ನಿರ್ಮಾಪಕ ರಾಮು ನೆನೆದು ಭಾವುಕರಾದ ನಟ ಪುನೀತ್ ರಾಜ್ಕುಮಾರ್
ಕನ್ನಡದ ಖ್ಯಾತ ನಿರ್ಮಾಪಕ ರಾಮು ಅವರು ಇಂದು ಕೋವಿಡ್ನಿಂದಾಗಿ ನಿಧನ ಹೊಂದಿದ್ದಾರೆ. ಹಲವು ವರ್ಷಗಳಿಂದ ಕನ್ನಡ ಸಿನಿಮಾರಂಗದಲ್ಲಿ ಪ್ರಮುಖ ನಿರ್ಮಾಪಕರಾಗಿದ್ದ ರಾಮು ಅವರನ್ನು ಹಲವು ಸಿನಿಮಾ ಸೆಲೆಬ್ರಿಟಿಗಳು ನೆನಪಿಸಿಕೊಂಡಿದ್ದಾರೆ.
Recommended Video
ನಟ ಪುನೀತ್ ರಾಜ್ಕುಮಾರ್ ಅವರು ಮಾಧ್ಯಮದೊಟ್ಟಿಗೆ ಮಾತನಾಡುತ್ತಾ, 'ನನಗೆ ಏನು ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ. ರಾಮು, ಮಾಲಾಶ್ರಿ ಅವರುಗಳು ನಮ್ಮ ಕುಟುಂಬಕ್ಕೆ ಅತ್ಯಂತ ಆಪ್ತರಾಗಿದ್ದವು. ಅವರು ಇಲ್ಲ ಎಂಬ ಸುದ್ದಿ ಅರಗಿಸಿಕೊಳ್ಳಲಾಗುತ್ತಿಲ್ಲ' ಎಂದಿದ್ದಾರೆ.
'ರಾಮು ಅವರನ್ನು ನಾವು ಗಾಂಧಿ ನಗರದಲ್ಲಿ ಹಲವಾರು ವರ್ಷಗಳಿಂದ ನೋಡಿದ್ದೇವೆ. ಇಂದು ಅವರಿಲ್ಲ ಎಂದರೆ ಏನು ಹೇಳುವುದು ನನಗೆ ಅರ್ಥವಾಗುತ್ತಿಲ್ಲ. ಮಾಲಾಶ್ರಿ ಅವರಿಗೆ ಈ ನೋವು ಭರಿಸುವ ಶಕ್ತಿಯನ್ನು ಆ ದೇವರು ಕರುಣಿಸಬೇಕು' ಎಂದರು ಪುನೀತ್ ರಾಜ್ಕುಮಾರ್.

'ರಾಮು ಅತ್ಯಂತ ಮೃದುವಾಗಿ ಮಾತನಾಡುತ್ತಿದ್ದರು. ಬಹಳ ಸರಳ, ಸಜ್ಜನಿಕೆಯ ವ್ಯಕ್ತಿ ಅವರು. ಕೆಲಸದಲ್ಲಿ ಮಾತ್ರ ಬಹಳ ಗಟ್ಟಿಯಾಗಿರುತ್ತಿದ್ದರು. ಅವರನ್ನು ನೆನಪಿಸಿಕೊಂಡರೆ, 'ಭಾವ-ಭಾಮೈದ', 'ಎಕೆ-47' 'ಸಿಂಹದ ಮರಿ' ಇನ್ನೂ ಹಲವಾರು ಸಿನಿಮಾಗಳು ನೆನಪಾಗುತ್ತವೆ. ಶಿವಣ್ಣ ಹಾಗೂ ಅವರ ಕಾಂಬಿನೇಷನ್ನಲ್ಲಿ ಬಂದ ಸಿನಿಮಾಗಳೆಲ್ಲ ಹಿಟ್ ಆಗಿದ್ದವು. ರಾಮು ಅವರೊಟ್ಟಿಗಿನ ಹಳೆಯ ಘಟನೆಗಳೆಲ್ಲ ನೆನಪಾಗುತ್ತಿವೆ' ಎಂದರು ಪುನೀತ್ ರಾಜ್ಕುಮಾರ್.
'ನನ್ನ ಸಿನಿಮಾ 'ರಾಜಕುಮಾರ'ಕ್ಕೆ ರಾಮು ಅವರಿಂದ ದೊಡ್ಡ ಸಹಾಯ ಆಗಿತ್ತು. 'ರಾಜಕುಮಾರ' ಟೈಟಲ್ ರಾಮು ಅವರ ಬಳಿ ಇತ್ತು. ನಾವು ಕೇಳಿದ ಕೂಡಲೇ ಟೈಟಲ್ ಬಿಟ್ಟುಕೊಟ್ಟರು. ಸಿನಿಮಾಕ್ಕಾಗಿ ಯಾವ ತ್ಯಾಗಕ್ಕೂ ತಯಾರಿದ್ದರು ರಾಮು' ಎಂದು ಹೇಳಿದರು.
'ಅವರಿಗಿನ್ನೂ 52 ವರ್ಷವಷ್ಟೆ ವಯಸ್ಸು. ದಯವಿಟ್ಟು ಕೊರೊನಾ ಅನ್ನು ಯಾರೂ ನಿರ್ಲಕ್ಷ್ಯ ಮಾಡಬೇಡಿ. ಆಸ್ಪತ್ರೆಗಳಲ್ಲಿ ಬೆಡ್ಗಳಿಲ್ಲ, ಆಮ್ಲಜನಕದ ಕೊರತೆ ಇದೆ, ಭ್ರಷ್ಟಾಚಾರ ನಡೆಯುತ್ತಿದೆ ಎಲ್ಲವನ್ನೂ ಕೇಳುತ್ತಿದ್ದೇವೆ. ಹೀಗಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಮೊದಲು ವ್ಯಾಕ್ಸಿನ್ ತೆಗೆದುಕೊಳ್ಳಿ' ಎಂದು ಮನವಿ ಮಾಡಿದ್ದಾರೆ ಪುನೀತ್ ರಾಜ್ಕುಮಾರ್.


Click it and Unblock the Notifications











