ಹಿಂದೆಂದೂ ಕಂಡಿರದ ಪಾತ್ರದಲ್ಲಿ ರಮ್ಯಾ- ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ರಾಜ್.ಬಿ.ಶೆಟ್ಟಿ
ಸ್ಯಾಂಡಲ್ವುಡ್ ಕ್ವೀನ್, ಮೋಹಕ ತಾರೆ ರಮ್ಯಾ ನಟನೆಗೆ ವಾಪಸ್ ಆಗುತ್ತಿರುವುದು ಅಭಿಮಾನಿಗಳಿಗೆ ಸಂತಸದ ವಿಚಾರ. ನಿರ್ಮಾಪಕಿಯಾಗಿ ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಎಂದಿದ್ದ ರಮ್ಯಾ, ಎಲ್ಲರ ಊಹೆಗೂ ಮೀರಿ ಸಪ್ರೈಸ್ ಕೊಟ್ಟಿದ್ದಾರೆ. 'ನಾಗರ ಹಾವು' ಚಿತ್ರದ ಬಳಿಕ ಚಿತ್ರರಂಗದಿಂದ ದೂರ ಸರಿದಿದ್ದ ರಮ್ಯಾ ಇದೀಗ ಮತ್ತೆ ನಾಯಕಿಯಾಗಿ ಬೆಳ್ಳಿ ತೆರೆ ಮೇಲೆ ಮಿಂಚಲು ಸಜ್ಜಾಗುತ್ತಿದ್ದಾರೆ.
ರಾಜಕೀಯ ಜೀವನದಿಂದ ಅಂತರ ಕಾಯ್ದುಕೊಂಡ ಬಳಿಕ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಕನ್ನಡ ಚಿತ್ರರಂಗದ ಅನೇಕ ಚಿತ್ರಗಳಿಗೆ ಬೆಂಬಲ ನೀಡುತ್ತಿದ್ದರು. ಹೊಸ ಚಿತ್ರಗಳ ಟ್ರೈಲರ್, ಪೋಸ್ಟರ್ಗಳನ್ನು ಶೇರ್ ಮಾಡುತ್ತಾ ಸಪೋರ್ಟ್ ಮಾಡುತ್ತಿದ್ದ ರಮ್ಯಾ, ಕೆಲವೊಂದು ಚಿತ್ರಗಳಿಗೆ ವಿಮರ್ಶೆ ಕೂಡ ಬರೆಯುತ್ತಿದ್ದರು. ಇತ್ತೀಚಿಗೆ ತೆರೆ ಕಂಡ ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ಚಿತ್ರದ ಬಗ್ಗೆಯೂ ರಮ್ಯಾ ವಿಮರ್ಶೆ ಬರೆದಿದ್ದರು.
ಬೇರೆಯವರ ಚಿತ್ರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದ ಮೋಹಕ ತಾರೆಯ ಬಳಿ ಅಭಿಮಾನಿಗಳು ಮತ್ತೆ ಚಿತ್ರಗಳಲ್ಲಿ ನಟಿಸುವಂತೆ ಮನವಿ ಮಾಡುತ್ತಿದ್ದರು. ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿರುವ ರಮ್ಯಾ ಎರಡು ಚಿತ್ರಗಳಿಗೆ ಬಂಡವಾಳ ಹಾಕುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಆದರೆ ರಮ್ಯಾ ಇದೀಗ ಮತ್ತೆ ಬಣ್ಣ ಹಚ್ಚುತ್ತಿರುವುದು ಅಭಿಮಾನಿಗಳ ಸಂತಸವನ್ನು ದುಪ್ಪಟ್ಟು ಮಾಡಿದೆ.

ಸ್ವಾತಿ ಮುತ್ತಿನ ಮಳೆ ಹನಿಯೇ ಮೂಲಕ ರಮ್ಯಾ ಕಂಬ್ಯಾಕ್
ರಮ್ಯಾ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲಕ್ಕೆ ಈಗಾಗಲೇ ತೆರೆ ಬಿದ್ದಿದೆ. ಗರುಡ 'ಗಮನ ವೃಷಭ ವಾಹನ' ಖ್ಯಾತಿಯ ರಾಜ್.ಬಿ. ಶೆಟ್ಟಿ ನಟನೆಯ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದಲ್ಲಿ ನಟಿಸಲು ರಮ್ಯಾ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ರಮ್ಯಾ ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಹಂಚಿಕೊಂಡಿದ್ದರು. ರಾಜ್.ಬಿ.ಶೆಟ್ಟಿ ಅವರ ಲೈಟರ್ ಬುದ್ಧ ಫಿಲ್ಮ್ಸ್ ಹಾಗೂ ರಮ್ಯಾ ಅವರ ಆಪಲ್ ಬಾಕ್ಸ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸುತ್ತಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಬಹಳ ಕುತೂಹಲವಿದೆ. ಈ ಬಗ್ಗೆ ರಾಜ್.ಬಿ.ಶೆಟ್ಟಿ ಮಾತನಾಡಿದ್ದಾರೆ.

ಕತೆಗೆ ತಕ್ಕ ಹೆಸರು 'ಸ್ವಾತಿ ಮುತ್ತಿನ ಮಳೆ ಹನಿಯೇ'
ಇತ್ತೀಚಿಗೆ ನಡೆದ ಸಂದರ್ಶವೊಂದರಲ್ಲಿ ಮಾತನಾಡಿದ ರಾಜ್.ಬಿ.ಶೆಟ್ಟಿ, ನಾವೆಲ್ಲ ಹಂಸಲೇಖ ಅವರ ಹಾಡುಗಳನ್ನು ಕೇಳಿಕೊಂಡೆ ಬೆಳೆದವರು. ಅವರ ಹಾಡುಗಳನ್ನು ಕೇಳುತ್ತಿದ್ದಂತೆ ನಮ್ಮ ಮನಸ್ಸಿನಲ್ಲಿ ಎನೋ ಆಗುತ್ತದೆ. ಅದರ ಬಗ್ಗೆ ವಿವರಣೆ ನೀಡುವುದು ಕಷ್ಟ. ಅವರ ಸಾಹಿತ್ಯದ ಒಂದೇ ಲೈನ್ಗೆ ಆ ಶಕ್ತಿ ಇದೆ. 'ಸ್ವಾತಿ ಮುತ್ತಿನ ಮಳೆ ಹನಿಯೇ' ಶೀರ್ಷಿಕೆ ರೊಮ್ಯಾಂಟಿಕ್ ಆಗಿದೆ. ಜೊತೆಗೆ ನಮ್ಮೊಳಗಿರುವ ಹಳೆ ನೆನಪುಗಳನ್ನು ಮರುಕಳಿಸುತ್ತದೆ. ಅದರ ಜೊತೆಗೆ ಈ ಸಿನಿಮಾದಕ್ಕೂ ಆ ಹೆಸರಿಗೂ ತುಂಬಾ ದೊಡ್ಡ ಸಂಬಂಧವಿದೆ ಅನಿಸಿತ್ತು. ಹೀಗಾಗಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಟೈಟಲ್ ಆಯ್ಕೆ ಮಾಡಿಕೊಂಡಿದ್ದೇನೆ. ಈ ಕತೆಗೆ ಅದೇ ಸೂಕ್ತವಾದ ಹೆಸರೆನಿಸಿತು ಎಂದರು.

ಹಿಂದಿನ ಸಿನಿಮಾಗಳಂತಿಲ್ಲ 'ಸ್ವಾತಿ ಮುತ್ತಿನ ಮಳೆ ಹನಿಯೇ'
ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾತನಾಡಿದ ಅವರು, 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಬರೆಯುತ್ತಿದ್ದೇನೆ. ಸದ್ಯ ಸಿನಿಮಾ ಯಾವ ರೀತಿ ಇರುತ್ತದೆ ಎನ್ನುವುದು ನನಗೂ ಗೊತ್ತಿಲ್ಲ. ನನಗೂ ಅದೇ ಸಪ್ರೈಸ್. ಆದರೆ ನಾನು ಇಲ್ಲಿ ತನಕ ಎರಡು ಸಿನಿಮಾಗಳನ್ನು ಮಾಡಿದ್ದೇನೆ. ಆ ಎರಡು ಸಿನಿಮಾಗಳಂತೆ ಮುಂದಿನ ಸಿನಿಮಾ ಇಲ್ಲ. 'ಸ್ವಾತಿ ಮುತ್ತಿನ ಮಳೆ ಹನಿಯೇ' ನಾನು ಇಲ್ಲಿಯವರೆಗೂ ಪ್ರಯತ್ನ ಪಡದ ಬೇರೆ ರೀತಿಯ ಸಿನಿಮಾ. ಹಾಗಾಗಿ ನನ್ನ ಕೈಯಲ್ಲಿ ಆದ ಮಟ್ಟಿಗೆ ಪ್ರಯತ್ನ ಮಾಡುತ್ತೇನೆ ಎಂದು ಚಿತ್ರದ ಬಗ್ಗೆ ಭರವಸೆ ಮೂಡಿಸಿದರು.

ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ರಮ್ಯಾ
ಮೋಹಕ ತಾರೆ ರಮ್ಯಾ ಜೊತೆ ಸಿನಿಮಾ ಮಾಡುತ್ತಿರುವ ಬಗ್ಗೆ ಮಾತನಾಡಿದ ರಾಜ್.ಬಿ ಶೆಟ್ಟಿ, ಕ್ಯಾಮರಾ ಇಟ್ಟರೂ ರಮ್ಯಾ ಅವರು ಚೆನ್ನಾಗಿಯೇ ಕಾಣಿಸಿಕೊಳ್ಳುತ್ತಾರೆ. ಈವರೆಗೂ ರಮ್ಯಾ ಮಾಡದೇ ಇರುವ ಪಾತ್ರ ಇದು. ಸ್ವಾತಿ ಮುತ್ತಿನ ಮಳೆ ಹನಿಯೇ ಖಂಡಿತವಾಗಿಯೂ ಒಂದು ಮಹಿಳಾ ಪ್ರಧಾನ ಸಿನಿಮಾ. ರಮ್ಯಾ ನಿಜ ಜೀವನದಲ್ಲಿ ಹೇಗಿದ್ದಾರೆ. ನಿಜ ಜೀವನದಲ್ಲಿಯೂ ಅವರು ನಾಯಕಿ. ಹೀಗಾಗಿ ಅವರಿದ್ದಾಗ ನಾವು ಸೈಡ್ನಲ್ಲಿ ನಿಲ್ಲಲೇ ಬೇಕು. ನೂರಕ್ಕೆ ನೂರು ಇದು ಮಹಿಳಾ ಪ್ರಧಾನ ಸಿನಿಮಾ ಎಂದು ತಮ್ಮ ಚಿತ್ರದ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡರು.


Click it and Unblock the Notifications











