'50 ವರ್ಷಗಳ ದುಡಿಮೆಗೆ ಸಾರ್ಥಕತೆ ದೊರಕಿದೆ': ರಾಜ್ಯೋತ್ಸವ ಪ್ರಶಸ್ತಿ ಕುರಿತು ಎ.ಟಿ ರಘು ಸಂತಸ
ಮಡಿಕೇರಿ: ಚಲನಚಿತ್ರ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ನನಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿರುವುದು 50 ವರ್ಷದ ವೃತ್ತಿಜೀವನದ ದೊಡ್ಡ ಆಸ್ತಿಯೆಂದು ನಿರ್ದೇಶಕ ಎ.ಟಿ. ರಘು ತಿಳಿಸಿದ್ದಾರೆ.
2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ರಾಜ್ಯ ಸರ್ಕಾರ ಬುಧವಾರ ಪ್ರಕಟ ಮಾಡಿದ್ದು, 65 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಚಿತ್ರರಂಗದಕ್ಕೆ ಸೇರಿದ ಹಿರಿಯ ನಿರ್ದೇಶಕ ಆಪಾಡಾಂಡ ತಿಮ್ಮಯ್ಯ ರಘು (ಎ.ಟಿ ರಘು) ರಾಜ್ಯೋತ್ಸವ ಪುರಸ್ಕಾರಕ್ಕೆ ಬಾಜನರಾಗಿದ್ದಾರೆ.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಎ.ಟಿ. ರಘು, ಕೊಡಗು ಜಿಲ್ಲೆಯಿಂದ 1965 ರಲ್ಲಿ ಸಣ್ಣ ಪಾತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಬಂದು 40ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ. ಇವುಗಳಲ್ಲಿ 25ಕ್ಕೂ ಅಧಿಕ ಸಿನಿಮಾಗಳು ಅಂಬರೀಶ್ ಅವರದ್ದು ಎಂಬುವುದು ವಿಶೇಷ. 50 ವರ್ಷಗಳ ಕಾಲ ದುಡಿಮೆಯೇ ಸಿನಿಮಾವೆಂದು ಭಾವಿಸಿದ್ದೆ. ಈಗ ಆ ದುಡಿಮೆಗೆ ಸಾರ್ಥಕತೆ ದೊರಕಿದ್ದು, ಇದೇ ದೊಡ್ಡ ಆಸ್ತಿಯೆಂದು ಭಾವಿಸುತ್ತೇನೆ ಎಂದರು.

ಸದ್ಯ ಕೊಂಚ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಕಣ್ಣುಗಳ ಶಸ್ತ್ರಚಿಕಿತ್ಸೆ ಆಗಿದೆ. ಡಯಾಲಿಸಿಸ್ನಲ್ಲಿದ್ದು, ಆಸ್ಪತ್ರೆಯಿಂದಲೇ ಮಾತನಾಡುತ್ತಿದ್ದೇನೆ. 70ರ ದಶಕದಲ್ಲಿ ದೇವರ ಕಣ್ಣು ಎಂಬ ಚಿತ್ರಕ್ಕೆ ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೆ. ಆ ಬಳಿಕ ಅಂಬರೀಶ್ ಅವರೇ ನನ್ನ ದೇವರ ಕಣ್ಣಾಗಿ ಬಾಳಿಗೆ ಬೆಳಕಾದರು. ಕೊಡಗಿನಿಂದ ಬಂದು ಎ.ಟಿ. ರಘು ಆಗಿ ಗುರುತಿಸಿಕೊಳ್ಳಲು ಅಂಬರೀಶ್ ಅವರೇ ಮುಖ್ಯ ಕಾರಣ ಎಂದು ನೆನಪಿಸಿಕೊಂಡರು.
ಎ.ಟಿ ರಘು ಅವರ ಚಿತ್ರಗಳು:
ಕನ್ನಡ, ಹಿಂದಿ, ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಎ.ಟಿ.ರಘು 1990ರಲ್ಲಿ 'ಅಜಯ್-ವಿಜಯ್' ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿ ಪ್ರವೇಶ ಮಾಡಿದ್ದರು. 'ಇನ್ಸ್ ಪೆಕ್ಟರ್ ಕ್ರಾಂತಿ ಕುಮಾರ್', 'ಪುಟ್ಟ ಹೆಂಡ್ತಿ', 'ಮೈಸೂರು ಜಾಣ', 'ಮಂಡ್ಯದ ಗಂಡು', ಮಿಡಿದ ಹೃದಯಗಳು', 'ಅಂತಿಮ ತೀರ್ಪು', 'ನ್ಯಾಯಕ್ಕಾಗಿ ನಾನು', 'ಪದ್ಮವ್ಯೂಹ', 'ಸೂರ್ಯೋದಯ' ಸೇರಿದಂತೆ ಹಲವು ಚಿತ್ರಗಳನ್ನ ನಿರ್ದೇಶನ ಮಾಡಿದ್ದರು.


Click it and Unblock the Notifications











