ನಿಜವಾಯ್ತು ರಿಷಬ್ ಶೆಟ್ಟಿ ಸಿನಿಮಾ ಕತೆ: ಕನ್ನಡ ಮಕ್ಕಳಿಗೆ ಕೇರಳ ಸರ್ಕಾರದಿಂದ ತೊಂದರೆ
ರಿಷಬ್ ಶೆಟ್ಟಿ ನಿರ್ದೇಶನದ 'ಸ.ಹಿ.ಪ್ರಾ ಶಾಲೆ ಕಾಸರಗೋಡು: ಕೊಡುಗೆ ರಾಮಣ್ಣ ರೈ' ಸಿನಿಮಾ 2018 ರಲ್ಲಿ ಬಿಡುಗಡೆ ಆಗಿತ್ತು. ಕರ್ನಾಟಕದ ಗಡಿ ಜಿಲ್ಲೆ ಕಾಸರಗೋಡಿನ ಸರ್ಕಾರಿ ಶಾಲೆಯ ಪರಿಸ್ಥಿತಿ, ಕೇರಳ ಸರ್ಕಾರದ ಮಲತಾಯಿ ಧೋರಣೆ ಬಗೆಗಿನ ಕತೆಯನ್ನು ಸಿನಿಮಾ ಹೊಂದಿತ್ತು.
ಕಾಸರಗೋಡಿನ ಸರ್ಕಾರಿ ಶಾಲೆಗೆ ಕೇರಳದ ಅಧಿಕಾರಿಯೊಬ್ಬ ಮಲಯಾಳಿ ಶಿಕ್ಷಕನನ್ನು ನೇಮಿಸಿದ ಕಾರಣ ಕನ್ನಡ ಕಲಿಯುವ ಆಸೆಯುಳ್ಳ ಮಕ್ಕಳಿಗೆ ಸಮಸ್ಯೆ ಉಂಟಾಗುತ್ತದೆ. ಪೋಷಕರ ಗಲಾಟೆಯಿಂದ ಶಾಲೆ ಮುಚ್ಚುತ್ತದೆ. ಶಾಲೆ ಪುನಃ ಆರಂಭಗೊಳ್ಳುವಂತೆ ಮಾಡಲು ಮಕ್ಕಳು ಮಾಡುವ ಪ್ರಯತ್ನ, ಶಾಲೆ ಪುನರಾರಂಭ ಮಾಡಲು ಅನಂತ್ನಾಗ್ ಮಾಡುವ ಯತ್ನ ಒಟ್ಟಾರೆ ಶಿಕ್ಷಣ ಪದ್ಧತಿ, ಮಾತೃಭಾಷೆ ಶಿಕ್ಷಣದ ಮಹತ್ವ ಇನ್ನಿತರೆ ಅಂಶಗಳನ್ನು ಈ ಸಿನಿಮಾ ಒಳಗೊಂಡಿತ್ತು. ರಿಷಬ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿದ್ದವು.
ಈಗ ಈ ಸಿನಿಮಾದ ಕತೆ ನಿಜವಾಗಿದೆ. ಕೇರಳ ಸರ್ಕಾರ, ಕಾಸಗೋಡಿನ ಕನ್ನಡ ಶಾಲೆಗೆ ಮಲಯಾಳಿ ಶಿಕ್ಷನನ್ನು ನೇಮಿಸಿ ಕನ್ನಡ ಮಾತೃಭಾಷೆಯ ವಿದ್ಯಾರ್ಥಿಗಳಿಗೆ ಕಲಿಕೆಗೆ ತೊಂದರೆ ನೀಡುತ್ತಿದೆ. ಕಾಸರಗೋಡು ಜಿಲ್ಲೆಯ ಅಂಗಡಿಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಲಯಾಳಂ ಶಿಕ್ಷಕನ ನೇಮಕವಾಗಿದ್ದು, ಕೇರಳ ಸರ್ಕಾರದ ಈ ನಿರ್ಧಾರಕ್ಕೆ ಸ್ಥಳೀಯ ಜನ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅಂಗಡಿ ಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೇರಳದ ಕೊಟ್ಟಾಯಂ ಜಿಲ್ಲೆಯ ತಿರುವಾಂಕೂರ್ ನಿವಾಸಿ ಜೋಕಬ್ ಎಂಬ ಶಿಕ್ಷಕನ ನೇಮಕವಾಗಿದೆ. ಕನ್ನಡ ಮಕ್ಕಳೆ ಇರುವ ಈ ಶಾಲೆಗೆ ಕನ್ನಡ ಬಾರದ ಮಲಯಾಳಂ ಶಿಕ್ಷಕ ನೇಮಕವಾಗಿರೋದು ಗಡಿನಾಡ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.
ಅಂಗಡಿಮೊಗರುವಿನ ಕನ್ನಡ ಫ್ರೌಢ ಶಾಲೆಯಲ್ಲಿ ಮಲಯಾಳಂ ಶಿಕ್ಷಕ ಸಮಾಜ ವಿಜ್ಞಾನ ಪಾಠ ಭೋಧಿಸಲಿದ್ದಾರೆ. 50 ಅಧಿಕ ಕನ್ನಡ ಮಕ್ಕಳಿರುವ ಫ್ರೌಢ ಶಾಲೆ ಇದಾಗಿದ್ದು, ಕನ್ನಡ ಬಾರದ ಮಲೆಯಾಳಂ ಶಿಕ್ಷಕನನ್ನು ನೇಮಿಸಿದ ಸರ್ಕಾರದ ನಿರ್ಧಾರದ ಬಗ್ಗೆ ಗಡಿನಾಡ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಶಾಲೆಗೆ ಮಲಯಾಳಿ ಶಿಕ್ಷಕ
ಜೋಕಬ್ ಕೇರಳದ ಆಡಳಿತ ಪಕ್ಷದ ಬೆಂಬಲಿಗನಾಗಿದ್ದು, ಇದೇ ಕಾರಣದಿಂದ ರಾಜಕೀಯ ಪ್ರಭಾವದಿಂದ ಮಲಯಾಳಂ ಶಿಕ್ಷಕನನ್ನು ನೇಮಿಸಿರುವ ಆರೋಪ ವ್ಯಕ್ತವಾಗಿದೆ. ಅಂಗಡಿಮೊಗರು ಪ್ರದೇಶ ಸಿಪಿಐಎಂ ಬಾಹುಳ್ಯದ ಕೇಂದ್ರವಾಗಿದ್ದು, ಅದೇ ಭಾಗಕ್ಕೆ ಶಿಕ್ಷಕನನ್ನು ನೇಮಕ ಮಾಡಿರೋದು ಜನರಿಗೆ ವಿರೋಧ ಮಾಡೋಕೂ ಅವಕಾಶವನ್ನು ನೀಡಲಾಗಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಲು ಗಡಿನಾಡ ಕನ್ನಡಿಗರು ಒತ್ತಾಯ ಮಾಡಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷಕ್ಕೂ ಅದೇ ಶಿಕ್ಷಕ?
ಸದ್ಯ ಫ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದೆ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷಾ ಸಮಯವೂ ಹತ್ತಿರ ಬಂದಿರುವುದರಿಂದ ಈಗ ಮಲಯಾಳಂ ಶಿಕ್ಷಕನ ನೇಮಕ ಮಾಡಿದರೆ ಪರೀಕ್ಷೆ ಸಮಯವಾಗಿರೋದರಿಂದ ಕನ್ನಡ ಶಿಕ್ಷಕನ ನೇಮಕ ಮಾಡುವಂತೆ ಪ್ರತಿಭಟನೆ ಸಾಧ್ಯತೆಯೂ ಕಡಿಮೆ ಇದೆ. ಈ ಹಿನ್ನಲೆಯಲ್ಲಿ ಈಗ ಶಿಕ್ಷಕನನ್ನು ನೇಮಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆತನನ್ನೇ ಮುಂದುವರಿಸುವ ಸರ್ಕಾರದ ಯೋಚನೆ ಸರ್ಕಾರದ್ದಾಗಿದೆ ಎಂದು ಗಡಿನಾಡ ಕನ್ನಡಿಗರು ಆರೋಪಿಸಿದ್ದಾರೆ.

ಕನ್ನಡ ಶಾಲೆಗಳನ್ನು ರಕ್ಷಿಸಿ: ಗಡಿನಾಡ ಕನ್ನಡಿಗರ ಮನವಿ
ಹೀಗಾಗಿ ಕೇರಳದಲ್ಲಿ ಕನ್ನಡ ಮತ್ತು ಕನ್ನಡ ಶಾಲೆಯನ್ನು ರಕ್ಷಣೆ ಮಾಡುವಂತೆ ಕರ್ನಾಟಕ ಸರ್ಕಾರವನ್ನು ಗಡಿನಾಡ ಕನ್ನಡಿಗರು ಮನವಿ ಮಾಡಿದ್ದಾರೆ. ಈಗಾಗಲೇ ಗಡಿಜಿಲ್ಲೆಯಾದ ಕಾಸರಗೋಡುವಿನಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿದ್ದು, ಇದ್ದ ಶಾಲೆಗಳಲ್ಲಿಯೂ ಕನ್ನಡ ಬಾರದ ಶಿಕ್ಷಕನನ್ನು ನೇಮಕ ಮಾಡಿ ಕನ್ನಡ ಕಲಿಯುವ ವಿದ್ಯಾರ್ಥಿಗಳ ಬಾಳಿನಲ್ಲಿ ಚೆಲ್ಲಾಟ ಆಡುತ್ತಿದ್ದಾರೆ ಅಂತಾ ಗಡಿನಾಡ ಕನ್ನಡಿಗರು ಆರೋಪಿಸಿದ್ದಾರೆ.

ಸಿನಿಮಾದಲ್ಲಿ ಅನಾವರಣ
ಕಾಸರಗೋಡು ಕೇರಳದ ಜೊತೆ ವಿಲೀನವಾದ ಬಳಿಕ ಭಾಷಾವಾರು ಸಮಸ್ಯೆಯನ್ನು ಗಡಿಭಾಗದ ಜನರು ತೀವ್ರವಾಗಿ ಅನುಭವಿಸಿದ್ದರು. ಕಾಸರಗೋಡು ವಿನ ಕನ್ನಡ ಶಾಲೆಯ ನೈಜ ದುಸ್ಥಿತಿಯನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಅನಾವರಣ ಮಾಡಿದ್ದರು. ಆದಾದ ಬಳಿಕವೂ ಕಾಸರಗೋಡು ವಿನ ಕನ್ನಡ ಶಾಲೆಗಳ ದುಸ್ಥಿತಿ ಬದಲಾಗದೇ ಇರೋದು, ಗಡಿನಾಡ ಕನ್ನಡ ಶಾಲೆಗಳ ಬಗ್ಗೆ ರಾಜ್ಯ ಸರ್ಕಾರ ಕ್ಯಾರೇ ಅನ್ನದಿರೋದು ಮಾತ್ರ ದುರಂತವಾಗಿದೆ.


Click it and Unblock the Notifications











