ಅಪ್ಪುಗೆ ಕರ್ನಾಟಕ ರತ್ನ ನೀಡಲು ಆಗಮಿಸುತ್ತಿದ್ದಾರೆ ಇಬ್ಬರು ಸೂಪರ್ ಸ್ಟಾರ್: ಸಿಎಂ ಘೋಷಣೆ
ಪುನೀತ್ ರಾಜ್ಕುಮಾರ್ ಅವರಿಗೆ ಗೌರವಾನ್ವಿತ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಈ ಹಿಂದೆಯೇ ಘೋಷಿಸಿದೆ. ಪ್ರಶಸ್ತಿ ಪ್ರದಾನವನ್ನು ನವೆಂಬರ್ 1 ರ ರಾಜ್ಯೋತ್ಸವ ದಿನದಂದು ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಇಬ್ಬರು ಸೂಪರ್ ಸ್ಟಾರ್ಗಳನ್ನು ಸರ್ಕಾರ ಅತಿಥಿಗಳಾಗಿ ಆಹ್ವಾನಿಸಿದೆ.
ನೆರೆಯ ಚಿತ್ರರಂಗದ ಆದರೆ ಅಪ್ಪುಗೆ ಅತಿಯಾಗಿ ಆತ್ಮೀಯರಾಗಿದ್ದ ನಟ ಜೂ ಎನ್ಟಿಆರ್ ಹಾಗೂ ದೊಡ್ಮನೆ ಕುಟುಂಬದ ಆಪ್ತ, ಹಿತೈಷಿ ರಜನೀಕಾಂತ್ ಅವರುಗಳನ್ನು ಸರ್ಕಾರವು ಅತಿಥಿಗಳಾಗಿ ಅಧಿಕೃತವಾಗಿ ಆಹ್ವಾನಿಸಿದೆ. ಇಬ್ಬರೂ ನಟರು, ಸರ್ಕಾರದ ಆಹ್ವಾನ ಮನ್ನಿಸಿ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ದಟ್ಟವಾಗಿದೆ.
ಗುರುವಾರ ಸಭೆ ನಡೆಸಿ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ''ರಜನಿಕಾಂತ್ ಮುಖ್ಯ ಅತಿಥಿಯಾಗಿ ಆಗಮಿಸುವುದಕ್ಕೆ ಸಮ್ಮತಿಸಿದ್ದು, ಇನ್ನೇನು ಅನುಮತಿ ಪತ್ರವನ್ನು ನೀಡುವುದೊಂದು ಬಾಕಿ ಉಳಿದಿದೆ. ಅದೇ ರೀತಿ ಕನ್ನಡವನ್ನು ಬಲ್ಲವರಾದ ಜೂನಿಯರ್ ಎನ್ಟಿಆರ್ ಕೂಡ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ'' ಎಂದಿದ್ದಾರೆ.

ನವೆಂಬರ್ 1ರಂದು ಸಂಜೆ 4ಗಂಟೆಗೆ ಕಾರ್ಯಕ್ರಮ
''ನವೆಂಬರ್ 1ರಂದು ಸಂಜೆ 4ಗಂಟೆಗೆ ವಿಧಾನಸೌಧ ಮುಂಭಾಗ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ನೆಚ್ಚಿನ ನಟ ಪುನೀತ್ ಸ್ಮರಣಾರ್ಥ ಸಮಾರಂಭದಲ್ಲಿ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಿಸಲಾಗಿತ್ತು. ಅದರಂತೆ ರಾಜ್ಯೋತ್ಸವದಂದು ನೀಡಲಾಗುತ್ತಿದೆ'' ಎಂದು ವಿವರಿಸಿದ್ದಾರೆ.

ತೆರಿಗೆ ವಿನಾಯಿತಿ ಘೋಷಿಸಿದ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ ಅವರು, ಪುನೀತ್ ಅವರ ಆತ್ಮೀಯರಾಗಿದ್ದರು. ಅಪ್ಪು ಕಾಲವಾದಾಗಲೂ ಸಹ ಸಿಎಂ ಖುದ್ದು ನಿಂತು ಅಂತಿಮ ದರ್ಶನದ ವ್ಯವಸ್ಥೆಯನ್ನು ಆ ಬಳಿಕ ಅಂತಿಮ ಸಂಸ್ಕಾರವನ್ನು ವ್ಯವಸ್ಥಿತವಾಗಿ ಮುಗಿಸಿಕೊಟ್ಟಿದ್ದರು. ಬಳಿಕ ಅಪ್ಪುಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದರು. 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಮರಣೋತ್ತರವಾಗಿ ಘೋಷಿಸಿದರು. ಕಳೆದ ವಾರ ನಡೆದ 'ಪುನೀತ ಪರ್ವ' ಕಾರ್ಯಕ್ರಮದಲ್ಲಿಯೂ ಹಾಜರಿದ್ದ ಬಸವರಾಜ ಬೊಮ್ಮಾಯಿ, ಪುನೀತ್ ಅವರ ಕನಸಿನ ಪ್ರಾಜೆಕ್ಟ್ 'ಗಂಧದ ಗುಡಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ಸಹ ಘೋಷಿಸಿದರು.

ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿದ್ದ ರಜನೀಕಾಂತ್
ಅಪ್ಪು ನಿಧನ ಹೊಂದಿದಾಗ ರಜನೀಕಾಂತ್ ಸಹ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದರು. ಆ ನಂತರ ಆರೋಗ್ಯ ಸಮಸ್ಯೆ ಹಾಗೂ ಇತರ ಸಮಸ್ಯೆಗಳಿಂದಾಗಿ ಅವರು ಅಪ್ಪು ಅಂತಿಮ ದರ್ಶನಕ್ಕಾಗಲಿ, ಇತರೆ ಕಾರ್ಯಕ್ರಮಗಳಿಗಾಗಲಿ ಬರಲಾಗಿರಲಿಲ್ಲ. ಆದರೆ ಈಗ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಲು ಬರುತ್ತಿರುವುದು ಅಪ್ಪು ಅಭಿಮಾನಿಗಳಿಗೆ ಖುಷಿಯ ವಿಚಾರ. ಕಾರ್ಯಕ್ರಮದಂದು ರಜನೀಕಾಂತ್ ಏನು ಮಾತನಾಡುತ್ತಾರೆ ಎಂದು ಕಾದು ನೋಡಬೇಕಿದೆ.

ಅಪ್ಪು-ಜೂ ಎನ್ಟಿಆರ್ ಗೆಳೆತನ
ಇನ್ನು ಜೂ.ಎನ್ಟಿಆರ್ ಹಾಗೂ ಪುನೀತ್ ರಾಜ್ಕುಮಾರ್ ಗೆಳೆತನದ ಬಗ್ಗೆ ಹೊಸದಾಗಿ ವಿವರಿಸುವ ಅಗತ್ಯವಿಲ್ಲ. ಅಪ್ಪುಗಾಗಿ 'ಗೆಳೆಯ-ಗೆಳೆಯ' ಹಾಡನ್ನು ಜೂ ಎನ್ಟಿಆರ್ ಹಾಡಿದ್ದರು. ಅಪ್ಪು ಸಮಾಧಿಗೆ ಭೇಟಿ ನೀಡಿ ಕಣ್ಣೀರಾಗಿದ್ದರು. ಬೆಂಗಳೂರಿಗೆ ಬಂದಾಗಲೆಲ್ಲ ಅಪ್ಪುವನ್ನು ನೆನಪಿಸಿಕೊಳ್ಳದೆ ಮಾತನಾಡಿದ್ದಿಲ್ಲ ಜೂ ಎನ್ಟಿಆರ್. ಇದೀಗ ಗೆಳೆಯನಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲು ಮತ್ತೊಮ್ಮೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.


Click it and Unblock the Notifications











