ಹಿರಿಯ ರಂಗಕರ್ಮಿ, ನಿರ್ದೇಶಕ ಎಂ.ಎಸ್ ಸತ್ಯು ಅಸ್ಪತ್ರೆಗೆ ದಾಖಲು
ಹಿರಿಯ ರಂಗಕರ್ಮಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಎಂ.ಎಸ್ ಸತ್ಯು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮನೆಯಲ್ಲೇ ಕಾಲುಜಾರಿ ಬಿದ್ದ 91 ವರ್ಷದ ನಿರ್ದೇಶಕ ಎಂ.ಎಸ್ ಸತ್ಯು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕುಟುಂಬ ಸದಸ್ಯರು ಎಂ.ಎಸ್ ಸತ್ಯು ಚೇತರಿಸಿಕೊಳ್ಳುತ್ತಿದ್ದಾರೆ, ಯಾರು ಆತಂಕ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ. ಮೈಸೂರು ಮೂಲದವರಾದ ಹಿರಿಯ ರಂಗಕರ್ಮಿ ಮತ್ತು ನಿರ್ದೇಶಕ ಮೈಸೂರು ಶ್ರೀನಿವಾಸ ಸತ್ಯು ಸಿನಿಮಾರಂಗಕ್ಕೆ ಮತ್ತು ರಂಗಭೂಮಿಗೆ ಅಪಾರ ಕೊಡುಗೆ ನೀಡಿದ್ದಾರೆ.
ಸಿನಿಮಾ, ರಂಗಭೂಮಿ ಜೊತೆಗೆ ಕಿರುಚಿತ್ರ ಮತ್ತು ಕಿರುತೆರೆಯಲ್ಲೂ ಖ್ಯಾತಿಗಳಿಸಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಹಲವು ಸದಭಿರುಚಿಯ ಚಿತ್ರಗಳನ್ನು ಎಂ.ಎಸ್ ಸತ್ಯು ನಿರ್ದೇಶನ ಮಾಡಿದ್ದಾರೆ. ಏಕ್ ಥಾ ಚೋಟು ಏಕ್ ಮೋಟು, ಗರಂ ಹವಾ, ಚಿತೆಗೂ ಚಿಂತೆ, ಬರ, ಘಳಿಗೆ, ಇಜ್ಜೋಡು ಸೇರಿದಂತೆ ಅನೇಕ ಅತ್ಯುತ್ತಮ ಸಿನಿಮಾಗಳನ್ನು ಸತ್ಯು ನಿರ್ದೇಶನ ಮಾಡಿದ್ದಾರೆ.

ಸತ್ಯು ನಿರ್ದೇಶನದ ಗರಂ ಹವಾ ಹೊಸ ಅಲೆಯ ಸಿನಿಮಾ ದೊಡ್ಡ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತ್ತು. ಕಾನ್ ಚಿತ್ರೋತ್ಸವದ ಮುಖ್ಯ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡ ಸಿನಿಮಾ ಇದಾಗಿದೆ. ಎಂ.ಎಸ್ ಸತ್ಯು ಕೊನೆಯದಾಗಿ ರಿಲಯನ್ಸ್ ಬಿಗ್ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿಬಂದ ಇಜ್ಜೋಡು ಚಿತ್ರ ನಿರ್ದೇಶನ ಮಾಡಿದ್ದಾರೆ.
Recommended Video
ಇಳಿ ವಯಸ್ಸಿನಲ್ಲೂ ಸಿನಿಮಾ ನಿರ್ದೇಶನದ ಬಗ್ಗೆ ಆಸಕ್ತಿ ಹೊಂದಿದ್ದ ಎಂ.ಎಸ್ ಸತ್ಯು ಸದ್ಯ ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ಕಾಲು ಜಾರಿ ಬಿದ್ದು ಆಸ್ಪತ್ರೆ ದಾಖಲಾಗಿರುವುದು ಅಭಿಮಾನಿಗಳಿಗೆ ಮತ್ತು ಹಿತೈಶಿಗಳಿಗೆ ನೋವಿನ ಸಂಗತಿಯಾಗಿದೆ.


Click it and Unblock the Notifications











