ಸಲ್ಮಾನ್ ಮುಂದಿನ ಚಿತ್ರಕ್ಕೆ ಕನ್ನಡದ ಸಾಹಸ ನಿರ್ದೇಶಕ
ಬಾಲಿವುಡ್ ಬಾಕ್ಸ್ ಆಫೀಸ್ ಕಿಂಗ್ ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರ ಜೈ ಹೋ. ಚಿತ್ರಕ್ಕೆ ಈ ಹಿಂದೆ 'ಮೆಂಟಲ್' ಎಂದು ಹೆಸರಿಡಲಾಗಿತ್ತು. ಇದು ಎ ಆರ್ ಮುರುಗದಾಸ್ ನಿರ್ದೇಶನದ ತೆಲುಗಿನ 'ಸ್ಟಾಲಿನ್' ಚಿತ್ರದ ರಿಮೇಕ್.
ಸ್ಟಾಲಿನ್ ಚಿತ್ರದಲ್ಲಿ ಮೆಘಾ ಸ್ಟಾರ್ ಮತ್ತು ಈಗಿನ ಕೇಂದ್ರ ಪ್ರವಾಸೋದ್ಯಮ ಸಚಿವರೂ ಆಗಿರುವ ಚಿರಂಜೀವಿ ನಾಯಕನಾಗಿ ಮತ್ತು ತ್ರಿಶಾ ನಾಯಕಿಯಾಗಿ ನಟಿಸಿದ್ದ ಬ್ಲಾಕ್ ಬಸ್ಟರ್ ಚಿತ್ರ.
ವಿಷಯ ಏನಂದರೆ ಈ ಚಿತ್ರಕ್ಕೆ ಕನ್ನಡದ ಸಾಹಸ ನಿರ್ದೇಶಕರೊಬ್ಬರು ಸಾಹಸ ದೃಶ್ಯಗಳ ನಿರ್ದೇಶನ ಮಾಡಲಿದ್ದಾರೆ. ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಮೈನವಿರೇಳಿಸುವ ಸ್ಟಂಟ್ ದೃಶ್ಯಗಳನ್ನು ನಿರ್ದೇಶಿಸಿರುವ ರವಿ ವರ್ಮಾ ಅವರು ಸಲ್ಮಾನ್ ಖಾನ್ ಅವರ ಜೈ ಹೋ ಚಿತ್ರದ ಸಾಹಸ ನಿರ್ದೇಶಕರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ಯಾಂಪಿನ ಪರ್ಮನೆಂಟ್ ಸದಸ್ಯರಾಗಿರುವ ರವಿ ಈಗಾಗಲೇ ಕನ್ನಡದ ಜೊತೆ ತೆಲುಗು ಮತ್ತು ತಮಿಳು ಚಿತ್ರಗಳಿಗೂ ಸಾಹಸ ನಿರ್ದೇಶನ ಮಾಡಿದ್ದಾರೆ.
ಶಹೀದ್ ಕಪೂರ್ ಅವರ 'Rambo Rajkumar' ಚಿತ್ರಕ್ಕೂ ರವಿ ವರ್ಮಾ ಆಯ್ಕೆಯಾಗಿದ್ದಾರೆ. ಜೈ ಹೋ ಚಿತ್ರದ ಶೂಟಿಂಗ್ ಶ್ರೀಲಂಕಾದಲ್ಲಿ ನವೆಂಬರ್ ತಿಂಗಳಿನಿಂದ ಆರಂಭವಾಗಲಿದೆ.
ನನ್ನ ಯಶಸ್ಸಿಗೆ ದರ್ಶನ್ ಕಾರಣ ಎನ್ನುವ ರವಿ ವರ್ಮಾ 'ಒನ್ ಇಂಡಿಯಾ' ಜೊತೆ ಹೇಳಿದ್ದು ಏನು.. ಸ್ಲೈಡಿನಲ್ಲಿ.

ರವಿವರ್ಮಾ
ನಾನು ಇಂದು ಈ ಮಟ್ಟಿನ ಯಶಸ್ಸು ಪಡೆಯಲು ದರ್ಶನ್ ಕಾರಣ. ಅವರ ಹೆಚ್ಚಿನ ಚಿತ್ರಕ್ಕೆ ನಾನು ಸಾಹಸ ನಿರ್ದೇಶಕನಾಗಿದ್ದೆ. ಅದರಿಂದಾಗಿ ಚಿತ್ರೋದ್ಯಮ ಮತ್ತು ಚಿತ್ರರಸಿಕರು ನನ್ನನ್ನು ಗುರುತಿಸುವಂತಾಯಿತು.

ಬೃಂದಾವನ
ಇತ್ತೀಚೆಗೆ ಬಿಡುಗಡೆಯಾದ ಬೃಂದಾವನ ಚಿತ್ರಕ್ಕೂ ನಾನೇ ಸಾಹಸ ನಿರ್ದೇಶಕನಾಗಿ ಆಯ್ಕೆಯಾಗಿದ್ದೆ. ಆ ಸಮಯದಲ್ಲಿ ನನಗೆ ಸಲ್ಮಾನ್ ಸಹೋದರ ಸೋಹಿಲ್ ಖಾನ್ ಅವರಿಂದ ಕರೆ ಬಂತು. ಜೈ ಹೋ ಚಿತ್ರಕ್ಕೆ ಸಲ್ಮಾನ್ ಜೊತೆ ಕೆಲಸ ಮಾಡುತ್ತೀರಾ ಎಂದು ಆಫರ್ ನೀಡಿದರು. ಹಾಗಾಗಿ ಕೊನೇ ಕ್ಷಣದಲ್ಲಿ ಬೃಂದಾವನ ಚಿತ್ರದಲ್ಲಿ ಕೆಲಸ ಮಾಡಲಾಗಲಿಲ್ಲ.

ದರ್ಶನ್
ನನಗೆ ಹಿಂದಿ ಚಿತ್ರದಲ್ಲಿ ಆಫರ್ ಬಗ್ಗೆ ದರ್ಶನ್ ಬಳಿ ಹೇಳಿದಾಗ ಅವರು ತುಂಬಾ ಖುಷಿ ಪಟ್ಟರು. ಗುಡ್ ಲಕ್ ಎಂದು ಹೇಳಿ ಕಳುಹಿಸಿ ಕೊಟ್ಟರು. ಸಲ್ಮಾನ್ ಜೊತೆ ವರ್ಕ್ ಮಾಡಬೇಕೆನ್ನುವುದು ನನ್ನ ಕನಸಾಗಿತ್ತು.

ಧರ್ಮ
ರವಿ ವರ್ಮಾ ವೃತ್ತಿ ಜೀವನಕ್ಕೆ ಸಿಕ್ಕ ದೊಡ್ದ ಬ್ರೇಕ್ ಅಂದರೆ 2004ರಲ್ಲಿ ಬಿಡುಗಡೆಯಾದ ಧರ್ಮ ಚಿತ್ರ. ದರ್ಶನ್ ನಾಯಕನಾಗಿ ನಟಿಸಿದ್ದ ಚಿತ್ರದಲ್ಲಿನ ಸಾಹಸ ಸನ್ನಿವೇಶ ರವಿ ವರ್ಮಾ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು.

ಪಟ್ಟಿ ದೊಡ್ಡದು
ದರ್ಶನ್ ಜೊತೆ ಕನ್ನಡದ ಇತರ ಪ್ರಮುಖ ನಾಯಕರಿಗಳಿಗೂ ರವಿ ವರ್ಮಾ ನೆಚ್ಚಿನ ಸಾಹಸ ನಿರ್ದೇಶಕರಾಗಿದ್ದರು. ನವಗ್ರಹ, ಬಚ್ಚನ್, ಅಣ್ಣಾಬಾಂಡ್, ಅಂಬಾರಿ, ಗಜ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮುಂತಾದ ಹಿಟ್ ಚಿತ್ರಗಳಿಗೆ ರವಿ ವರ್ಮಾ ಸಾಹಸ ನಿರ್ದೇಶಕರಾಗಿದ್ದರು.


Click it and Unblock the Notifications











