ರಾಜ್ಯಾದ್ಯಂತ ರವಿಚಂದ್ರನ್ 'ಪರಮಶಿವ'ನ ಅಬ್ಬರ ಶುರು
ಕನಸುಗಳ ಕಲಾ ಚಕ್ರವರ್ತಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮತ್ತೊಂದು ಭಿನ್ನ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅವರ ಅಭಿನಯದ 'ಪರಮಶಿವ' ಚಿತ್ರ ಇದೇ ಸೆಪ್ಟೆಂಬರ್ 12ರಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ.
ಮಾಣಿಕ್ಯ ಹಾಗೂ ದೃಶ್ಯ ಚಿತ್ರಗಳ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ವೃತ್ತಿ ಬದುಕು ಸಾಕಷ್ಟು ಜಿಗಿತ ಕಂಡಿದೆ. ಇದೀಗ ಅವರ ಪರಮಶಿವ ಚಿತ್ರವೂ ತಮಿಳಿನ 'ಸಮುದ್ರಂ' ಚಿತ್ರದ ರೀಮೇಕ್. ಕನ್ನಡದಲ್ಲಿ ರೀಮೇಕ್ ಮಾಡಿ ಗೆಲ್ಲುವುದು ಹೇಗೆ ಎಂಬ ವಿದ್ಯೆ ರವಿಚಂದ್ರನ್ ಅವರಿಗೆ ಚೆನ್ನಾಗಿ ಗೊತ್ತು.
ಈ ಚಿತ್ರದಲ್ಲಿ ರವಿಚಂದ್ರನ್ ಅವರದು ದ್ವಿಪಾತ್ರಾಭಿನಯ. ಅಣಜಿ ನಾಗರಾಜ್ ಅವರು ಸಿಎಫ್ಎಂ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಹಲವಾರು ಯಶಸ್ವಿ ಚಿತ್ರಗಳ ಮಹೇಶ್ ಬಾಬು ಆಕ್ಷನ್ ಕಟ್ ಹೇಳಿರುವ ಚಿತ್ರ ಇದಾಗಿದೆ. ತೂಗುದೀಪ ಹಂಚಿಕೆ ಸಂಸ್ಥೆ ಚಿತ್ರವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದೆ.2001ರಲ್ಲಿ ತೆರೆಕಂಡ ತಮಿಳಿನ ಸಮುದ್ರಂ ಚಿತ್ರ ಬಳಿಕ ತೆಲುಗಿನಲ್ಲಿ ಶಿವ ರಾಮ ರಾಜು ಎಂದು ರೀಮೇಕ್ ಆಗಿತ್ತು. ಇದೀಗ ಕನ್ನಡಕ್ಕೆ ಪರಮಶಿವನಾಗಿ ಬರುತ್ತಿದೆ. ರವಿಚಂದ್ರನ್ ಜೊತೆಯಾಗಿ ಸಾಕ್ಷಿ ಶಿವಾನಂದ್, ತಂಗಿಯಾಗಿ ಶರಣ್ಯ, ವಿಜಯ ರಾಘವೇಂದ್ರ, ಯಶಸ್, ರೇಖ, ಸಾಧು ಕೋಕಿಲ, ರಮೇಶ್ ಭಟ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.
ಅರ್ಜುನ್ ಜನ್ಯ ಅವರ ಸಂಗೀತ, ಅಣಜಿ ನಾಗರಾಜ್ ಅವರ ಛಾಯಾಗ್ರಹಣ, ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ವಿನೋದ್ ಮನೋಹರ್ ಅವರ ಸಂಕಲನ, ಕೆ ಡಿ ವೆಂಕಟೇಶ್ ಹಾಗೂ ಪಳನಿರಾಜ್ ಅವರ ಸಾಹಸ, ಎಂ ಎಸ್ ರಮೇಶ್ ಅವರ ಸಂಭಾಷಣೆ, ಹರ್ಷ ಅವರ ನೃತ್ಯ ನಿರ್ದೇಶನ ಒದಗಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ರವಿಚಂದ್ರನ್ ಅವರು ತಮ್ಮದೇ ಆದ ಬೇಡಿಕೆಯನ್ನು ಉಳಿಸಿಕೊಂಡಿದ್ದು ಚಿತ್ರದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ. (ಫಿಲ್ಮಿಬೀಟ್)


Click it and Unblock the Notifications












