ಕ್ಯಾಬ್ ಡ್ರೈವರ್ನಿಂದ ಕಿರುಕುಳ: ನಟಿ ಸಂಜನಾ ಗಲ್ರಾನಿ ದೂರು
ಕ್ಯಾಬ್ ಡ್ರೈವರ್ ಒಬ್ಬ ಕಿರುಕುಳ ನೀಡಿದ್ದಾಗಿ ನಟಿ ಸಂಜನಾ ಗಲ್ರಾನಿ ಆರೋಪಿಸಿದ್ದಾರೆ. ಘಟನೆ ಬಗ್ಗೆ ಕ್ಯಾಬ್ ಸೇವೆ ಒದಗಿಸುವ ಓಲಾ ಸಂಸ್ಥೆಗೆ ದೂರು ನೀಡಿದ್ದಾರೆ.
ಸಂಜನಾ ಗಲ್ರಾನಿ ಇಂದು ಬೆಳಿಗ್ಗೆ ಓಲಾ ಬುಕ್ ಮಾಡಿ Ka 50 - 8960 ಸಂಖ್ಯೆಯ ಕ್ಯಾಬ್ ಹತ್ತಿದ್ದಾರೆ. ಕ್ಯಾಬ್ ಡ್ರೈವರ್ ಸುಸಾಯ್ ಮಣಿ ಎಂಬುವರಿಗೆ ಎಸಿ ಹೆಚ್ಚು ಮಾಡುವಂತೆ ಹೇಳಿದ್ದಾರೆ. ಆದರೆ ಡ್ರೈವರ್ ಕೇವಲ ಒಂದು ಪಾಯಿಂಟ್ನಲ್ಲಿ ಏಸಿ ಇರಿಸಿ, ಇದಕ್ಕಿಂತಲೂ ಹೆಚ್ಚು ಮಾಡಲು ಸಾಧ್ಯವಿಲ್ಲವೆಂದು, ಹೆಚ್ಚು ಒತ್ತಾಯ ಮಾಡಿದರೆ ಅರ್ಧ ದಾರಿಯಲ್ಲಿಯೇ ಇಳಿಸಿ ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗೆಂದು ಸಂಜನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
''ನಾವು ನಾಲ್ಕು ಮಂದಿ ಕಾರಿನಲ್ಲಿದ್ದೆವು, ಇಕ್ಕಟ್ಟಾದ ಜಾಗದಲ್ಲಿ ಕಷ್ಟಪಟ್ಟು ಪ್ರಯಾಣ ಮಾಡಿದೆವು, ಏಸಿ ಏರಿಸುವಂತೆ ಮನವಿ ಮಾಡಿದರೂ ಆತ ನಮ್ಮ ಮನವಿ ಕೇಳಿಸಿಕೊಳ್ಳದೆ ನಮ್ಮ ಮೇಲೆಯೇ ಬೆದರಿಕೆ ಹಾಕಿದ. ನಾನು ಚಿತ್ರೀಕರಣಕ್ಕೆ ಹೋಗುತ್ತಿದ್ದರಿಂದ ಎರಡು ಸೂಟ್ಕೇಸ್ಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದೆ. ಆತ ಮಧ್ಯದಲ್ಲಿಯೇ ನನ್ನನ್ನು ಇಳಿಸಿ ಹೋದರೆ ಏನು ಮಾಡಬಹುದೆಂಬ ಭಯದಲ್ಲಿ ಕಷ್ಟದಲ್ಲಿಯೇ ಪ್ರಯಾಣ ಮುಂದುವರೆಸಿದೆ'' ಎಂದಿದ್ದಾರೆ ಸಂಜನಾ.

''ನಾವು ಹತ್ತಿದ ಕಾರಿನ ಮುಂದಿನ ಗಾಜು ಸಹ ಒಡೆದಿತ್ತು. ಓಲಾ ನಮ್ಮಿಂದ ಪೂರ್ಣ ಚಾರ್ಜ್ ವಸೂಲಿ ಮಾಡುತ್ತದೆ. ಹಾಗಿದ್ದ ಮೇಲೆ ಹೀಗೆ ಡ್ಯಾಮೇಜ್ ಆಗಿರುವ ಕಾರನ್ನು ಸೇವೆಗೆ ಒದಗಿಸುವುದು ಏಕೆ? ಇಂಥಹಾ ಕರುಣೆ ಇಲ್ಲದ ಅಮಾನವೀಯ ಡ್ರೈವರ್ಗಳನ್ನು ಇಟ್ಟುಕೊಳ್ಳುವುದೇಕೆ? ನಾನೊಬ್ಬ ಸಾರ್ವಜನಿಕ ಜೀವನದಲ್ಲಿರುವ ಮಹಿಳೆ, ನನಗೆ ಧ್ವನಿ ಎತ್ತುವಷ್ಟು ಶಕ್ತಿ ಇದೆ. ಸಾಮಾನ್ಯ ಮಹಿಳೆಯೊಬ್ಬರಿಗೆ ಇದೇ ಸ್ಥಿತಿ ಎದುರಾದರೆ ಆಕೆ ಏನು ಮಾಡಬೇಕು?'' ಎಂದು ಪ್ರಶ್ನಿಸಿದ್ದಾರೆ ಸಂಜನಾ ಗಲ್ರಾನಿ.
ಓಲಾ ಕ್ಯಾಬ್ ಡ್ರೈವರ್ಗಳ ಬಗ್ಗೆ ದೂರುಗಳು ಬರುವುದು ಹೊಸದೇನೂ ಅಲ್ಲ. ಬೆಂಗಳೂರಿನಲ್ಲಿ ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಓಲಾ ಕ್ಯಾಬ್ ಗ್ರಾಹಕರು ಡ್ರೈವರ್ಗಳ ಮೇಲೆ ದೂರು ನೀಡುತ್ತಲೇ ಇರುತ್ತಾರೆ.
ಸಂಜನಾ ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ಗೆ ಪ್ರತಿಯಾಗಿ ಕೆಲವು ಕಮೆಂಟ್ಗಳು ಬಂದಿದ್ದು, ''ಓಲಾ ಹಾಗೂ ಊಬರ್ ಆಡಳಿತ ಮಂಡಳಿ ತಮ್ಮ ಕ್ಯಾಬ್ ಡ್ರೈವರ್ಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಡ್ರೈವರ್ಗಳು ಕರೆ ಮಾಡಿ ರೈಡ್ ಕ್ಯಾನ್ಸಲ್ ಮಾಡುವಂತೆ ಧಮ್ಕಿ ಹಾಕುತ್ತಾರೆ. ನಗದು ಕೊಟ್ಟರೆ ಮಾತ್ರ ಬರುವುದಾಗಿ ಹೇಳುತ್ತಾರೆ. ಡ್ರೈವ್ ಮಾಡುವಾಗ ಸದಾ ಫೋನಿನಲ್ಲಿ ಮಾತನಾಡುತ್ತಿರುತ್ತಾರೆ'' ಎಂದು ಉಮಾ ಶಂಕರ್ ಎನ್ನುವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
''ಕೆಲವು ನಗರಗಳಲ್ಲಿ ಏಸಿ ಆನ್ ಮಾಡಲು ಹೆಚ್ಚುವರಿ ಹಣ ಕೇಳುತ್ತಾರೆ. ಇದೇನು ಓಲಾದ ನಿಯಮವೇ ಗೊತ್ತಿಲ್ಲ'' ಎಂದಿದ್ದಾರೆ ಮತ್ತೊಬ್ಬರು. ''ಓಲಾ ಮನಿ ಅಥವಾ ಡಿಜಿಟಲ್ ಮೂಲಕ ಹಣ ನೀಡುವುದಾದರೆ ಸವಾರಿಗೆ ಬರುವುದಿಲ್ಲವೆಂದು ಕೆಲವು ಓಲಾ ಡ್ರೈವರ್ಗಳು ಹೇಳುತ್ತಾರೆ'' ಎಂದು ಕಮೆಂಟ್ ಮಾಡಿದ್ದಾರೆ ವೆಂಕಟೇಶ್ ಎಂಬುವರು.
ಸಂಜನಾ ಗಲ್ರಾನಿ ವಿಷಯಕ್ಕೆ ಮರುಳುವುದಾದರೆ, ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಪಟ್ಟು ಜಾಮೀನಿನ ಮೇಲೆ ಹೊರಗೆ ಬಂದ ನಂತರ ಸಾಮಾಜಿಕವಾಗಿ ಸಾಕಷ್ಟು ಸಕ್ರಿಯರಾಗಿದ್ದಾರೆ ಈ ನಟಿ. ಕೋವಿಡ್ ಸಮಯದಲ್ಲಿ ಹಲವು ಸಮಾಜ ಮುಖಿ ಕಾರ್ಯಗಳನ್ನು ಮಾಡಿದ್ದ ಸಂಜನಾ ಈಗ ಮತ್ತೆ ಚಿತ್ರೀಕರಣಗಳಲ್ಲಿ ತೊಡಗಿಸಿಕೊಂಡಿದ್ದಾರೆ.


Click it and Unblock the Notifications











