ನಟಿ ವಿಜಯಲಕ್ಷ್ಮಿ ವಿರುದ್ಧ ಪೊಲೀಸ್ ದೂರು ನೀಡಿದ ರವಿಪ್ರಕಾಶ್
ನಟಿ ವಿಜಯಲಕ್ಷ್ಮಿ ಮತ್ತು ಆಕೆಯ ಸೋದರಿ ಉಷಾದೇವಿ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಟಿ ವಿಜಯಲಕ್ಷ್ಮಿಗೆ ಆಸ್ಪತ್ರೆ ಖರ್ಚಿಗೆ ಒಂದು ಲಕ್ಷ ಹಣ ಸಹಾಯ ಮಾಡಿದ ನಟ ರವಿಪ್ರಕಾಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಜಯಲಕ್ಷ್ಮಿ ಅವರಿಂದ ತಮಗಾಗಿರುವ ನೋವು ಮತ್ತು ಅವಮಾನಗಳ ಬಗ್ಗೆ ಪೊಲೀಸರ ಬಳಿ ಹೇಳಿಕೊಂಡಿದ್ದು, ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ. ನನ್ನಿಂದ ಸಹಾಯ ಪಡೆದು ಸಮಾಜದಲ್ಲಿ ನನಗೆ ಅವಮಾನವಾಗುವ ರೀತಿ ವಿಡಿಯೋಗಳನ್ನ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.
ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ದೂರು ದಾಖಲಿಸಿದ್ದಾರೆ ರವಿಪ್ರಕಾಶ್. ಈಗ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಘನತೆಗೆ ಧಕ್ಕೆತಂದಿರುವ ಆರೋಪ ಮೇಲೆ ದೂರು ದಾಖಲಾಗಿದೆ.

ಮತ್ತೊಂದೆಡೆ ತಿಲಕ್ ನಗರದಲ್ಲಿ ನಟಿ ವಿಜಯಲಕ್ಷ್ಮಿ ಅವರು ನಟ ರವಿಪ್ರಕಾಶ್ ಅವರ ಮೇಲೆ ದೂರು ದಾಖಲಾಗಿದೆ. ಅಭಿಮಾನಿ ರೂಪದಲ್ಲಿ ಬಂದ ರವಿಪ್ರಕಾಶ್ ಅವರು ಹಣ ಸಹಾಯ ಮಾಡಿ, ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ವಿಜಯಲಕ್ಷ್ಮಿಗೆ ಒಂದು ಲಕ್ಷ ಹಣಕಾಸು ನೆರವು ನೀಡಿದ ರವಿ ಪ್ರಕಾಶ್ ಪದೇ ಪದೇ ಫೋನ್ ಮಾಡಿ ಹಿಂಸೆ ನೀಡುತ್ತಿದ್ದಾನೆ. ಆಸ್ಪತ್ರೆಗೆ ಬಂದು ವಿಜಯಲಕ್ಷ್ಮಿ ಅವರ ಅಕ್ಕನನ್ನು ಬೈದು, ನಿಂದನೆ ಮಾಡಿದ್ದಾನೆ. ಇದರಿಂದ ತನ್ನ ಚಿಕಿತ್ಸೆಗೆ ತೊಂದರೆ ಆಗುತ್ತಿದೆ ಎಂದು ವಿಜಯಲಕ್ಷ್ಮಿ ದೂರಿದ್ದಾರೆ.


Click it and Unblock the Notifications











