ರಜನಿಕಾಂತ್ ಕುಚಿಕು ಗೆಳೆಯನ 'ಒನ್ ವೇ' ರೆಡಿ
ಸೂಪರ್ ಸ್ಟಾರ್ ರಜನಿಕಾಂತ್ ಅವರ ತ್ರಿಡಿ 'ಕೊಚಡಿಯಾನ್' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಅವರ ಕುಚಿಕು ಗೆಳೆಯ ರಾಜ್ ಬಹದ್ದೂರ್ ಅವರ 'ಒನ್ ವೇ' ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನು ತಮಿಳು ಭಾಷೆಯಲ್ಲೂ ಬಿಡುಗಡೆ ಮಾಡಲಾಗುತ್ತಿರುವುದು ವಿಶೇಷ.
ರಜನಿಕಾಂತ್ ಹಾಗೂ ಅವರ ಜೀವದ ಗೆಳೆಯ ರಾಜ್ ಬಹದ್ದೂರ್ ಅವರ ಸ್ನೇಹ ಸಂಬಂಧದ ಎಳೆಯನ್ನು ಈ ಚಿತ್ರ ಒಳಗೊಂಡಿದೆ. ರಜನಿಕಾಂತ್ ಅವರು ಬಲು ಎತ್ತರಕ್ಕೆ ಏರಿದರೂ ಈ ಕುಚಿಕು ಕುಚೇಲನನ್ನು ಮಾತ್ರ ಮರೆಯಲಿಲ್ಲ. ಅವರಿಬ್ಬರ ಸ್ನೇಹಸಂಬಂಧಕ್ಕೆ ಹಣ, ಅಂತಸ್ತು, ಐಶ್ವರ್ಯ ಅಡ್ಡಿಬರಲಿಲ್ಲ. [ಕನ್ನಡಕ್ಕೆ 'ಒನ್ ವೇ'ಯಲ್ಲಿ ಬರಲಿರುವ ರಜನಿಕಾಂತ್]
ಇಷ್ಟೆಲ್ಲಾ ವರ್ಷಗಳು ಉರುಳಿದರೂ ಇವರಿಬ್ಬರ ನಡುವಿನ ಸ್ನೇಹ ಹೇಗೆ ಗಟ್ಟಿಯಾಗಿ ಉಳಿಯಿತು ಎಂಬುದೇ ಚಿತ್ರದ ಕಥಾಹಂದರ. ಈ ಚಿತ್ರವನ್ನು ರಜನಿಕಾಂತ್ ಅವರ ಹೆಸರನ್ನು ಬಳಸಿಕೊಳ್ಳದೆ ತೆಗೆಯಬೇಕು ಎಂಬ ಆಸೆ ರಾಜ್ ಬಹದ್ದೂರ್ ಅವರಿಗೆ ಇತ್ತಂತೆ. ಆದರೆ ಅದು ಸಾಧ್ಯವಾಗಿಲ್ಲ.ರಜನಿಕಾಂತ್ ಅವರ ಹೆಸರಿನ ಜನಪ್ರಿಯತೆಯ ಲಾಭ ಪಡೆಯಲು ತಾವು ಈ ಚಿತ್ರವನ್ನು ತೆಗೆಯುತ್ತಿಲ್ಲ ಎನ್ನುತ್ತಾರೆ ರಾಜ್. ರಾಜ್ ಬಹದ್ದೂರ್ ಅವರು ತಮ್ಮ ಪಾತ್ರವನ್ನು ಅವರೇ ಮಾಡಿದ್ದಾರೆ. ಆದರೆ ಚಿತ್ರದಲ್ಲಿ ರಜನಿಕಾಂತ್ ಪಾತ್ರವನ್ನು ಯಾರು ಮಾಡಿದ್ದಾರೆ ಎಂಬುದು ಗೊತ್ತಾಗಬೇಕಾದರೆ ನೀವು ಚಿತ್ರ ನೋಡಲೇಬೇಕು ಎನ್ನುತ್ತಾರೆ.
ಕನ್ನಡ 'ಒನ್ ವೇ' ಚಿತ್ರಕ್ಕೆ ತಮಿಳಿನಲ್ಲಿ 'ಒರು ವಾಜಿ ಸಲಾಯ್' ಎಂಬ ಹೆಸರಿಡಲಾಗಿದೆ. 'ಕೊಟ್ಲಲ್ಲಪ್ಪೋ ಕೈ' ಚಿತ್ರದ ಋಷಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಶೀಘ್ರದಲ್ಲೇ ತೆರೆಗೆ ಅಪ್ಪಳಿಸಲಿದೆ. ಈ ಚಿತ್ರ ಹೇಗೆಲ್ಲಾ ಮೂಡಿಬಂದಿರಬಹುದು ಎಂಬ ಕುತೂಹಲ ರಜನಿಕಾಂತ್ ಅವರಿಗೂ ಇದೆಯಂತೆ. ಹಾಗಾಗಿ ಅವರೂ ರಾಜ್ ಜೊತೆ ಕೂತು ಸಿನಿಮಾ ನೋಡಲಿದ್ದಾರಂತೆ. (ಏಜೆನ್ಸೀಸ್)


Click it and Unblock the Notifications












