ರಾಮ್ ಚರಣ್ ರಾಯಲ್ ಮದುವೆಗೆ ಕ್ಷಣಗಣನೆ
ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಹಾಗೂ ಅಪೊಲೋ ಆಸ್ಪತ್ರೆಗಳ ಮುಖ್ಯಸ್ಥ ಪ್ರತಾಪ್ ಸಿ ರೆಡ್ಡಿ ಅವರ ಮೊಮ್ಮಗಳು ಉಪಾಸನಾ ಮದುವೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಜೂ.14ರಂದು ರಾಮ್ ಚರಣ್ ಮದುವೆ ಉಪಾಸನಾ ಜೊತೆ ಬೆಳಗ್ಗೆ 7.30ರ ಶುಭ ಮುಹೂರ್ತದಲ್ಲಿ ನೆರವೇರಲಿದೆ.
ನಿಶ್ಚಿತಾರ್ಥ ನಡೆದ ಸ್ಥಳದಲ್ಲೇ ಮದುವೆಯನ್ನೂ ನೆರವೇರಿಸಬೇಕೆಂದು ನಿರ್ಧರಿಸಲಾಗಿದೆ. ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರ್ ಬಳಿಯ ಹಿಮಾಯತ್ ಸಾಗರ್ ಜಲಾಶಯದ ಪಕ್ಕದಲ್ಲೇ ಇರುವ ಉಪಾಸನಾ ಕುಟುಂಬಿಕರ ಕೃಷಿ ಜಮೀನನಲ್ಲಿ ಭರ್ಜರಿ ವಿವಾಹ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ.
ಒಟ್ಟು 15 ಎಕರೆ ವಿಸ್ತೀರ್ಣದ ಕೃಷಿ ಭೂಮಿಯಲ್ಲಿ ಮದುವೆ ಸಂಭ್ರಮಕ್ಕೆ ಭಾರಿ ವ್ಯವಸ್ಥೆಯನ್ನು ಮಾಡಲಾಗಿದೆ. ಇಂದ್ರಭವನವೇ ಧರೆಗಿಳಿದಂತೆ ಮಂಟಪನ್ನು ಸಿದ್ಧಗೊಳಿಸಲಾಗುತ್ತಿದೆ. ರಾಮ್ ಚರಣ್ ಮದುವೆಯನ್ನು ಕಣ್ಣಾರೆ ಸವಿಯಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಸೇರಿದಂತೆ ಹಲವಾರು ಕೇಂದ್ರ ಸಚಿವರು ಆಗಮಿಸುವ ನಿರೀಕ್ಷೆಯಿದೆ.
ಆಂಧ್ರಮದ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಹಾಗೂ ವಿಪಕ್ಷ ನಾಯಕ ಚಂದ್ರಬಾಬು ನಾಯ್ಡು ಕೂಡ ಮದುವೆಗೆ ಆಗಮಿಸುತ್ತಿದ್ದಾರೆ. ಇದಿಷ್ಟೇ ಅಲ್ಲದೆ ಹಲವಾರು ಸಿನಿಮಾ ತಾರೆಗಳು, ರಾಜಕೀಯ ಧುರೀಣರು, ಉದ್ಯಮಿಗಳು, ವೈದ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಪ್ರಮುಖರು ಆಗಮಿಸಲಿದ್ದಾರೆ.
ಸಿನಿಮಾ ತಾರೆಗಳು ಹಾಗೂ ಗಣ್ಯರಿಗೆಂದೇ ಚಿರಂಜೀವಿ ಭಾನುವಾರ (ಜೂ.17) ತಮ್ಮ ನಿವಾಸದಲ್ಲಿ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಿಸಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಪಾಲ್ಗೊಳ್ಳುತ್ತಿರುವುದು ವಿಶೇಷ.
ಅಪೊಲೋ ಫಿಲಾಂತ್ರೋಪಿಯ ಉಪಾಧ್ಯಕ್ಷೆಯಾಗಿರುವ ಕಾಮಿನೇನಿ ಪ್ರಾಣಿಪ್ರಿಯೆ. ಆಕೆಯ ಈ ಗುಣವೇ ರಾಮ್ ಚರಣ್ ತುಂಬಾ ಹಿಡಿಸಿತ್ತು.ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದರು. ಸಾಲದಕ್ಕೆ ಇಬ್ಬರೂ ಕ್ಲಾಸ್ ಮೇಟ್ಗಳು. ಈಗ ಮದುವೆ ಮೂಲಕ ಒಂದಾಗುತ್ತಿದ್ದಾರೆ. ಡಿಸೆಂಬರ್1ರಂದು ರಾಮ್ ಚರಣ್ ನಿಶ್ಚಿತಾರ್ಥ ನೆರವೇರಿತ್ತು.
ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಮತ್ತೊಂದು ರಾಯಲ್ ಮದುವೆ ಇದಾಗಿದೆ. ಮದುವೆ ನಿಮಿತ್ತ ಒಟ್ಟು 3,000 ಮಂದಿ ಕಡುಬಡವರಿಗೆ ಊಟ ಹಾಕಿ ಅವರ ಮನಸ್ಸನ್ನು ತೃಪ್ತಿಪಡಿಸಲಿದ್ದಾರೆ. ಇವರ ಜೀವನೋಪಾಯಕ್ಕಾಗಿ ಹಲವಾರು ಧರ್ಮಾರ್ಥ ಸಂಸ್ಥೆಗಳಿಗೆ ಹಣಕಾಸು ನೆರವನ್ನೂ ನೀಡಲಿದ್ದಾರೆ. (ಏಜೆನ್ಸೀಸ್)


Click it and Unblock the Notifications












