್ದು, ಅದಕ್ಕೂ ಮುಂಚೆ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆ ಆಗಬೇಕಿದೆ. ದರ್ಶನ್, ಅಂಬರೀಶ್, ಭಾರತಿ ವಿಷ್ಣುವರ್ಧನ್, ರವಿಚಂದ್ರನ್, ನಿಖಿಲ್ ಕುಮಾರ್, ಅರ್ಜುನ್ ಸರ್ಜಾ, ಸ್ನೇಹ, ಮೇಘನಾ ರಾಜ್ ಹೀಗೆ ಚಿತ್ರದಲ್ಲಿ ಅನೇಕ ಕಲಾವಿದರು ನಟಿಸಿದ್ದಾರೆ.


Click it and Unblock the Notifications











