'ಸತ್ಯ ಹರಿಶ್ಚಂದ್ರ'ನ ಪಾತ್ರ ಮಾಡುವಾಸೆ ಎಂದ ರಮೇಶ್ ಅರವಿಂದ್
ಇತ್ತೀಚೆಗೆ ಎಲ್ಲ ಕಡೆ ಪೌರಾಣಿಕ ಸಿನಿಮಾ, ಸೀರಿಯಲ್ ಹವಾ ಹೆಚ್ಚಾಗಿದೆ. ಒಂದು ವೇಳೆ ತಮಗೆ ಪೌರಾಣಿಕ ಪಾತ್ರ ನಿರ್ವಹಿಸುವ ಅವಕಾಶ ಸಿಕ್ಕರೆ 'ಸತ್ಯ ಹರಿಶ್ಚಂದ್ರ'ನ ಪಾತ್ರ ಮಾಡಬಹುದು ಎಂದರು ರಮೇಶ್ ಅರವಿಂದ್.
ಹೊಸ ವರ್ಷದ ಪ್ರಯುಕ್ತ ಮಾಧ್ಯಮದ ಜೊತೆಗೆ ಅಲ್ಪ ಹೊತ್ತು ಕಳೆಯಲು ಬಯಸಿದ ರಮೇಶ್ ಅರವಿಂದ್, ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಹೀಗೆ ಹೇಳಿದರು. ಜೊತೆಗೆ 'ವೀಕೆಂಡ್ ವಿತ್ ರಮೇಶ್' ಮುಂಬರುವ ಸೀಸನ್ ಹೇಗೆ ಮೂಡಿಬರಲಿದೆ ಎಂಬುದರ ಬಗ್ಗೆಯೂ ಗುಟ್ಟು ಬಿಟ್ಟುಕೊಟ್ಟರು.
ಚಿತ್ರನಟರೆಲ್ಲಾ ರಾಜಕೀಯದ ಬಗ್ಗೆ ಗಮನ ಹರಿಸುತ್ತಿರುವ ಈಗಿನ ಕಾಲದಲ್ಲಿ ನಟ ರಮೇಶ್ ಅರವಿಂದ್ ಕೂಡ ರಾಜಕಾರಣಕ್ಕೆ ಧುಮುಕುತ್ತಾರಾ ಎಂಬ ಕುತೂಹಲ ಮೂಡುವುದು ಸಹಜ. ಈ ಪ್ರಶ್ನೆಗೂ ರಮೇಶ್ ಅರವಿಂದ್ ಉತ್ತರ ನೀಡಿದ್ದಾರೆ. ಮುಂದೆ ಓದಿರಿ...

'ಸತ್ಯ ಹರಿಶ್ಚಂದ್ರ'ನೇ ಯಾಕೆ?
''ಪುರಾಣದಲ್ಲಿ ಸಾಕಷ್ಟು ಆಸಕ್ತಿಕರವಾದ ಪಾತ್ರಗಳಿವೆ. ಆದರೆ ನಾನು ಮಾಡಬೇಕು ಎಂದು ಬಯಸುವಾಗ ನನ್ನ ಫಿಸಿಕ್ ಕೂಡ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದಲ್ಲ? ಹಾಗೆ ನೋಡಿದರೆ 'ಸತ್ಯ ಹರಿಶ್ಚಂದ್ರ'ನೇ ಬೆಟರ್ ಅನಿಸಿತು. ಮಾತ್ರವಲ್ಲ ಇತ್ತೀಚೆಗೆ 'ರಾಘವಾಂಕ ವಿರಚಿತ ಸತ್ಯಹರಿಶ್ಚಂದ್ರ'ನ ಬಗ್ಗೆ ಓದಿದೆ. ಅದರ ವಿವರಣೆ ಗಮನಿಸಿದಾಗ ಅವಕಾಶ ಸಿಕ್ಕರೆ ಆ ಪಾತ್ರವನ್ನು ಮಾಡಬೇಕು ಎಂಬ ಇರಾದೆ ಮೂಡಿದೆ'' ಎಂದರು ರಮೇಶ್ ಅರವಿಂದ್.

'ವೀಕೆಂಡ್ ವಿತ್..' ಪ್ಲ್ಯಾನ್ ಆಗ್ತಾ ಇದೆ
''ಕಳೆದ ಸೀಸನ್ ನಲ್ಲಿ ಯೋಜನೆ ಹಾಕಿದಷ್ಟು ಮಂದಿಯಲ್ಲಿ ಎಲ್ಲರನ್ನೂ ಸಾಧಕರ ಸೀಟ್ ನಲ್ಲಿ ಕುಳ್ಳಿರಿಸಲು ಸಾಧ್ಯವಾಗಿಲ್ಲ. ಹಂಸಲೇಖ, ರಾಹುಲ್ ದ್ರಾವಿಡ್ ಮೊದಲಾದವರನ್ನು ಕರೆದು ತರಬೇಕು ಎನ್ನುವ ಯೋಜನೆಯಿತ್ತು. ಜೊತೆಗೆ ರೈತರು, ಸೈನಿಕರನ್ನು ಕೂಡ ಕರೆಸಬೇಕಿತ್ತು. ಹಾಗಾಗಿ ಈ ಬಾರಿಯಾದರೂ ಅವರನ್ನು ಕರೆಸುವ ಪ್ರಯತ್ನ ಮಾಡಬೇಕಿದೆ. ಈ ಬಗ್ಗೆ ಝೀ ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರೊಂದಿಗೆ ಮಾತುಕತೆ ನಡೆದಿದೆ'' ಎಂದು ರಮೇಶ್ ತಿಳಿಸಿದರು.

ಸದ್ಯಕ್ಕೆ ರಾಜಕೀಯದ ಅಪೇಕ್ಷೆ ಇಲ್ಲ
''ಮುಂದಿನ ದಿನಗಳಲ್ಲಿ ಏನಾಗಲಿದೆ ಎನ್ನುವ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ. ಚಂದ್ರನ ಮೇಲೆ ಮೊದಲ ಉಪಗ್ರಹ ಉಡಾವಣೆ ಆದಾಗ ಎಲ್ಲರೂ ಮುಂದೆ ಅಲ್ಲಿ ಅಪಾರ್ಟ್ಮೆಂಟ್ ಕಟ್ಟುತ್ತಾರೆ ಎಂದು ಊಹಿಸಿದರು. ಆದರೆ ಆ ಊಹೆ ಇಲ್ಲಿಯವರೆಗೂ ನಡೆದಿಲ್ಲ. ಆದರೆ ಇದೇ ವೇಳೆ ಯಾರೂ ಊಹಿಸದಿದ್ದ ಬೇರೊಂದು ಘಟನೆ ನಡೆಯಿತು. ಅದುವೇ ಮೊಬೈಲ್ ಫೋನ್ ಸೃಷ್ಟಿ ಮತ್ತು ಬಳಕೆ! ಹಾಗಾಗಿ ಯಾವುದೇ ವಿಚಾರವನ್ನು ನಾನು ಮಾಡುವುದೇ ಇಲ್ಲ ಎಂದು ಹೇಳಲಾರೆ. ಈ ತನಕ ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಈ ಹಿಂದೆ ಕಮಲ್ ಹಾಸನ್ ಅವರೊಂದಿಗೆ ಮಾತನಾಡುವಾಗ ಸಿನಿಮಾ ಬಗ್ಗೆ ಮಾತ್ರ ಮಾತನಾಡುತ್ತಿದ್ದೆ. ಆದರೆ ಈಗ ಅವರು ಹೆಚ್ಚು ರಾಜಕೀಯದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ನಾನು ಕೂಡ ಆ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುತ್ತೇನೆ'' ಎನ್ನುವ ಮೂಲಕ ರಮೇಶ್ ಮುಂದೆ ತಾವು ಕೂಡ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರೆ ಅಚ್ಚರಿಯಿಲ್ಲ ಎಂಬ ಸೂಚನೆ ನೀಡಿದರು.

ಸ್ಫೂರ್ತಿ ತುಂಬುವ ಮಾತುಗಳು
''ಸದಾ ಸ್ಫೂರ್ತಿ ತುಂಬುವ ಮಾತುಗಳನ್ನು ಆಡುತ್ತೇನೆ. ಅದು ಕೆಲವರಿಗಾದರೂ ಬದುಕಿನಲ್ಲಿ ಉತ್ಸಾಹ ಮೂಡಿಸಿದರೆ ಸಾರ್ಥಕವಾದಂತೆ. ಕೆಲವರಿಗೆ ತಾಕತ್ತು ಇದ್ದರೂ ಮುಂದುವರಿಯಲು ಭಯ ಇರುತ್ತದೆ. ಮೊದಲು ನಮ್ಮಿಂದ ಆಗುತ್ತೆ ಎನ್ನುವ ನಂಬಿಕೆ ಇರುವುದು ಮುಖ್ಯ. ಹೊರಗಡೆ ಪ್ರಪಂಚಕ್ಕೆ ಕಾಲಿಡುವ ಮೊದಲು ನಮ್ಮ ಪ್ರಪಂಚದೊಳಗೆ ನಾವು ಪರ್ಫೆಕ್ಟ್ ಆಗಲು ಪ್ರಯತ್ನಿಸಬೇಕು. ಅದು ಕಷ್ಟವೇನಲ್ಲ. ನಾವು ಏಕಾಗ್ರತೆ ಕಳೆದುಕೊಂಡಾಗ ಟೈಮ್ ವೇಸ್ಟಾಗುತ್ತದೆ. ಎಲ್ಲರೂ ನಾನಾಯಿತು ನನ್ನ ಮೊಬೈಲಾಯ್ತು ಎಂಬ ಹಾಗೆ ಇದ್ದಾರೆ. ಆದರೆ ಮೊಬೈಲನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಅದೇ ರೀತಿ ಕ್ಯಾಮೆರಾ ಹಿಡಿದವರೆಲ್ಲ ಸಿನಿಮಾ ಮೇಕರ್ಸ್ ಆಗಲ್ಲ. ಮೊದಲು ನಮ್ಮ ಗುರಿ ಏನು ಎಂದು ಅರಿತು ಅದರತ್ತ ತಯಾರಿ ನಡೆಸಬೇಕು. ನಾನಂತೂ ಒಂದು ನಿಮಿಷ ಕೂಡ ವೇಸ್ಟ್ ಮಾಡೋಕೆ ಇಷ್ಟವಿಲ್ಲ. ಸದಾ ಓದುತ್ತಾ ಇರುತ್ತೇನೆ'' ಎಂದರು


Click it and Unblock the Notifications











