ಬಸವಣ್ಣ ನಾಮಸ್ಮರಣೆ ಭರಿತ 'ಶಿವಂ' ಟ್ರೇಲರ್
ರಿಯಲ್ ಸ್ಟಾರ್ ಉಪೇಂದ್ರ ಅವರ 'ಶಿವಂ' ಚಿತ್ರ ಟೈಟಲ್ ಸಮಸ್ಯೆಯಿಂದ ಬಹುತೇಕ ಮುಕ್ತವಾಗಿದೆ. ಸಿನಿಮಾ ರಿಲೀಸ್ ಆದ್ಮೇಲೆ ಇನ್ನೇನು ಗಲಾಟೆಗಳಾಗುವುದೋ ಗೊತ್ತಿಲ್ಲ. ಟೈಟಲ್ ಇಲ್ಲದೆ ಸಿಂಬಲ್, ಚಿನ್ಹೆ, ಅಕ್ಷರಗಳನ್ನು ಬಳಸಿ ಸಿನಿಮಾ ಮಾಡಿ ಗೆದ್ದಿರುವ ರಿಯಲ್ ಸ್ಟಾರ್ ಉಪ್ಪಿಗೆ 'ಶಿವಂ' ಚಿತ್ರ ಗೆಲ್ಲುವುದು ಮುಖ್ಯವಾಗಿದೆ. ನಿರ್ದೇಶಕ ಶ್ರೀನಿವಾಸ ರಾಜು ಅವರ ಬೆನ್ನೆಲುಬಾಗಿ ಪಾತ್ರದಲ್ಲಿ ತಲ್ಲೀನರಾಗಿ ಶಿವೋಹಂ ಆಗಿಬಿಟ್ಟಿದ್ದಾರೆ ಉಪ್ಪಿ.
ವಿಭೂತಿ, ತಿಲಕವೇ ತಮ್ಮ ಚಿತ್ರದ ಸಿಂಬಲ್. ಇದನ್ನು ಏನು ಬೇಕಾದರೂ ಕರೆದುಕೊಳ್ಳಿ ಚಿತ್ರದ ನಿರ್ದೇಶಕ ಶ್ರಿನಿವಾಸರಾಜು ಹೇಳಿದ್ದರೂ ಚಿತ್ರದ ತುಂಬಾ ಬಸವಣ್ಣನ ನಾಮ ಸ್ಮರಣೆ ಇರುವುದು ಟ್ರೇಲರ್ ನಲ್ಲೇ ಜನಕ್ಕೆ ಗೊತ್ತಾಗುತ್ತಿದೆ. 'ಶಿವನ ಹತ್ತಿರ ಹೋಗುವ ಮುನ್ನ ಬಸವಣ್ಣನನ್ನು ದಾಟಬೇಕು' ಎಂಬ ಡೈಲಾಗ್ ಗಳಿದ್ದರೂ 1.52 ನಿಮಿಷದ ಟ್ರೇಲರ್ ನಲ್ಲಿ ಡೈಲಾಗ್ ಗಳಿಗಿಂತ ಫೈಟಿಂಗ್ ಹೈಲೇಟ್ ಆಗಿದೆ.

ವಿಭೂತಿ, ತಿಲಕ, ರುದ್ರಾಕ್ಷಿ, ತ್ರಿಶೂಲ ಇರುವ ಪೋಸ್ಟರ್ ತೋರಿಸಿ ಜನರಲ್ಲಿ ಭಕ್ತಿಭಾವದ ಕುತೂಹಲ ಮೂಡಿಸಿರುವ ಚಿತ್ರದಲ್ಲಿ ಭಕ್ತಿಯ ಜೊತೆಗೆ ಶಕ್ತಿ, ಯುಕ್ತಿ, ಕುಯುಕ್ತಿಗಳ ಸಂಗಮವನ್ನು ಕಾಣಬಹುದಾಗಿದೆ. ಕಾಲಭೈರವ, ಭೈರಾಗಿ, ಅಹಂ ಬ್ರಹ್ಮಾಸ್ಮಿ, ಶಾರ್ಪ್ ಶೂಟರ್ ಅಲೆಕ್ಸ್, ಸರಣಿ ಗುಂಡಿನ ಚಕಮಕಿ, ಸರ್ಪದ ಹಚ್ಚೆಯುಳ್ಳ ರಾಗಿಣಿ ಬಿಕಿನಿ ಡೈವಿಂಗ್ ಎಲ್ಲವನ್ನು ನೋಡಿದರೆ ಶ್ರೀನಿವಾಸರಾಜು ಅವರು ತಮ್ಮ ಪೋಸ್ಟರ್ ಗೆ ನ್ಯಾಯ ಸಲ್ಲಿಸಿದ್ದಾರೆ ಎನ್ನಬಹುದು. ಅದರೆ, ಅಷ್ಟೇನು ಹೊಸತನವಿರದ ಟ್ರೇಲರ್ ನಂತೆ ಚಿತ್ರವೂ ಇದ್ದರೆ ಪ್ರೇಕ್ಷಕರನ್ನು ಶಿವನೇ ಕಾಪಾಡಬೇಕು. [ಉಪೇಂದ್ರ ಮುಂದಿನ ಚಿತ್ರಕ್ಕೆ ಏನಂತ ಕರೆಯಬೇಕು..?]
ಈ ಹಿಂದೆ ಚಿತ್ರಕ್ಕೆ 'ಬಸವಣ್ಣ' ಎಂದಿಟ್ಟ ಮೇಲೆ ಚಿತ್ರದ ಶೀರ್ಷಿಕೆಯನ್ನು ಕೈಬಿಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಅದಾದ ಬಳಿಕ ಚಿತ್ರಕ್ಕೆ 'ಬ್ರಾಹ್ಮಣ' ಎಂದಿಡುವುದಾಗಿ ಶ್ರೀನಿವಾಸರಾಜು ಹೇಳಿದ್ದರು.
ಆ ಶೀರ್ಷಿಕೆ ಕೈಬಿಡುವಂತೆ ಬ್ರಾಹ್ಮಣ ಸಮುದಾಯದ ಸಂಘಟನೆಗಳು ಆಗ್ರಹಿಸಿದವು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನೆ ಬ್ರಾಹ್ಮಣ ಶೀರ್ಷಿಕೆ ವಿರುದ್ಧ ತಿರುಗಿಬಿತ್ತು. ವಿಧಿ ಇಲ್ಲದೆ ಬ್ರಾಹ್ಮಣ ಶೀರ್ಷಿಕೆಯನ್ನು ಕೈಬಿಟ್ಟ ಶ್ರೀನಿವಾಸರಾಜು ಕಡೆಗೆ ಸಿಂಬಲ್ ನಲ್ಲೇ ಚಿತ್ರ ಬಿಡುಗಡೆ ಮಾಡಲು ಮುಂದಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಸದ್ಯಕ್ಕೆ ಚಿತ್ರದ ಟ್ರೇಲರ್ ನೋಡಿ ಆನಂದಿಸಿ...


Click it and Unblock the Notifications











