ಪುನೀತ್ ಪುಣ್ಯ ಸ್ಮರಣೆ: ಅಭಿಮಾನಿಗಳಿಂದ ಕೇಶ ಮುಂಡನ, ಬಾಡೂಟ
ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಸಾಕಷ್ಟು ದಿನಗಳೇ ಕಳೆದಿವೆ. ಆದರೂ ಅವರ ನೆನಪುಗಳು ಅಭಿಮಾನಿಗಳಲ್ಲಿ ಇನ್ನೂ ಹಾಗೇ ಉಳಿದುಕೊಂಡಿದೆ. ಕುಟುಂಬ ಸದಸ್ಯರು ದುಃಖದ ಮಡುವಿನಲ್ಲೇ ದಿನದೂಡುತ್ತಿದ್ದಾರೆ. ಹಾಲು ತುಪ್ಪ ಕಾರ್ಯ, 11ನೇ ದಿನದ ಕಾರ್ಯ, ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಹೀಗೆ ಎಲ್ಲಾ ಕರ್ತವ್ಯಗಳನ್ನು ಮುಗಿಸಿರೋ ರಾಜ್ ಕುಟುಂಬ ಪುನೀತ್ ನೆನಪಿನಲ್ಲೇ ಜೀವನ ನಡೆಸುತ್ತಿದ್ದಾರೆ. ಆದರೆ, ಅಭಿಮಾನಿಗಳು ಮಾತ್ರ ಇನ್ನು ಪುನೀತ್ ಹೆಸರಿನಲ್ಲಿ ಏನೇನು ಒಳ್ಳೆ ಕೆಲಸ ಮಾಡಲು ಸಾಧ್ಯವೊ ಅದೆಲ್ಲವನ್ನೂ ಮಾಡುತ್ತಿದ್ದಾರೆ. ತಮ್ಮ ತಮ್ಮ ಊರುಗಳಲ್ಲಿ, ಗ್ರಾಮಗಳಲ್ಲಿ ಪುನೀತ್ ಸ್ಮರಣೆ ಕಾರ್ಯಕ್ರಮಗಳು ನಡೆಯುತ್ತಿದೆ. ಪುನೀತ್ ಶ್ರದ್ಧಾಂಜಲಿ ಹೆಸರಿನಲ್ಲಿ ಕಣ್ಣು ದಾನ, ದೇಹ ದಾನ, ರಕ್ತದಾನದಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೀಗ ಮಂಡ್ಯ ಜಿಲ್ಲೆಯ ಗ್ರಾಮವೊಂದರ ಜನರು ಅಪ್ಪು ಮೇಲಿನ ಅಭಿಮಾನ ಎಂತದ್ದು ಎಂದು ತೋರಿಸಿಕೊಟ್ಟಿದ್ದಾರೆ.
ಮಂಡ್ಯದ ಬಸವನಹಳ್ಳಿ ಗ್ರಾಮಸ್ಥರು ಇತ್ತೀಚೆಗೆ ಪುನೀತ್ ಪುಣ್ಯ ಸ್ಮರಣೆಯನ್ನು ಮಾಡಿದ್ದಾರೆ. ಈ ಸಂದರ್ಭದಲ್ಲಿ ಈಡೀ ಗ್ರಾಮಕ್ಕೆ ಗ್ರಾಮವೇ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಅಲ್ಲದೇ ಪುನೀತ್ ಅವರ ದೊಡ್ಡ ದೊಡ್ಡ ಬ್ಯಾನರ್ಗಳನ್ನು ಹಾಕಿ ಅದಕ್ಕೆ ಹೂವಿನ ಹಾರಗಳನ್ನು ಹಾಕಿ ಪೂಜೆ ಮಾಡಿದ್ದಾರೆ ಗ್ರಾಮಸ್ಥರು. ಇದೇ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ಗೆ ಎಡೆ ಕೂಡ ಇಟ್ಟಿದ್ದಾರೆ. ಪುನೀತ್ ಇಷ್ಟ ಪಟ್ಟು ತಿನ್ನುತ್ತಿದ್ದು, ಮುದ್ದೆ ಕೋಳಿ ಸಾರು, ಬಿರಿಯಾನಿ ಹಾಗೂ ಸಿಹಿ ಪದಾರ್ಥಗಳನ್ನು ಇಟ್ಟು ತಮ್ಮ ಅಭಿಮಾನ ಮೆರೆದಿದ್ದಾರೆ.
ಇದೇ ಗ್ರಾಮದಲ್ಲಿ ಸಾಕಷ್ಟು ಮಂದಿ ಪುನೀತ್ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ನೆಚ್ಚಿನ ನಟನ ಮೇಲಿರುವ ಅಭಿಮಾನದಿಂದ ಕೇಶ ಮುಂಡನೆ ಮಾಡಿಸಿಕೊಂಡಿದ್ದಾರೆ. ಪುನೀತ್ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳುತ್ತೇವೆ. ಅವರು ಹಾಕಿಕೊಟ್ಟ ದಾರಿಯಲ್ಲೇ ಅಭಿಮಾನಿಗಳಾದ ನಾವು ನಡೆಯುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಹಾಗೇ ಪುನೀತ್ ರೀತಿಯಲ್ಲೇ ಕಣ್ಣು ದಾನವನ್ನು ಮಾಡುವ ಬಗ್ಗೆ ಚಿಂತಿಸಿದ್ದೇವೆ ಎಂದಿದ್ದಾರೆ.

ಇಷ್ಟೆ ಅಲ್ಲದೇ ಗ್ರಾಮದ ಸುಮಾರು 2000 ಮಂದಿಗೆ ಬಾಡೂಟವನ್ನು ಕೂಡ ಬಡಿಸಿದ್ದಾರೆ. ಗ್ರಾಮಸ್ಥರೇ ಸೇರಿ ಕೂಡಿಸಿದ ಹಣದಲ್ಲಿ ಸುಮಾರು 2000 ಜನರಿಗೆ ಆಗುವಷ್ಟು ಬಾಡೂಟ ತಯಾರಿಸಿ ಬಡಿಸಿದ್ದಾರೆ. ಮುದ್ದೆ ನಾಟಿಕೋಳಿ ಸಾರು, ಬಿರಿಯಾನಿ, ಪಲಾವ್ ಮತ್ತು ಸಿಹಿ ತಿನಿಸುಗಳನ್ನು ಬಡಿಸಿದ್ದಾರೆ. ಸಸ್ಯಾಹಾರ ಮಾತ್ರ ತಿನ್ನುವವರಿಗೆ ಅನ್ನ ಸಾರು ವಡೆ ಮಾಡಿ ಬಡಿಸಿದ್ದಾರೆ ಗ್ರಾಮಸ್ಥರು.
ಈ ರೀತಿ ಪುನೀತ್ ಮೇಲಿನ ಪ್ರೀತಿ ವಿಶ್ವಾಸವನ್ನು ತೋರಿರುವ ಅಭಿಮಾನಿಗಳು ಪುನೀತ್ ಪುಣ್ಯಸ್ಮರಣೆಯನ್ನು ವಿಭಿನ್ನವಾಗಿ ಮಾಡಿದ್ದಾರೆ. ಅಲ್ಲದೇ ಪುನೀತ್ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಬಗ್ಗೆಯೂ ತಿಳಿಸಿದ್ದಾರೆ. ಇತ್ತ ಪುನೀತ್ ಕುಟುಂಬದವರು ಅಭಿಮಾನಿಗಳನ್ನು ಬಿಟ್ಟುಹಾಕಿಲ್ಲ. ಪುನೀತ್ರನ್ನು ಕಳೆದುಕೊಂಡಿರೋ ನೋವಿನಲ್ಲೂ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯ ಮಾಡಿದ್ದಾರೆ. ಬೆಂಗೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ 30,000ಕ್ಕೂ ಅಧಿಕ ಅಭಿಮಾನಿಗಳು ಸೇರಿದ್ದರು. ವೆಜ್ ಮತ್ತು ನಾನ್ವೆಜ್ ಊಟವನ್ನು ಪ್ರತ್ಯೇಕವಾಗಿ ಮಾಡಿಸಿದ್ದ ರಾಜ್ ಕುಟುಂಬ ಅಭಿಮಾನಿಗಳನ್ನು ತೃಪ್ತಿ ಪಡಿಸಿದ್ದಾರೆ. ಸ್ವತಃ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಊಟ ಬಡಿಸಿದ್ದಾರೆ. ಮಧ್ಯಾಹ್ನದಿಂದ ಸಂಜೆಯ ವರೆಗೂ ಅಭಿಮಾನಿಗಳೊಂದಿಗೆ ಕಾಲಕಳೆದ ದೊಡ್ಮನೆ ಕುಟುಂಬ ನೋವಿನಲ್ಲೂ ದೊಡ್ಡತನ ಮೆರೆದಿತ್ತು.

ಹೀಗೆ ಒಂದು ಕಡೆ ಅಭಿಮಾನಿಗಳು ಪುನೀತ್ ರಾಜ್ಕುಮಾರ್ ಮೇಲಿನ ಪ್ರೀತಿ ಗೌರವವನ್ನು ತೋರುತ್ತಿದ್ದರೆ, ಅತ್ತ ದೊಡ್ಮನೆ ಕುಟುಂಬ ಕೂಡ ಅಭಿಮಾನಿಗಳನ್ನು ಯಾವತ್ತೂ ಮರೆತಿಲ್ಲ, ಮರೆಯೋದು ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಆದರೇ ಪುನೀತ್ ಇನ್ನಿಲ್ಲ ಅನ್ನುವ ನೋವು ಸದಾ ಕಾಡಲಿದೆ ಎಂಬುದು ಮಾತ್ರ ಅಷ್ಟೇ ಸತ್ಯ.


Click it and Unblock the Notifications