'ಗಂಧದ ಗುಡಿ'ಗೆ ಮೊದಲು ಇದ್ದ ಹೆಸರು ಬೇರೆ: ಎಂಥ ದುಃಖಮಯ ಕಾಕತಾಳೀಯವಿದು
ಪುನೀತ್ ರಾಜ್ಕುಮಾರ್ ಅವರ ಕನಸಿನ ಪ್ರಾಜೆಕ್ಟ್ 'ಗಂಧದ ಗುಡಿ' ಬಿಡುಗಡೆ ಆಗಿ ರಾಜ್ಯದಾದ್ಯಂತ ಅದ್ಭುತ ಪ್ರದರ್ಶನ ಕಂಡಿದೆ. ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡುವ ಜೊತೆಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಸಹ ಟಿಕೆಟ್ ದರಗಳನ್ನು ಕಡಿಮೆ ಮಾಡಿದ ಕಾರಣ ರಾಜ್ಯದಾದ್ಯಂತ ಸಾವಿರಾರು ಮಂದಿ ವಿದ್ಯಾರ್ಥಿಗಳು ಸಿನಿಮಾ ನೋಡಿದ್ದಾರೆ. ಇನ್ನೂ ನೋಡುತ್ತಿದ್ದಾರೆ ಸಹ.
ರಾಜ್ಯದ ಪ್ರಕೃತಿ ಸೌಂದರ್ಯ, ಕಲೆ, ಸಂಸ್ಕೃತಿಯ ಪರಿಚಯ ಮಾಡಿಸುವ ಜೊತೆಗೆ ನಿಸರ್ಗದ ಮಹತ್ವ, ಅದನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇನ್ನಿತರೆ ವಿಷಯಗಳನ್ನು ಅಬ್ಬರವಿಲ್ಲದೆ ಸರಳವಾಗಿ ದಾಟಿಸುವ ಡಾಕ್ಯುಡ್ರಾಮಾ 'ಗಂಧದ ಗುಡಿ' ಆಗಿದೆ.
ಈ ಡಾಕ್ಯು ಡ್ರಾಮಾಕ್ಕೆ 'ಗಂಧದ ಗುಡಿ' ಎಂದು ಹೆಸರಿಟ್ಟಿರುವುದು ಅತ್ಯಂತ ಸೂಕ್ತವಾಗಿದೆ. ಆ ಸಿನಿಮಾದಲ್ಲಿಯೇ ಹೇಳಿರುವಂತೆ, ರಾಷ್ಟ್ರದ ಮೊದಲ ಅರಣ್ಯ ಸಂರಕ್ಷಣೆ ಕುರಿತಾದ ಸಿನಿಮಾ ಡಾ ರಾಜ್ಕುಮಾರ್ ನಟಿಸಿದ್ದ 'ಗಂಧದ ಗುಡಿ'ಗೆ ಗೌರವ ನೀಡಲೆಂದು ಈ ಡಾಕ್ಯುಡ್ರಾಮಾಕ್ಕೆ 'ಗಂಧದ ಗುಡಿ' ಎಂದು ಹೆಸರಿಡಲಾಗಿದೆ. ಆದರೆ ಈ ಪ್ರಾಜೆಕ್ಟ್ ಆರಂಭವಾದಾಗ ಇದಕ್ಕೆ ಬೇರೆಯದ್ದೇ ಹೆಸರಿತ್ತು.

'ಗಂಧದ ಗುಡಿ' ಬಿಹೈಂಡ್ ದಿ ಸೀನ್ಸ್
ಇದೀಗ ಪಿಆರ್ಕೆ ಆಡಿಯೋಸ್ ಯೂಟ್ಯೂಬ್ ಚಾನೆಲ್ನಲ್ಲಿ 'ಗಂಧದ ಗುಡಿ'ಯ ಮೇಕಿಂಗ್ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರಾಜೆಕ್ಟ್ನ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಸೇರಿದಂತೆ, 'ಗಂಧದ ಗುಡಿ' ಪಯಣದಲ್ಲಿ ಪುನೀತ್ ಜೊತೆಗಿದ್ದ ಅಮೋಘವರ್ಷ, ಕ್ಯಾಮೆರಾಮನ್, ಸಂಗೀತ ನಿರ್ದೇಶಕ ಇನ್ನೂ ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅಮೋಘವರ್ಷ, ಈ ಪ್ರಾಜೆಕ್ಟ್ಗೆ ಮೊದಲು ಇಟ್ಟಿದ್ದ ರೆಫರೆನ್ಸ್ ಹೆಸರು ಏನಾಗಿತ್ತು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

ಹೆಸರೇನೆಂದು ಇಟ್ಟಿದ್ದರು?
ಡಾಕ್ಯು ಡ್ರಾಮಾದ ಚಿತ್ರೀಕರಣ ಆರಂಭವಾದಾಗ ಇದಕ್ಕೆ ಇನ್ನೂ ಏನೆಂದು ಹೆಸರಿಟ್ಟಿರಲಿಲ್ಲವಂತೆ. ಆದರೆ ಚಿತ್ರೀಕರಣ ಮಾಡಲಾಗಿದ್ದ ಕೆಲವು ದೃಶ್ಯಗಳನ್ನು ಒಟ್ಟು ಮಾಡಿ ಪುನೀತ್ ರಾಜ್ಕುಮಾರ್ ಅವರಿಗೆ ಅಮೋಘವರ್ಷ ತೋರಿಸಿದ್ದರಂತೆ. ಅದರಲ್ಲಿ ಈ ಪ್ರಾಜೆಕ್ಟ್ಗೆ 'ಜರ್ನಿ ಟು ರಿಮೆಂಬರ್' ಎಂದು ಸುಮ್ಮನೆ ಹೆದರಿಟ್ಟಿದ್ದರಂತೆ. ಅದರ ಅರ್ಥ 'ನೆನಪಿಡುವಂಥಹಾ ಪ್ರಯಾಣ' ಅಥವಾ 'ಮರೆಯಬಾರದ ಪಯಣ' ಎಂದೂ ಭಾವಾರ್ಥ ಹೆಕ್ಕಿಕೊಳ್ಳಬಹುದು. ಸುಮ್ಮನೆ ಎಂದು 'ಜರ್ನಿ ಟು ರಿಮೆಂಬರ್' ಎಂದು ಹೆಸರಿಟ್ಟರೂ ಅಮೋಘವರ್ಷ ಹಾಗೂ ಅವರ ತಂಡಕ್ಕೆ ನಿಜಕ್ಕೂ ಅದು 'ಜರ್ನಿ ಟು ರಿಮೆಂಬರ್ ಆಗಿಬಿಟ್ಟಿತು.

ಅಪ್ಪು ಅದೃಷ್ಟದ ಬಗ್ಗೆ ಅಮೋಘವರ್ಷ ಮಾತು
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಸಮೇತವಾಗಿ 'ಗಂಧದ ಗುಡಿ'ಗಾಗಿ ಕೆಲಸ ಮಾಡಿದ ಹಲವರು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರಿಗೆ ಹುಲಿ ಕಂಡದ್ದು ಎಂಥಹಾ ಅದೃಷ್ಟ ಎಂದು ಅಮೋಘವರ್ಷ ಹೇಳಿದ್ದಾರೆ. ಸಾಮಾನ್ಯವಾಗಿ ಹುಲಿಗಳು ಅಷ್ಟು ಸುಲಭಕ್ಕೆ ಕಾಣುವುದಿಲ್ಲ. ಸ್ವತಃ ನಾನು ಆರು ವರ್ಷ ಕಾಡು ಸುತ್ತಿದ ಬಳಿಕ ಮೊದಲ ಬಾರಿ ಹುಲಿ ನೋಡಿದ್ದೆ. ಹುಲಿ ವೀಕ್ಷಣೆಗೆ ಹೋಗುವವರೂ ಸಹ ವಾರಾನುಗಟ್ಟಲೆ ಹುಲಿ ನೋಡಲು ಕಾಯುತ್ತಾರೆ. ಆದರೆ ಪುನೀತ್ ಅವರ ಅದೃಷ್ಟವೋ ಏನೋ ಪುನೀತ್ ಕಾಡಿಗೆ ಹೋದ ಮೊದಲ ದಿನವೇ ಅವರಿಗೆ ಹುಲಿ ಕಂಡು ಬಿಟ್ಟಿತು. ಕಾಡಿನಲ್ಲಿ ಹುಲಿ ಹಾಗೂ ಆನೆಯನ್ನು ನೋಡಬೇಕು ಎಂಬ ಅವರ ಆಸೆ ತೀರಿತು. ಎರಡೂ ಸಂದರ್ಭದಲ್ಲಿ ಅವರು ಬಹಳ ಎಕ್ಸೈಟ್ ಆಗಿದ್ದರು ಎಂದಿದ್ದಾರೆ ಅಮೋಘವರ್ಷ.

ಅಶ್ವಿನಿ ಪುನೀತ್ ರಾಜ್ಕುಮಾರ್ ಹೇಳಿದ್ದೇನು?
ಇನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಸಹ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದು, ಬಹಳ ಸಣ್ಣ ತಂಡದ ಜೊತೆ ಅವರು ಕಾಡಿನಲ್ಲಿ ಸುತ್ತುತ್ತಿದ್ದರು. ಪ್ರಾಜೆಕ್ಟ್ನ ನಡುವೆ ಅವರುಗಳು ಕಾಡಿನಲ್ಲಿ ತಡರಾತ್ರಿ ಓಡಾಡಬೇಕು, ಕಾಡಿನಲ್ಲಿ ಸ್ಟೇ ಮಾಡಬೇಕು ಎಂದೆಲ್ಲ ಹೇಳಿದಾಗ ನನಗೆ ಬಹಳ ಭಯವಾಗುತ್ತಿತ್ತು. ಆದರೆ ಅಪ್ಪುಗೆ ಈ ರೀತಿಯ ಸಾಹಸ, ಕಾಡು ಎಲ್ಲವೂ ಇಷ್ಟ, ಅವರೇ ಧೈರ್ಯ ಹೇಳುತ್ತಿದ್ದರು ಹಾಗೂ ಬಹಳ ಉತ್ಸಾಹದಿಂದ ಇದ್ದರು ಹಾಗಾಗಿ ನಾನು ಒಪ್ಪಿಕೊಂಡೆ. ಪ್ರತಿಬಾರಿ ಎಪಿಸೋಡ್ ಶೂಟ್ ಮುಗಿದ ಕೂಡಲೇ ನನಗೆ ಕಾಲ್ ಮಾಡಿ ಅಲ್ಲಿ ಏನಾಯಿತು ಹೇಗಾಯಿತು ಎಂದು ಉತ್ಸಾಹದಿಂದ ವಿವರಿಸುತ್ತಿದ್ದರು'' ಎಂದು ನೆನಪು ಮಾಡಿಕೊಂಡಿದ್ದಾರೆ.


Click it and Unblock the Notifications











