Mata Guru Prasad : ವಂಚನೆ ಪ್ರಕರಣ: ನಿರ್ದೇಶಕ, ನಟ ಗುರುಪ್ರಸಾದ್ ಬಂಧನ
'ಮಠ', 'ಎದ್ದೇಳು ಮಂಜುನಾಥ' ಸಿನಿಮಾಗಳ ನಿರ್ದೇಶಕ ಗುರುಪ್ರಸಾದ್ ಅನ್ನು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.
ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗುರುಪ್ರಸಾದ್ ಅನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಕೆಲ ಸಮಯದ ಹಿಂದೆ ಶ್ರೀನಿವಾಸ್ ಹೆಸರಿನ ವ್ಯಕ್ತಿಯೊಬ್ಬರು ಗುರುಪ್ರಸಾದ್ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆಗೆ ಗುರುಪ್ರಸಾದ್ ಸತತವಾಗಿ ಗೈರಾಗಿದ್ದರಿಂದ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಇದೇ ಕಾರಣಕ್ಕೆ ಗಿರಿ ನಗರ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿದ್ದು, ಪ್ರಾಥಮಿಕ ವಿಚಾರಣೆ ಹಾಗೂ ತಪಾಸಣೆ ಬಳಿಕ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಲಾಗುತ್ತದೆ.
ಶ್ರೀನಿವಾಸ್ ಅವರಿಗೆ ಗುರುಪ್ರಸಾದ್ 30 ಲಕ್ಷ ಹಣ ನೀಡಬೇಕಿತ್ತು ಎನ್ನಲಾಗಿದೆ. ಹಣ ಪಡೆಯುವಾಗ ಗುರುಪ್ರಸಾದ್ ನೀಡಿದ್ದ ಚೆಕ್ ಬೌನ್ಸ್ ಆಗಿದ್ದು ಪ್ರಕರಣವು ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ವಿಚಾರಣೆಗೆ ಪದೇ ಪದೇ ಗುರುಪ್ರಸಾದ್ ಗೈರಾಗಿದ್ದ ಕಾರಣ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು.
2006 ರಲ್ಲಿ ಬಿಡುಗಡೆ ಆದ 'ಮಠ' ಸಿನಿಮಾವನ್ನು ಗುರುಪ್ರಸಾದ್ ನಿರ್ದೇಶನ ಮಾಡಿದ್ದರು. ಆ ಸಿನಿಮಾದಲ್ಲಿ ಜಗ್ಗೇಶ್ ನಟಿಸಿದ್ದರು. ಬಳಿಕ 'ಎದ್ದೇಳು ಮಂಜುನಾಥ' ಸಿನಿಮಾವನ್ನು ಗುರುಪ್ರಸಾದ್ ನಿರ್ದೇಶಿಸಿದ್ದರು, ಕಲ್ಟ್ ಸಿನಿಮಾ ಎಂದೇ ಹೆಸರಾಗಿರುವ ಈ ಸಿನಿಮಾದಲ್ಲಿಯೂ ಜಗ್ಗೇಶ್ ನಟಿಸಿದ್ದರು. ಡಾಲಿ ಧನಂಜಯ್ ನಟಿಸಿರುವ 'ಡೈರೆಕ್ಟರ್ ಸ್ಪೆಷಲ್' ಸಿನಿಮಾವನ್ನು ಗುರುಪ್ರಸಾದ್ ನಿರ್ದೇಶನ ಮಾಡಿದ್ದರು. ಇದೀಗ ಜಗ್ಗೇಶ್ ನಟಿಸುತ್ತಿರುವ 'ರಂಗನಾಯಕ' ಸಿನಿಮಾವನ್ನು ಗುರುಪ್ರಸಾದ್ ನಿರ್ದೇಶನ ಮಾಡುತ್ತಿದ್ದರು.


Click it and Unblock the Notifications











