ಕಾಂತಾರದಲ್ಲಿ ಆಕರ್ಷಕ ಕಣ್ಣಿನ ಬಸ್ ಕಂಡೆಕ್ಟರ್ ಗೆ ಅವಕಾಶ ನೀಡಿದ ರಿಷಬ್ ಶೆಟ್ಟಿ!
ಕಾಂತಾರ ಚಿತ್ರ ಅದ್ಭುತ ಯಶಸ್ಸನ್ನು ಕಂಡಿದೆ. ಭಾರತದೆಲ್ಲೆಡೆ ಕಾಂತಾರ ಪ್ರೇಕ್ಷಕರನ್ನು ಅಯಸ್ಕಾಂತದಂತೆ ಸೆಳೆಯುತ್ತಿದೆ. ಕಾಂತಾರ ಚಿತ್ರದಲ್ಲಿ ಅಭಿನಯಿಸಿದ ಪ್ರತಿಯೋರ್ವ ಕಲಾವಿದ ಕಾಂತಾರ ಚಿತ್ರ ಯಶಸ್ಸಿಗೆ ಖುಷಿ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಬಹುತೇಕ ಕರಾವಳಿಯ ಕಲಾವಿದರೇ ಇದ್ದು, ಸಣ್ಣ ಸಣ್ಣ ಕಲಾವಿದರನ್ನೂ ಒಗ್ಗೂಡಿಸಿ ರಿಷಬ್ ಶೆಟ್ಟಿ ಚಿತ್ರ ಮಾಡಿದ್ದಾರೆ.
ಸಿನಿಮಾದ ಪ್ರತಿ ಪಾತ್ರಕ್ಕೂ ಸರಿಯಾಗಿ ಹೊಂದಿಕೆ ಆಗುವಂಥಹಾ ಕಲಾವಿದರನ್ನೇ ಹೆಕ್ಕಿ ಪಾತ್ರ ಮಾಡಿಸಿದ್ದಾರೆ ರಿಷಬ್ ಶೆಟ್ಟಿ. ಸಿನಿಮಾದಲ್ಲಿ ಬರುವ ಸಣ್ಣ ಪಾತ್ರಗಳ ಬಗ್ಗೆಯೂ ವಿಶೇಷ ಕಾಳಜಿವಹಿಸಿ ನಟರನ್ನು ಆಯ್ಕೆ ಮಾಡಲಾಗಿದೆ.
ಬಿಳಿ ವಸ್ತ್ರವೊಂದನ್ನು ಸೊಂಟಕ್ಕೆ ಧರಿಸಿ, ಸಣ್ಣಗೆ ಕೂದಲು ಬಿಟ್ಟಿದ್ದ ವ್ಯಕ್ತಿಯೊಬ್ಬ ಓಹ್... ಎಂದು ಅಬ್ಬರಿಸುವ ದೃಶ್ಯ ಟ್ರೈಲರ್ನಲ್ಲಿಯೇ ಬಹಳ ಗಮನ ಸೆಳೆದಿತ್ತು. ಸಿನಿಮಾದಲ್ಲಿಯೂ ಈ ಪಾತ್ರ ಗಮನ ಸೆಳೆದಿದೆ. ಈ ಪಾತ್ರವನ್ನು ನಿರ್ವಹಿಸಿದವರು ನವೀನ್ ಬೋಂದೆಲ್, ಬಹಳ ವರ್ಷ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದವರು. ಇವರ ಕಣ್ಣು ರಿಷಬ್ಗೆ ಇಷ್ಟವಾದ ಕಾರಣ ಆ ಪಾತ್ರಕ್ಕೆ ನವೀನ್ ಬೋಂದೆಲ್ ಅನ್ನು ರಿಷಬ್ ಶೆಟ್ಟಿ ಆಯ್ಕೆ ಮಾಡಿದರು.
ಆಕರ್ಷಕ ಕಣ್ಣು ಹೊಂದಿದ ನವೀನ್ ದೈವಾವೇಷವಾದ ಸಂಧರ್ಭದಲ್ಲಿ ಆರ್ಭಟಿಸುವ ದೃಶ್ಯ ಅದ್ಭುತವಾಗಿ ಮೂಡಿಬಂದಿದೆ. ಚಿತ್ರ ಬಿಡುಗಡೆಯಾದ ಬಳಿಕವೂ ನವೀನ್ ಅಭಿನಯಕ್ಕೆ ಅದ್ಭುತ ಪ್ರತಿಕ್ರಿಯೆ ಲಭ್ಯವಾಗಿದೆ. ಕಾಂತಾರ ಚಿತ್ರದಲ್ಲಿ ಕೇವಲ ಎರಡು ದಿನ ಶೂಟಿಂಗ್ ಮಾಡಿ ತನ್ನ ಮನೋಜ್ಞ ನಟನೆಯಿಂದ ಚಿತ್ರ ರಸಿಕರ ಮನಗೆದ್ದಿರುವ ನವೀನ್ ಬೋಂದೆಲ್ 'ಫಿಲ್ಮಿಬೀಟ್' ಕನ್ನಡದ ಜೊತೆ 'ಕಾಂತಾರ' ಚಿತ್ರದ ವಿಶೇಷ ಅನುಭವವನ್ನು ಹಂಚಿಕೊಂಡಿದ್ದಾರೆ.

'ಕಾಂತಾರ ಚಿತ್ರದ ಪಾತ್ರಧಾರಿ ಎನ್ನುವುದಕ್ಕೆ ಹೆಮ್ಮೆ ಇದೆ'
ಕಾಂತಾರ ಚಿತ್ರದ ಪಾತ್ರಧಾರಿ ಅಂತಾ ಹೇಳೋಕೆ ತುಂಬಾ ಹೆಮ್ಮೆ ಆಗುತ್ತಿದೆ. ನಾನು ಒಂದು ದಿನ ಕಾವೂರಿನಲ್ಲಿ ಪೇಟೆಗೆ ಅಂತಾ ಹೋದವನಿಗೆ ಪದವಿನಂಗಡಿ ಕೊರಗಜ್ಜ ದೈವಸ್ಥಾನದ ಮುಖೇಶ್ ಪಂಬಂಧ ಕರೆ ಮಾಡಿ ಬರೋಕೆ ಹೇಳಿದರು. ರಿಷಬ್ ಸರ್ ಸಿನಿಮಾ ಇದೆ ನಟನೆ ಮಾಡುತ್ತೀರಾ ಅಂತಾ ಕೇಳಿದಾಗ ತುಂಬಾ ಆಲೋಚನೆ ಮಾಡಿದೆ. ರಿಷಬ್ ಶೆಟ್ಟಿ ಸಿನಿಮಾದಲ್ಲಿ ನಾನು ಸಣ್ಣ ಕಲಾವಿದ ನಟನೆ ಮಾಡೋದಾ ಅಂತಾ ನನ್ನಲ್ಲೇ ಪ್ರಶ್ನಾರ್ಥಕ ಚಿಹ್ನೆ ಮೂಡಿತು. ಮೊದಲು ನಿರ್ದೇಶನ ತಂಡದ ಜೊತೆಗೆ ನನ್ನನ್ನು ಮಾತನಾಡಿಸಿದರು. ಆಗಲು ನನಗೆ ನಂಬೋಕೆ ಸಾಧ್ಯ ಆಗಿರಲಿಲ್ಲ. ಎಲ್ಲಾ ಸಿನಿಮಾಗಳಿಗೆ ಆಡಿಷನ್ ಕೊಟ್ಟಿದ ಹಾಗೆ ಕಾಂತಾರಾಗೂ ಕೊಟ್ಟು ಬಂದೆ. ಮತ್ತೊಂದು ದಿನ ಫೋನ್ ಮಾಡಿ ಮೀಸೆ ತೆಗೆಯಬಹುದಾ ಅಂತಾ ಕೇಳಿದರು. ಆಗ ಕಾಂತಾರ ಚಿತ್ರದಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿದೆ ಅಂತಾ ಧೃಡವಾಯಿತು ಎಂದು ನವೀನ್ ಬೋಂದೆಲ್ ಹೇಳಿದ್ದಾರೆ.

ಕಾರು ಕಳಿಸಿ ಸೆಟ್ಗೆ ಕರೆಸಿಕೊಂಡರು: ನವೀನ್
ಕಾಂತಾರ ಚಿತ್ರದಲ್ಲಿ ದೈವ ಪಾತ್ರಿ ಪಾತ್ರ ಅಂತಾ ನನಗೆ ಗೊತ್ತಿರಲಿಲ್ಲ. ಆದರೆ ಮೀಸೆ ತೆಗೆಯಬೇಕು ಅಂತಾ ಹೇಳಿದಾಗ ಈ ತರಹದ ಪಾತ್ರವೇ ಆಗಿರಬಹುದು ಅಂತಾ ಕಲ್ಪನೆ ಬಂತು. ಮೊದಲು ಪಿಲಿಕುಳ ದಲ್ಲಿ ಮೌಂಟೇಜ್ ಶೂಟ್ ಆಯಿತು. ಬಳಿಕ ಕೆರಾಡಿಯಲ್ಲಿ ಶೂಟಿಂಗ್ ಆಯಿತು. ನನಗೆ ವಿಗ್ ಎಲ್ಲಾ ಹಾಕಿ ಸಣ್ಣ ಬಿಳಿ ಬಣ್ಣದ ವಸ್ತ್ರ ನೀಡಿದರು ಆಗ ಸಿನಿಮಾ 80ರ ದಶಕದಿಂದ ಶುರುವಾಗುತ್ತದೆ ಅನ್ನೋದು ಗೊತ್ತಾಯಿತು. ನಾನು ಬಸ್ ನಲ್ಲಿ ಪ್ರಯಾಣಿಸುವ ವ್ಯಕ್ತಿ, ಅಲ್ಲಿಗೆ ಹೋಗೋದು ತುಂಬಾ ಕಷ್ಟ ಆಗುವ ಹಿನ್ನಲೆಯಲ್ಲಿ ಮನೆಗೆ ಕಾರು ಕಳುಹಿಸಿದರು. ಕೆರಾಡಿಯಲ್ಲಿ ಕಾಡಿನ ನಡುವೆ ಶೂಟಿಂಗ್ ಆಯಿತು. ಮೇಕಪ್ ಹಾಕಿದ ನಂತರ ಶೂಟಿಂಗ್ ಮುಗಿಯುವ ತನಕ ಚಪ್ಪಲಿ ಧರಿಸೋಕೆ ಅವಕಾಶ ಇರಲಿಲ್ಲ. ಎಲ್ಲಾ ದೈವ ಪಾತ್ರಮಾಡುವ ಕಲಾವಿದರಿಗೂ ಅದೇ ನಿಯಮ ಇತ್ತು ಅಂತಾ ನವೀನ್ ಬೋಂದೇಲ್ ಹೇಳಿದ್ದಾರೆ.

'ಕಣ್ಣನ್ನು ರಿಷಬ್ ಸರ್ ಚೆನ್ನಾಗಿ ತೋರಿಸಿದ್ದಾರೆ'
ಎಲ್ಲಾ ದೊಡ್ಡ ಕಲಾವಿದರು ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಹನ್ನೆರಡು ವರ್ಷದ ಸಿನಿಮಾ ಬದುಕಿನಲ್ಲಿ ಇಂತಹ ಪ್ರೋತ್ಸಾಹ ಎಲ್ಲೂ ಸಿಗಲಿಲ್ಲ. ಕಣ್ಣು ದೇವರು ಕೊಟ್ಟ ವರ. ನಾನು ಲೆನ್ಸ್ ಹಾಕಲ್ಲ. 45 ವರ್ಷದಿಂದ ಈ ಕಣ್ಣನ್ನು ಯಾರೂ ಗುರುತಿಸಿರಲಿಲ್ಲ. ಈ ಕಣ್ಣನ್ನು ರಿಷಬ್ ಸರ್ ಚೆನ್ನಾಗಿ ಬಳಸಿ ತೋರಿಸಿದ್ದಾರೆ ಅಂತಾ ನವೀನ್ ಹರ್ಷ ವ್ಯಕ್ತಪಡಿಸಿದರು.

ಸಿಟಿ ಬಸ್ನಲ್ಲಿ ಕಂಡಕ್ಟರ್
ಸಿಟಿ ಬಸ್ ನಲ್ಲಿ ಮೊದಲು ಕಂಡೆಕ್ಟರ್ ಆಗಿದ್ದೆ. ಮಧ್ಯಾಹ್ನ ದಿಂದ ಮಧ್ಯಾಹ್ನ ಹೀಗೆ ವೃತ್ತಿ ಸಮಯ ಇತ್ತು. ಮಧ್ಯಾಹ್ನ ದ ಬಳಿಕದ ಸಮಯವನ್ನು ಹೇಗೆ ಬಳಸಬೇಕೆಂದು ಯೋಚನೆ ಮಾಡಿದಾಗ ನಾಟಕ ರಂಗದತ್ತ ಮನಸ್ಸು ಹೊರಳಿತು. ನಾಟಕ ರಂಗದಲ್ಲಿ ಕೆಲಸ ಮಾಡಿ ಸದ್ಯ ತುಳುವರೆ ತುಡರ್ ಸುರತ್ಕಲ್ ಎಂಬ ನಾಟಕ ತಂಡದಲ್ಲಿ ಕೆಲಸ ಮಾಡುತ್ತಿದ್ದೇನೆ. ರಿಷಬ್ ಶೆಟ್ಟಿ ಎಲ್ಲರನ್ನೂ ಗುರುತಿಸಿ ಅವಕಾಶ ನೀಡಿ ಬೆಳಕಿಗೆ ತಂದಿದ್ದಾರೆ. ಚಿತ್ರ ಕಲಾವಿದನಾಗಿ ನಮ್ಮಮಣ್ಣು, ಜಲ, ನುಡಿ, ಸಂಸ್ಕೃತಿ ನಮಗೆ ಗೊತ್ತಿದೆ. ಅದು ನಮಗೆ ಗೊತ್ತಿದ್ದರೆ ಸಾಕು ಬೇರೆಯವರು ಹೇಳಿದರೆ ಅದಕ್ಕೆ ತಲೆಕೆಡಿಸಿಕೊಳ್ಳಬಾರದು ಅಂತಾ ನವೀನ್ ಹೇಳಿದ್ದಾರೆ.


Click it and Unblock the Notifications











