ರಾಜ್-ವಿಷ್ಣು ಸಾಲಿಗೆ ದರ್ಶನ್ ಅವರನ್ನ ಸೇರಿಸಿದ ಶಂಕರ್ ಅಶ್ವತ್ಥ್
ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದ ಹಿರಿಯ ನಟ ಅಶ್ವತ್ಥ್ ಅವರ ಮಗ ಶಂಕರ್ ಅಶ್ವತ್ಥ್ ಕಳೆದ ಕೆಲ ದಿನಗಳ ಹಿಂದೆ ಜೀವನೋಪಾಯಕ್ಕಾಗಿ ಟ್ಯಾಕ್ಸಿ ಡ್ರೈವಿಂಗ್ ಮಾಡುವ ಮೂಲಕ ಸುದ್ದಿಯಾಗಿದ್ದರು.
ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಚಿತ್ರದಲ್ಲಿ ಅವಕಾಶ ನೀಡಿ ದಾಸ ನೆರವಾಗಿದ್ದರು. ಇದಕ್ಕೆ ಕೃತಜ್ಞತೆ ತಿಳಿಸಿದ್ದ ಶಂಕರ್ ಅಶ್ವತ್ಥ್ ಡಿ ಬಾಸ್ ಬಗ್ಗೆ ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದ್ದರು.
ಇದೀಗ, ಅದರ ಮುಂದುವರೆದ ಭಾಗವೆಂಬಂತೆ ಡಾ.ರಾಜ್ ಕುಮಾರ್, ಡಾ ವಿಷ್ಣುವರ್ಧನ್ ಅವರ ಸಾಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಸೇರಿಸಿದ್ದಾರೆ.
ಫೇಸ್ ಬುಕ್ ನಲ್ಲಿ ಈ ಮೂವರ ಫೋಟೋ ಅಪ್ಲೌಡ್ ಮಾಡಿರುವ ಶಂಕರ್ ಅಶ್ವತ್ಥ್ ಅವರು ''ಇದು ಸತ್ಯಸಂಗತಿ: ಎಲ್ಲರಲ್ಲೂ ಪರಮಾತ್ಮನು ಇರುತ್ತಾನೆ ಅದನ್ನು ಮುಟ್ಟಲು ಸುಲಭವಾದ ಮಾರ್ಗ ಅಂದರೆ ತಿನ್ನಲು ಏನಾದರೂ ಕೊಟ್ಟು ಸಂತೃಪ್ತಿ ಪಡಿಸುವುದು, ಎಂದು ನನ್ನ ತಂದೆ ಹೇಳುತ್ತಿದ್ದರು. ಈ ಮೂರು ಮಹಾನ್ ವ್ಯಕ್ತಿಗಳಿಗೆ ನಮ್ಮಿಂದ ಸೇರಿದ ಅಲ್ಪ ತಿನಿಸಿನಿಂದ ಸಂತೃಪ್ತರಾದರೆಂದು ತಿಳಿಸಲು ಹರ್ಷಪಡುತ್ತೇನೆ'' ಎಂದು ಬರೆದುಕೊಂಡಿದ್ದಾರೆ.
ಅಂದು ಅಣ್ಣಾವ್ರ ತನ್ನ ಜೊತೆಯಲ್ಲಿ ನಟಿಸುತ್ತಿದ್ದ ಕಲಾವಿದರ ಜೀವನದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದರು. ನಂತರ ವಿಷ್ಣುವರ್ಧನ್ ಅವರು ಕೂಡ ಕಷ್ಟದಲ್ಲಿದ್ದವರ ಬಾಳಿಗೆ ಬೆಳಕಾಗಿದ್ದಾರೆ. ಅವರಿಬ್ಬರಂತೆ ದರ್ಶನ್ ಕೂಡ ಸಹಾಯಹಸ್ತ ಮನೋಭಾವ ಹೊಂದಿದ್ದಾರೆ ಎಂಬುದು ಅನೇಕ ಕಲಾವಿದರ ಅಭಿಪ್ರಾಯ.
ಸದ್ಯ, 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಮುಗಿಸಿರುವ ದರ್ಶನ್, ಯಜಮಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪಿ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ರಶ್ಮಿಕಾ ಮಂದಣ್ಣ, ತಾನ್ಯ ಹೋಪ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಶೈಲಜಾ ನಾಗ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಶಂಕರ್ ಅಶ್ವತ್ಥ್ ಅವರು ಕೂಡ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದಾರೆ.


Click it and Unblock the Notifications











