ದರ್ಶನ್ ಯಶಸ್ಸಿನ ಹಿಂದೆ ನೋವಿನ ’ಬದುಕು ಜಟಕಾ ಬಂಡಿ’
ಬಣ್ಣದ ಲೋಕ ಹಿಂದಿನ ನೋವು, ಅವಮಾನ, ಇಂಡಸ್ಟ್ರಿಯಲ್ಲಿ ಹೆಸರು ಮಾಡಲು ಪಡಬೇಕಾದ ಪಾಡು ಅನುಭವಿಸಿದವರಿಗೇ ಗೊತ್ತು. ಕಲಾ ಕುಟುಂಬದ ಹಿನ್ನಲೆ ಇಲ್ಲದವರು ಇಂತಹ ಕಷ್ಟ ಅನುಭವಿಸಿ ಮೇಲೆ ಬಂದ ಉದಾಹರಣೆಗಳಿವೆ. ಆದರೆ ಕಲೆಯೇ ಉಸಿರೆಂದು ಬದುಕಿದ್ದ ಕುಟುಂಬದ ಕುಡಿಯೊಂದು ಚಿತ್ರರಂಗದಲ್ಲಿ establish ಆಗಲು ಪಟ್ಟ ಕಷ್ಟ ಅಷ್ಟಿಷಲ್ಲ..
70 ರಿಂದ 90 ದಶಕದಲ್ಲಿ ಕನ್ನಡದ ಸುಮಾರು ನೂರು ಚಿತ್ರಗಳಲ್ಲಿ ಎಪ್ಪತ್ತು ಚಿತ್ರಗಳಲ್ಲಿ ತೂಗುದೀಪ ಶ್ರೀನಿವಾಸ್ ಖಾಯಂ ಖಳನಟ/ಸಹ ನಟ. ಸಿನಿಮಾ ರಂಗದಲ್ಲಿ ತಂದೆ ಜನಪ್ರಿಯರಾಗಿದ್ದರೂ ಮಗ ಗಾಂಧಿನಗರದ ಮೆಟ್ಟಲೇರಲು ಭಾರೀ ಸಾಹಸವನ್ನೇ ಮಾಡಬೇಕಾದ 'ಸದ್ಯ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ತೂಗುದೀಪ್' ಕಥೆಯಿದು.
ತಂದೆ ತೂಗುದೀಪ್ ಶ್ರೀನಿವಾಸ್ ಕಿಡ್ನಿ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದರು. ಆ ಸಮಯಯಲ್ಲೇ ಲಕ್ಷ ಲಕ್ಷ ರೂಪಾಯಿ ಆಸ್ಪತ್ರೆಯ ಖರ್ಚು ತಗಲುತಿತ್ತು ತಂದೆಗೆ ಮಗ ಕಲಾವಿದನಾಗ ಬೇಕೆನ್ನುವ ಆಸೆ ಇರಲಿಲ್ಲ. ಬದಲಿಗೆ ಡಾಕ್ಟರ್ ಅಥವಾ ಇಂಜಿನಿಯರಿಂಗ್ ಆಗಬೇಕೆಂದು ಬಯಸಿದ್ದರು. ಮೈಸೂರಿನ ಪ್ರಖ್ಯಾತ ಶಾಲೆಗೂ ಸೇರಿಸಿದ್ದರು.
ಆದರೆ ದರ್ಶನ್ ಗೆ ವಿದ್ಯೆ ತಲೆಗೆ ಹತ್ತುತ್ತಿರಲಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಬಣ್ಣದ ಲೋಕದ ಕಡೆ ಆಕರ್ಷಣೆ ಜಾಸ್ತಿ. ತಾಯಿ ಮೀನಾ ತೂಗುದೀಪ್ ಮಗನ ಆಸೆಗೆ ತಣ್ಣೀರೆರೆಚಲಿಲ್ಲ. ಈ ನಡುವೆ 1995ರಲ್ಲಿ ತೂಗುದೀಪ ಶ್ರೀನಿವಾಸ ಇಹಲೋಕ ತ್ಯಜಿಸಿದರು.
ಅಂದು ಅಂತಿಮ ಸಂಸ್ಕಾರಕ್ಕೆ ಬಂದ ಕನ್ನಡ ಚಿತ್ರರಂಗದವರು ಆಮೇಲೆ ತೂಗುದೀಪ ಶ್ರೀನಿವಾಸ್ ಮನೆ ಕಡೆಗೆ ತಲೆನೇ ಹಾಕಲಿಲ್ಲ ಎನ್ನುವುದು ಮೀನಾ ತೂಗುದೀಪ್ ಅವರಾಡುವ ನೋವಿನ ಮಾತು.
ದರ್ಶನ್ ಆಸೆಗೆ ಆಸರೆಯಾದ ತಾಯಿ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಅಲೆದು ಮಗನಿಗೊಂದು ಚಾನ್ಸ್ ನೀಡಿ ಎಂದು ನಿರ್ಮಾಪಕರಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ಯಾರಿಂದಲೂ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಈ ನಡುವೆ ಕುಟುಂಬದ ಹಿತೈಷಿಗಳೊಬ್ಬರು ಮದರಾಸಿನಲ್ಲಿರುವ ಎಂಜಿಆರ್ ಕಲಾ ಕೇಂದ್ರದಲ್ಲಿ ನಟನೆಯ ತರಬೇತಿ ಪಡೆಯಲು ಸಲಹೆ ನೀಡಿದರು.
ಅಲ್ಲಿ ಕಟ್ಟ ಬೇಕಾದ ಶುಲ್ಕಕ್ಕೂ ದರ್ಶನ್ ತಾಯಿಯ ಬಳಿ ದುಡ್ದಿರಲಿಲ್ಲ, ಗಂಡ ಕಲಾ ಜಗತ್ತಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಮಗನಿಗೆ ಉಚಿತ ತರಬೇತಿ ನೀಡಬೇಕೆಂದು ಮೀನಾ ತೂಗುದೀಪ್ ಮನವಿ ಮಾಡಿದರು . ಮನವಿಗೆ ಎಂಜಿಆರ್ ಕಲಾ ಕೇಂದ್ರ ಸ್ಪಂಧಿಸಿತು.
ಇನ್ನೂ ಇದೆ..ಮುಂದೆ ಓದಿ..
(ಕೃಪೆ : ಕಸ್ತೂರಿ ನ್ಯೂಸ್, ಬದುಕು ಜಟಕಾ ಬಂಡಿ ಕಾರ್ಯಕ್ರಮ)

ಕನ್ನಡ ಚಿತ್ರರಂಗ
ಅಲ್ಲಿಂದ ತರಬೇತಿ ಪಡೆದು ಬೆಂಗಳೂರಿಗೆ ಬಂದ ನಂತರವೂ ದರ್ಶನಿಗೆ ಗಾಂಧಿನಗರ ಮಣೆ ಹಾಕಲಿಲ್ಲ. ಚಿ.ಉದಯಶಂಕರ್ ಮತ್ತು ಅವರ ಸಹೋದರನ ಮನೆಯಲ್ಲಿ ಕೊಂಚ ದಿನ ನೆಲೆಸಿ ಚಿತ್ರರಂಗದ ಬಾಗಿಲು ಬಡಿಯಲು ಆರಂಭಿಸಿದರು. ನಾಯಕನಾಗ ಬೇಕೆಂದು ಬಯಸಿದ್ದ ದರ್ಶನಿಗೆ ಆಗ ವಲಿದಿದ್ದು ಲೈಟ್ ಬಾಯ್, ಅಸಿಸ್ಟಂಟ್ ಕ್ಯಾಮರಾಮ್ಯನ್, ಕಿರುತೆರೆಯಲ್ಲಿನ ಸಣ್ಣ ಪಾತ್ರಗಳು. ಅಂದು ದರ್ಶನ್ ಗೆ ಜೊತೆಯಾಗಿ ನಿಂತವರು ನಿರ್ಮಾಪಕ ಅಣಜಿ ನಾಗರಾಜ್. ಇನ್ನು ಗಾಂಧಿನಗರದ ಕನಸು ನನಸಾಗುವುದಿಲ್ಲ ಎಂದು ಮೈಸೂರಿಗೆ ವಾಪಾಸ್ ಬಂದ ದರ್ಶನ್ ತಮ್ಮ ಹಾಲಿನ ವ್ಯಾಪಾರಕ್ಕೆ ಇಳಿದರು.

ಗಾಂಧಿನಗರದ ಕನಸು
ಆಗ ಒಂದು ದಿನ ಮೆಜೆಸ್ಟಿಕ್ ಲಾಡ್ಜ್ ನಲ್ಲಿ ಕೂತು 'ಮೆಜೆಸ್ಟಿಕ್' ಚಿತ್ರಕ್ಕೆ ಚಿತ್ರಕಥೆ ಹಣೆಯುತ್ತಿದ್ದ ನಿರ್ದೇಶಕ ಸತ್ಯಾಗೆ ಉದ್ದಕ್ಕಿರುವ ನಾಯಕ ನಟನ ಅವಶ್ಯಕತೆಯಿತ್ತು. ಅದಕ್ಕಾಗಿ ಸತ್ಯಾ, ಸುದೀಪ್ ಅವರನ್ನು ಸಂಪರ್ಕಿಸಿದಾಗ ಪಾತ್ರದಲ್ಲಿ ನೆಗೆಟೀವ್ ಶೇಡ್ ಇರುವುದರಿಂದ ಸುದೀಪ್ ಇದಕ್ಕೆ ಒಪ್ಪಲಿಲ್ಲ. ನಿಮ್ಮ ಪಾತ್ರಕ್ಕೆ ಬೇಕಾದ ಆಯ್ಕೆ ಮೈಸೂರಿನಲ್ಲಿದೆ ಎಂದು ಸತ್ಯಾ ಸ್ನೇಹಿತರೊಬ್ಬರು ದರ್ಶನ್ ಹೆಸರು ಸೂಚಿಸಿದರು.

ಮೆಜೆಸ್ಟಿಕ್
ತನ್ನ ಚೊಚ್ಚಲ ಮೆಜೆಸ್ಟಿಕ್ ಚಿತ್ರದಲ್ಲಿ ಮೈಚಳಿ ಬಿಟ್ಟು ನಟಿಸಿ ನಿರ್ದೇಶಕರಿಂದ ದರ್ಶನ್ ಸೈ ಅನಿಸಿಕೊಂಡರು. ಈ ಚಿತ್ರ ಕೆಂಪೇಗೌಡ ರಸ್ತೆಯ ಮೇನಕಾ ಚಿತ್ರ ಮಂದಿರದಲ್ಲಿ ಬಿಡುಗಡೆಗೊಂಡು ಮಾರ್ನಿಂಗ್ ಶೋ ಹೌಸ್ ಫುಲ್ ಆಯಿತೋ ದರ್ಶನ್ ಭಾಗ್ಯದ ಬಾಗಿಲು ತೆರೆಯಿತು, ಕನ್ನಡಕ್ಕೆ ಮತ್ತೊಬ್ಬ ಮಾಸ್ ಹೀರೋ ಎಂದೇ ಜನಪ್ರಿಯರಾದರು. ಕೆಲವೊಂದು ಸೋಲಿನ ನಡುವೆಯೂ ದರ್ಶನ್ ನಂತರ ಹಿಂದಿರುಗಿ ನೋಡಲಿಲ್ಲ. ಸದ್ಯದ ಮಟ್ಟಿಗೆ ದರ್ಶನ್ ಅಭಿಮಾನಿಗಳ ಜೊತೆ ನಿರ್ಮಾಪಕರಿಗೂ ಚಿನ್ನದ ಮೊಟ್ಟೆ ಇಡುವ ಕೋಳಿ.

ಅಣಜಿ ನಾಗರಾಜ್
ದರ್ಶನ್ ಕಷ್ಟದ ಕಾಲದಲ್ಲಿ ಅವರ ಜೊತೆಗಿದ್ದವರು ನಿರ್ಮಾಪಕ ಅಣಜಿ ನಾಗರಾಜ್. ಮೆಜೆಸ್ಟಿಕ್ ಚಿತ್ರ ಬಿಡುಗಡೆಗೂ ಮುನ್ನ 'ಅಂದು ಮಾರುಕಟ್ಟೆಗೆ ಬರುತ್ತಿದ್ದ ಹೊಸ ಹೊಸ ಕಾರುಗಳ ಜೊತೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದ ದರ್ಶನ್ ಇಂದು ತನಗಿಷ್ಟವಾದ ಕಾರು, ಬೈಕ್ಕುಗಳನ್ನು ಖರೀದಿಸುವಂತಾಗಿರುವುದು ಅವನು ಪಟ್ಟ ಕಷ್ಟ ಮತ್ತು ನಿಯತ್ತು'. 'ಆನಂದರಾವ್ ಸರ್ಕಲಿನಲ್ಲಿ ತನ್ನ ಜೊತೆ ಚಿತ್ರಾನ್ನ ತಿನ್ನುತ್ತಿದ್ದ ಅಣಜಿ ನಾಗರಾಜಿಗೆ ನಯಾ ಪೈಸೆ ತೆಗೆದು ಕೊಳ್ಳದೇ ಕಾಲ್ ಶೀಟ್ ನೀಡಿದರು' ಎಂದು ದರ್ಶನ್ ಬಗ್ಗೆ ಅಭಿಮಾನದ ಮಾತುಗಳನ್ನಾಡುತ್ತಾರೆ ಅಣಜಿ ನಾಗರಾಜ್.

ಬುಲ್ ಬುಲ್
ಇತ್ತೀಚಿನ ತನ್ನ ಬ್ಲಾಕ್ ಬಸ್ಟರ್ 'ಬುಲ್ ಬುಲ್ ' ಚಿತ್ರದ ಮೂಲಕ ನಾಲ್ಕು ಕಲಾವಿದರನ್ನು ನಿರ್ಮಾಪಕರನ್ನಾಗಿ ಮಾಡಿದ ದರ್ಶನ್ ಆ ಚಿತ್ರದ ಮೂಲಕ ನಾಲ್ಕೂ ಜನರಿಗೆ ಕನಿಷ್ಠ 35 ಲಕ್ಷ ರೂಪಾಯಿ ಲಾಭ ಬರುವಂತೆ ಮಾಡಿದರು. ತನ್ನ ಕಷ್ಟಕ್ಕೆ ನೆರವಾದ ಎಲ್ಲರಿಗೂ ನೆರವಾಗಿ ಜೀವನದಲ್ಲಿ ನೆಲೆಯೂರುವಂತೆ ಮಾಡಿದ್ದಾರೆ ಅನ್ನುತ್ತಾರೆ ದರ್ಶನ್ ಸ್ನೇಹಿತರು. ಆಲ್ ದಿ ಬೆಸ್ಟ್ ದರ್ಶನ್.


Click it and Unblock the Notifications











