ಕೊನೇ ಆಟ ಮುಗಿಸಿದ ಕೆ ಜಿ ರಸ್ತೆಯ ಸಾಗರ್ ಚಿತ್ರಮಂದಿರ
ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮಾಲೀಕರಿಗೆ ಸರಿಯಾದ ಆದಾಯ ತರದ ಹಿನ್ನಲೆಯಲ್ಲಿ ನಗರದ ಒಂದೊಂದೇ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿವೆ. ಶಾಕಿಂಗ್ ನ್ಯೂಸ್ ಎನ್ನುವಂತೆ ಕೆ ಜಿ ರಸ್ತೆಯಲ್ಲಿರುವ ಪ್ರತಿಷ್ಠಿತ ಸಾಗರ್ ಚಿತ್ರಮಂದಿರ ಭಾನುವಾರ (ಜೂ 2) ತನ್ನ ಅಂತಿಮ ಪ್ರದರ್ಶನ ಪ್ರದರ್ಶಿಸಿ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದೆ.
ಕನ್ನಡ ಚಿತ್ರಗಳ ಪಾಲಿಗೆ ಮೈನ್ ಥಿಯೇಟರ್ ಆಗಿದ್ದ ಸುಸಜ್ಜಿತ ಸಾಗರ್ ಚಿತ್ರಮಂದಿರ ಬಾಗಿಲು ಹಾಕುವ ಮೂಲಕ ಚಿತ್ರೋದ್ಯಮಕ್ಕೆ ಭಾರೀ ಏಟು ಬಿದ್ದಿದೆ. ಸಾಗರ್ ಚಿತ್ರಮಂದಿರ ತೆರೆಮೆರೆಗೆ ಸರಿಯಲಿದೆ ಎನ್ನುವ ಸುದ್ದಿ ಹೋದ ವಾರ ಚಾಲ್ತಿಯಲ್ಲಿದ್ದರೂ ಚಿತ್ರಮಂದಿರದ ಆಡಳಿತ ಮಂಡಳಿ ಹಠಾತ್ತನೇ ಈ ತೀರ್ಮಾನಕ್ಕೆ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
42 ವರ್ಷಗಳಲ್ಲಿ ಸುಮಾರು 700 ಚಿತ್ರಗಳನ್ನು ಪ್ರದರ್ಶಿಸಿದ್ದ ಮತ್ತು ಗಾಂಧಿನಗರಕ್ಕೆ ಕಳಸಪ್ರಾಯದಂತಿದ್ದ ಸಾಗರ್ ಚಿತ್ರಮಂದಿರ ಹಲವು ನಿರ್ಮಾಪಕರಿಗೆ ಮತ್ತು ನಾಯಕ ನಟರಿಗೆ ಲಕ್ಕಿ ಚಿತ್ರಮಂದಿರವಾಗಿತ್ತು. ಶತದಿನ ಪ್ರದರ್ಶನ ಕಂಡ ಮೈನಾ ಚಿತ್ರ ನಿನ್ನೆ ಕೊನೆಯ ಪ್ರದರ್ಶನ ಕಂಡಿತ್ತು.
ಚಿತ್ರಮಂದಿರ ಬಂದ್ ಆದ ಬಗ್ಗೆ ಒನ್ ಇಂಡಿಯಾದ ಜೊತೆ ಮಾತನಾಡಿದ ಥಿಯೇಟರ್ ಮಾಲೀಕ ಹರ್ಷ ಪಟೇಲ್, ನಾವು ಇದುವರೆಗೆ ಕನ್ನಡ ಚಿತ್ರಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದೆವು. ಬದಲಾದ ಪರಿಸ್ಥಿತಿಯಲ್ಲಿ ಚಿತ್ರಮಂದಿರ ಕೆಡವಿ ಮಾಲ್ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ.
ಚಿತ್ರಪ್ರೇಮಿಗಳು ನಿರಾಶರಾಗಬೇಕಿಲ್ಲ. ಈ ಜಾಗದಲ್ಲಿ ಮಾಲ್ ಜೊತೆ ಎರಡು ಸ್ಕ್ರೀನ್ ಇರುವ ಮಲ್ಟಿಪ್ಲೆಕ್ಸ್ ಬರಲಿದೆ ಎಂದು ಮಾಲೀಕರು ಹೇಳಿದ್ದಾರೆ. ಗಮನಿಸ ಬೇಕಾದ ಅಂಶವೇನಂದರೆ ಕೆ ಜಿ ರಸ್ತೆಯಲ್ಲಿ ಇತರ ಚಿತ್ರಮಂದಿರಗಳಿಗೆ ಹೋಲಿಸಿದರೆ ಸಾಗರ್ ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳುವ ಚಿತ್ರಗಳು ಹೆಚ್ಚಿನ ದಿನ ಓಡುತ್ತಿದ್ದವು.
ಯುವ ನಿರ್ದೇಶಕರಿಗೆ ಚಿತ್ರಮಂದಿರ ಲಕ್ಕಿ ಥಿಯೇಟರ್ ಆಗಿತ್ತು. ಪ್ರೇಮ ಪ್ರಧಾನ ಚಿತ್ರಗಳು ಇಲ್ಲಿ ಗಣನೀಯವಾಗಿ ಯಶಸ್ಸು ಕಂಡಿತ್ತು. ಚಿತ್ರಮಂದಿರದ ಮಾಲೀಕರ ಈ ನಿರ್ಧಾರದಿಂದ ನೋವಾಗಿದೆ. ನನ್ನ ಎರಡು ಚಿತ್ರಗಳು ಇಲ್ಲಿ ಶತದಿನ ಆಚರಿಸಿದ್ದವು ಎಂದು ನಿರ್ದೇಶಕ ಶಶಾಂಕ್ ಒನ್ ಇಂಡಿಯಾದ ಜೊತೆ ಮಾತನಾಡುತ್ತಾ ಬೇಸರ ವ್ಯಕ್ತ ಪಡಿಸಿದ್ದಾರೆ.
ಸಾಗರ್ ಚಿತ್ರಮಂದಿರದಲ್ಲಿ ಶತದಿನಕ್ಕೂ ಹೆಚ್ಚು ಓಡಿದ ಕನ್ನಡ ಚಿತ್ರಗಳು

ಮುಂಗಾರುಮಳೆ
ನಿರ್ದೇಶಕ: ಯೋಗರಾಜ್ ಭಟ್
ತಾರಾಗಣದಲ್ಲಿ : ಗಣೇಶ್, ಪೂಜಾಗಾಂಧಿ, ಅನಂತ್ ನಾಗ್

ಮೊಗ್ಗಿನಮನಸು
ನಿರ್ದೇಶಕ : ಶಶಾಂಕ್
ತಾರಾಗಣದಲ್ಲಿ : ಯಶ್, ರಾಧಿಕ ಪಂಡಿತ್

ಅದ್ದೂರಿ
ನಿರ್ದೇಶಕ: ಎ ಪಿ ಅರ್ಜುನ್
ತಾರಾಗಣದಲ್ಲಿ : ಧ್ರುವ್ ಸರ್ಜಾ, ರಾಧಿಕ ಪಂಡಿತ್

ಗೌರಮ್ಮ
ನಿರ್ದೇಶಕ : ನಾಗಣ್ಣ
ತಾರಾಗಣದಲ್ಲಿ : ಉಪೇಂದ್ರ, ರಮ್ಯ, ಕೋಮಲ್

ಮನಸಾರೆ
ನಿರ್ದೇಶಕ: ಯೋಗರಾಜ್ ಭಟ್
ತಾರಾಗಣದಲ್ಲಿ : ದಿಗಂತ್, ಐಂದ್ರಿತಾ, ರಾಜು ತಾಳಿಕೋಟೆ

ಡ್ರಾಮಾ
ನಿರ್ದೇಶಕ: ಯೋಗರಾಜ್ ಭಟ್
ತಾರಾಗಣದಲ್ಲಿ : ಯಶ್, ನೀನಾಸಂ ಸತೀಶ್, ಅಂಬರೀಶ್

ಅಂಬಾರಿ
ನಿರ್ದೇಶಕ: ಎ ಪಿ ಅರ್ಜುನ್
ತಾರಗಣದಲ್ಲಿ : ಯೋಗೀಶ್, ಸುಪ್ರೀತ

ಸಂಜು ವೆಡ್ಸ್ ಗೀತಾ
ನಿರ್ದೇಶಕ: ನಾಗಶೇಖರ್
ತಾರಾಗಣದಲ್ಲಿ : ಶ್ರೀನಗರ ಕಿಟ್ಟಿ, ರಮ್ಯಾ, ಅವಿನಾಶ್

ಕೃಷ್ಣನ್ ಲವ್ ಸ್ಟೋರಿ
ನಿರ್ದೇಶಕ: ಶಶಾಂಕ್
ತಾರಾಗಣದಲ್ಲಿ : ಅಜಯ್ ರಾವ್, ರಾಧಿಕ ಪಂಡಿತ್

ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ
ನಿರ್ದೇಶಕ: ಆದಿತ್ಯ ಚೋಪ್ರ
ತಾರಾಗಣದಲ್ಲಿ : ಶಾರೂಖ್ ಖಾನ್, ಕಾಜಲ್, ಅಮರೀಶ್ ಪುರಿ

ಸೂಪರ್
ನಿರ್ದೇಶಕ: ಉಪೇಂದ್ರ
ತಾರಾಗಣದಲ್ಲಿ : ಉಪೇಂದ್ರ, ನಯನತಾರ, ರಾಕ್ಲೈನ್ ವೆಂಕಟೇಶ್

ಮಿಲನ
ನಿರ್ದೇಶಕ: ಪ್ರಕಾಶ್
ತಾರಾಗಣದಲ್ಲಿ : ಪುನೀತ್ ರಾಜಕುಮಾರ್, ಪಾರ್ವತಿ ಮೆನನ್

ಮೈನಾ
ನಿರ್ದೇಶಕ: ನಾಗಶೇಖರ್
ತಾರಾಗಣದಲ್ಲಿ : ಚೇತನ್, ನಿತ್ಯಾ ಮೆನನ್, ಶರತ್ ಕುಮಾರ್


Click it and Unblock the Notifications











