ರಾಜ್ ಸ್ಮಾರಕ: ರಜನಿ, ಚಿರು ಬರೋದು ಖಚಿತ
ನವೆಂಬರ್ 29 ರಂದು ಕರ್ನಾಟಕದಲ್ಲಿ ಅಕ್ಷರಶಃ ಕರುನಾಡ ಹಬ್ಬ. ನಟಸಾರ್ವಭೌಮ ಡಾ.ರಾಜ್ ಕುಮಾರ್ ಸ್ಮಾರಕ ಲೋಕಾರ್ಪಣೆಗೆ ಉಳಿದಿರುವುದು ಇನ್ನೆರಡು ದಿನಗಳು ಮಾತ್ರ. ಕೋಟ್ಯಂತರ ಕನ್ನಡಾಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಅದ್ಭುತ ಕ್ಷಣವನ್ನ ಅಚ್ಚಳಿಯದಂತೆ ನೆನಪಿನಲ್ಲಿಡುವುದಕ್ಕೆ ಸಕಲ ಸಿದ್ಧತೆಗಳು ರಂಗೇರುತ್ತಿವೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸರ್ಕಾರದ ವತಿಯಿಂದ ಶನಿವಾರ ಸಂಜೆ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ. ಕಲಾಸಾಮ್ರಾಟ್ ಎಸ್.ನಾರಾಯಣ್ ನೇತೃತ್ವದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಣ್ಣಾವ್ರ ಮಕ್ಕಳು, ಅಂಬರೀಷ್-ಸುಮಲತಾ, ಕಿಚ್ಚ ಸುದೀಪ್-ಚಾಲೆಂಜಿಂಗ್ ಸ್ಟಾರ್ ದರ್ಶನ್, ಉಪೇಂದ್ರ ದಂಪತಿ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರೇ ಹೆಜ್ಜೆಹಾಕಲಿದ್ದಾರೆ. [ಡಾ.ರಾಜ್ ಸ್ಮಾರಕ ಸಂಭ್ರಮಕ್ಕೆ ಕಿಚ್ಚ-ದರ್ಶನ್ ಡಾನ್ಸ್]
ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ದಿಗ್ಗಜರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಡಾ.ರಾಜ್ ಸ್ಮಾರಕ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ, ಅಮಿತಾಬ್ ಬಚ್ಚನ್, ಚಿರಂಜೀವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಅಂತ ಈ ಹಿಂದೆ ಸುದ್ದಿಯಾಗಿತ್ತು. ಇದೀಗ ಆ ಸುದ್ದಿ ನಿಜವಾಗಿದೆ.

ಒಂದೇ ವೇದಿಕೆಯಲ್ಲಿ ಸ್ಟೈಲ್ ಕಿಂಗ್ ರಜನಿಕಾಂತ್ ಮತ್ತು ಮೆಗಾ ಸ್ಟಾರ್ ಚಿರಂಜೀವಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಸಮಾರಂಭಕ್ಕೆ ಹಾಜರಾಗುತ್ತಿರುವುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ರಜನಿಕಾಂತ್ ಮತ್ತು ಚಿರಂಜೀವಿ ಖಚಿತಪಡಿಸಿದ್ದಾರೆ. ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಇನ್ನೂ ಬಿಜಿಯಿರುವ ಕಾರಣ ಅಮಿತಾಬ್ ಬಚ್ಚನ್ ಕಡೆಯಿಂದ ಸ್ಪಷ್ಟ ಸಂದೇಶ ಇನ್ನೂ ರವಾನೆಯಾಗಿಲ್ಲ. [ನವೆಂಬರ್ 28, 29 ಸ್ಯಾಂಡಲ್ ವುಡ್ಡಿಗೆ ರಜಾ..!]
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಮಿತಾಬ್ ಬಚ್ಚನ್ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಮಾಲಿವುಡ್ ಸೂಪರ್ ಸ್ಟಾರ್ ಮುಮ್ಮೂಟಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರ ದಂಡು ಅರಮನೆ ಮೈದಾನದಲ್ಲಿ ಸೇರುತ್ತಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಚಿವ ರೋಶನ್ ಬೇಗ್ ಚರ್ಚೆ ನಡೆಸಿದ್ದಾರೆ.
ಒಂದು ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾಗಲಿರುವ ಈ ಕಾರ್ಯಕ್ರಮಕ್ಕೆ ಅರಮನೆ ಮೈದಾನ ನವವಧುವಿನಂತೆ ಸಿಂಗಾರಗೊಳ್ಳುತ್ತಿದೆ. (ಏಜೆನ್ಸೀಸ್)


Click it and Unblock the Notifications











