ಮೈಸೂರಿಗರ ಭಾವುಕ ನಂಟು ಅಂತ್ಯ: 'ಶಾಂತಲಾ' ಚಿತ್ರಮಂದಿರ ಇನ್ನು ನೆನಪು ಮಾತ್ರ
ಕನ್ನಡ ಚಿತ್ರಗಳನ್ನೇ ಪ್ರದರ್ಶಿಸುವ ಮೂಲಕ ಮನರಂಜನಾ ಕ್ಷೇತ್ರದಲ್ಲಿ ನಾಡಿನ ಸಂಸ್ಕೃತಿ ಹಾಗೂ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದ್ದ ಸಾಂಸ್ಕೃತಿಕ ನಗರಿ ಮೈಸೂರಿನ ಹಳೆಯ ಚಿತ್ರಮಂದಿರಗಳಲ್ಲಿ ಒಂದಾದ ಶಾಂತಲಾ, ಇನ್ನು ಮೈಸೂರಿಗರ ಚಿತ್ರರಸಿಕರ ಪಾಲಿನ ನೆನಪಾಗಷ್ಟೇ ಉಳಿಯಲಿದೆ.
Recommended Video
ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿನ ಶಾಂತಲಾ ಚಿತ್ರಮಂದಿರ ಕಳೆದ ಸುಮಾರು 46 ವರ್ಷಗಳಿಂದ ಸಿನಿಮಾಗಳನ್ನು ಪ್ರದರ್ಶಿಸುವ ಮೂಲಕ ಮೈಸೂರಿನ ಜನತೆಯೊಂದಿಗೆ ಭಾವನಾತ್ಮಕ ನಂಟು ಬೆಸೆದುಕೊಂಡಿತ್ತು. ಬುಧವಾರ ಅದರ ಕೊನೆಯ ಆಟ ನಡೆಯಿತು.
ಕೊರೊನಾ ವೈರಸ್ ಹಾವಳಿ ಶುರುವಾಗುವ ವೇಳೆ ಚಿತ್ರಪ್ರದರ್ಶನ ನಿಲ್ಲಿಸಿದ್ದ ಶಾಂತಲಾದಲ್ಲಿ ಇನ್ನು ಮುಂದೆ ಸಿನಿಮಾಗಳು ಎಂದಿಗೂ ಪ್ರದರ್ಶನವಾಗುವುದಿಲ್ಲ. ಅದು ಶಾಶ್ವತವಾಗಿ ಮುಚ್ಚಿಹೋಗಲಿದೆ ಎಂಬ ಸಂಗತಿ ತಿಳಿದು ಅನೇಕರು ಬೇಸರ ವ್ಯಕ್ತಪಡಿಸಿದ್ದರು. ಅಲ್ಲಿ ತಾವು ನೋಡಿದ್ದ ಸಿನಿಮಾಗಳನ್ನು ನೆನಪಿಸಿಕೊಳ್ಳುವ ಮೂಲಕ ಅದರೊಂದಿಗಿನ ತಮ್ಮ ಭಾವನಾತ್ಮಕ ಒಡನಾಟವನ್ನು ಸ್ಮರಿಸಿದ್ದರು. ಮುಂದೆ ಓದಿ...

ಬಂಗಾರದ ಪಂಜರದಿಂದ ಶಿವಾಜಿ ಸುರತ್ಕಲ್
ನಿಜ. ಶಾಂತಲಾ ಚಿತ್ರಮಂದಿರ ಇನ್ನು ಮುಂದೆ ಇತಿಹಾಸದ ಪುಟಗಳಲ್ಲಿ ಮಾತ್ರ. 'ಪಂಗಾರದ ಪಂಜರ' ಚಿತ್ರದ ಪ್ರದರ್ಶನದ ಮೂಲಕ ಶಾಂತಲಾ, ಸಿನಿಮಾಗಳನ್ನು ಪ್ರೇಕ್ಷಕರನ್ನು ತಲುಪಿಸುವ ಕೊಂಡಿಯಾಗಿ ಕಾರ್ಯ ಆರಂಭಿಸಿತ್ತು. ರಮೇಶ್ ಅರವಿಂದ್ ಅಭಿನಯದ 'ಶಿವಾಜಿ ಸುರತ್ಕಲ್' ಇಲ್ಲಿ ಪ್ರದರ್ಶನಗೊಂಡ ಕೊನೆಯ ಸಿನಿಮಾ.

ಭಾವುಕರಾದ ಸಿಬ್ಬಂದಿ
ಬುಧವಾರ ಸಂಜೆ ಶಾಂತಲಾ ಚಿತ್ರಮಂದಿರದ ಸಿಬ್ಬಂದಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಇನ್ನು ಮುಂದೆ ಇಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಸಿಬ್ಬಂದಿಯ ಕಣ್ಣಾಲಿಗಳು ತುಂಬಿಬಂದವು. ಚಿತ್ರಮಂದಿರದ ಪಾಲುದಾರರು ಕೂಡ ಭಾವುಕರಾಗಿದ್ದರು.

ಕೊನೆಯ ಬಾರಿ ಹಾಡು ಪ್ರಸಾರ
ಚಿತ್ರಮಂದಿರ ಆರಂಭವಾದ ದಿನದಿಂದ ಕೊನೆಯವರೆಗೂ ಸಿನಿಮಾ ಪ್ರದರ್ಶನಕ್ಕೂ ಮುನ್ನ 'ನಮೋ ವೆಂಕಟೇಶ, ನಮೋ ತಿರುಮಲೇಶ' ಹಾಡನ್ನು ಪ್ರಸಾರ ಮಾಡಲಾಗುತ್ತಿತ್ತು. ಬೆಳ್ಳಿಪರದೆ ಹಾಡು ಮುಗಿಯುವವರೆಗೂ ನಿಧಾನವಾಗಿ ಮೇಲೇರುತ್ತಿತ್ತು. ಇದು ಶಾಂತಲಾ ಚಿತ್ರಮಂದಿರದ ಗುರುತುಗಳಲ್ಲಿ ಒಂದು. ಕೊನೆಯ ದಿನವಾದ ಬುಧವಾರ ಕೂಡ ಅಂತಿಮ ಸಲ ಈ ಹಾಡನ್ನು ಪ್ರಸಾರ ಮಾಡಲಾಯಿತು.

ಕೊನೆಯ ಫೋಟೊಗೆ ಪೋಸ್
ಕೆಲವು ಚಿತ್ರಗಳ ದೃಶ್ಯಗಳನ್ನು ಕೂಡ ಕೊನೆಯ ಬಾರಿಗೆ ಎಲ್ಲರೂ ಜತೆಗೂಡಿ ವೀಕ್ಷಿಸಿದರು. ಬಳಿಕ ಚಿತ್ರಮಂದಿರದ ಮುಂಭಾಗದಲ್ಲಿ ಸಿಬ್ಬಂದಿ ಮತ್ತು ಪಾಲುದಾರರಾದ ಪದ್ಮನಾಭ ಪದಕಿ, ಮಧುಸೂದನ, ಅನಿಲ್, ಹನುಮಂತು, ಪ್ರಕಾಶ್, ವ್ಯವಸ್ಥಾಪಕ ದೇವರಾಜ್ ಮುಂತಾದವರು ಕೊನೆಯ ಫೋಟೊ ತೆಗೆಸಿಕೊಂಡರು.

ಅನಾಥಾಲಯದ ಗುತ್ತಿಗೆ ಮುಕ್ತಾಯ
ಅನಾಥಾಲಯಕ್ಕೆ ಸೇರಿದ ಜಾಗದಲ್ಲಿ 1972ರಲ್ಲಿ 30 ವರ್ಷಗಳ ಗುತ್ತಿಗೆಗೆ ಪಡೆದು ಚಿತ್ರಮಂದಿರ ನಿರ್ಮಿಸಲಾಗಿತ್ತು. ನಂತರ ಗುತ್ತಿಗೆ ಮುಂದುವರಿಸಲಾಗುತ್ತಿತ್ತು. ಈಗ ಅನಾಥಾಲಯದವರು ಜಾಗ ಬಿಟ್ಟುಕೊಡುವಂತೆ ಕೇಳುತ್ತಿದ್ದಾರೆ. ಶಾಂತಲಾ ಮಲ್ಟಿಪ್ಲೆಕ್ಸ್ ಹಾಲ್ಗಳಷ್ಟೇ ಗುಣಮಟ್ಟದ ವ್ಯವಸ್ಥೆ ಹೊಂದಿತ್ತು. ಈ ಬ್ರ್ಯಾಂಡ್ ಕಳೆದುಕೊಳ್ಳಲು ಇಷ್ಟವಿರಲಿಲ್ಲ. ಹೀಗಾಗಿ ಗುತ್ತಿಗೆ ನವೀಕರಿಸಲು ಕೋರಿದ್ದೆವು. ಅದಕ್ಕೆ ಟ್ರಸ್ಟ್ನವರು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಹಾಗಾಗಿ ಚಿತ್ರಮಂದಿರ ಮುಚ್ಚಬೇಕಾಗಿದೆ. ಕೊರೊನಾ ವೈರಸ್ ಅಥವಾ ಅರ್ಥಿಕ ನಷ್ಟದ ಕಾರಣದಿಂದ ಮುಚ್ಚುತ್ತಿಲ್ಲ ಎಂದು ಪಾಲುದಾರ ಪದ್ಮನಾಭ ಪದಕಿ ತಿಳಿಸಿದರು.

ಹೊಸ ಚಿತ್ರಮಂದಿರವಿಲ್ಲ...
ಆರಂಭದ ದಿನಗಳಲ್ಲಿ ನೆಲ ಹಾಸಿಗೆ 1 ರೂ, ಕೆಳಗಿನ ಕುರ್ಚಿಗೆ 2 ರೂ ಮತ್ತು ಬಾಲ್ಕನಿಗೆ 3 ರೂ ಟಿಕೆಟ್ ದರವಿತ್ತು. ಇತ್ತೀಚೆಗೆ ಬಾಲ್ಕನಿಗೆ 100 ಮತ್ತು ಕೆಳಗಿನ ಆಸನಗಳಿಗೆ 80 ರೂ ನಿಗದಿಯಾಗಿತ್ತು. ಅಮೆರಿಕ ಅಮೆರಿಕ, ಒಲವಿನ ಉಡುಗೊರೆ, ಟಗರು ಮುಂತಾದ ಚಿತ್ರಗಳು 30-35 ವಾರ ಪ್ರದರ್ಶನ ಕಂಡಿದ್ದವು. ಸದ್ಯಕ್ಕೆ ಹೊಸ ಚಿತ್ರಮಂದಿರ ಮಾಡುವುದಿಲ್ಲ ಎಂದು ಅವರು ಹೇಳಿದರು. ಈ ಜಾಗದಲ್ಲಿ ಬೇರೆ ಏನು ನಿರ್ಮಾಣವಾಗಲಿದೆ ಎನ್ನುವುದು ತಿಳಿದಿಲ್ಲ.


Click it and Unblock the Notifications











