ಆರೋಗ್ಯ ಯೋಧರ ಜೀವ ರಕ್ಷಣೆಗೆ ದೊಡ್ಡ ಸಹಾಯ ಮಾಡಿದ ಶಾರುಖ್ ಖಾನ್
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಕೊರೊನಾ ವೈರಸ್ ವಿರುದ್ಧ ಸರ್ಕಾರಗಳು ಮಾಡುತ್ತಿರುವ ಹೋರಾಟಕ್ಕೆ ಬಹುವಾಗಿ ಸಹಾಯ ಹಸ್ತ ಚಾಚಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಕೊರೊನಾ ವಿರುದ್ಧ ಹೋರಾಟಕ್ಕೆ ತಾವು ಮಾಡುತ್ತಿರುವ ಸಹಾಯಗಳ ದೊಡ್ಡ ಪಟ್ಟಿಯನ್ನೇ ಶಾರುಖ್ ಖಾನ್ ನೀಡಿದ್ದರು.
ನೀಡಿದ ಪಟ್ಟಿಯಲ್ಲಿನ ಎಲ್ಲಾ ಸಹಾಯಗಳನ್ನು ಶಾರುಖ್ ಮಾಡುತ್ತಾರೆಯೇ ಎಂಬ ಕಿಚಾಯಿಸುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದ್ದವು. ಟೀಕಾಕಾರರ ಮಾತಿಗೆ ತಲೆ ಕೆಡಿಸಿಕೊಳ್ಳದೆ ಶಾರುಖ್ ಖಾನ್ ತಮ್ಮ ಕಾರ್ಯವನ್ನು ತಾವು ಮಾಡುತ್ತಿದ್ದಾರೆ.
ತಾವು ಕೆಲವು ದಿನಗಳ ಹಿಂದೆ ಘೋಷಿಸಿದಂತೆ, ಕೊರಾನಾ ವಿರುದ್ಧ ಮೊದಲ ಸಾಲಿನಲ್ಲಿ ನಿಂತು ಹೋರಾಡುತ್ತಿರುವ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರ ಜೀವ ರಕ್ಷಣೆಗೆ ದೊಡ್ಡ ಮಟ್ಟದ ನೆರವನ್ನು ಶಾರುಖ್ ಖಾನ್ ಇಂದು ನೀಡಿದ್ದಾರೆ.

25000 ಜೀವ ರಕ್ಷಕ ಕಿಟ್ ದೇಣಿಗೆ
ವೈದ್ಯರು, ನರ್ಸ್ಗಳ ಜೀವ ರಕ್ಷಣೆಗೆ 25000 ಪಿಪಿಇ ಕಿಟ್ಗಳನ್ನು ಶಾರುಖ್ ಖಾನ್ ಇಂದು ಹಸ್ತಾಂತರ ಮಾಡಿದ್ದಾರೆ. ತಾವು ಪಿಪಿಇ ಕಿಟ್ಗಳನ್ನು ದೇಣಿಗೆ ಕೊಡುವುದಾಗಿ ಕೆಲವು ದಿನಗಳ ಹಿಂದಷ್ಟೆ ಶಾರುಖ್ ಖಾನ್ ಹೇಳಿದ್ದರು. ಹೇಳಿದಂತೆಯೇ ಶಾರುಖ್ ನಡೆದುಕೊಂಡಿದ್ದಾರೆ.

ಪಿಪಿಇ ಕಿಟ್ಗಳ ಅಗತ್ಯತೆ ಹೆಚ್ಚಿಗಿದೆ
ಪಿಪಿಇ ಕಿಟ್ಗಳು ಈ ಹೊತ್ತಿನ ಅತ್ಯಂತ ಅಗತ್ಯದ ವಸ್ತುಗಳಾಗಿವೆ. ವೈದ್ಯರು, ನರ್ಸ್ಗಳು ಕೊರೊನಾ ದಿಂದ ಕಾಪಾಡಿಕೊಳ್ಳಲು ಇವುಗಳನ್ನು ಬಳಸುತ್ತಾರೆ. ವೈದ್ಯರು, ದಾದಿಯರಿಗೆ ಈ ಕಿಟ್ಗಳು ಸೂಕ್ತ ಪ್ರಮಾಣದಲ್ಲಿ ಸಿಗುತ್ತಿಲ್ಲವೆಂಬ ಆರೋಪವಿತ್ತು. ಶಾರುಖ್ ಅವರು 25000ಪಿಪಿಇ ಕಿಟ್ ನೀಡುವ ಮೂಲಕ ಸರ್ಕಾರ ಮೇಲಿನ ಹೊರೆಯನ್ನು ಕಡಿಮೆ ಮಾಡಿದ್ದಾರೆ.

ಧನ್ಯವಾದ ತಿಳಿಸಿದ ಮಹಾರಾಷ್ಟ್ರ ಸರ್ಕಾರ
ಶಾರುಖ್ ಖಾನ್ ನೀಡಿರುವ ದೇಣಿಗೆಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ, 'ಶಾರುಖ್ ಖಾನ್ ಮಾಡಿರುವ ಸಹಾಯಕ್ಕೆ ಧನ್ಯವಾದ. ನೀವು ನೀಡಿರುವ ನೆರವು ಸಾವಿರಾರು ವೈದ್ಯರು, ನರ್ಸ್ಗಳಿಗೆ ಸಹಾಯವಾಗಲಿದೆ'' ಎಂದು ಹೇಳಿದ್ದಾರೆ.

ಉಚಿತ ಮಾಸ್ಕ್, ಉಚಿತ ಊಟ, ದಿನಸಿ ಸಾಮಗ್ರಿ ವಿತರಣೆ
ಶಾರುಖ್ ಖಾನ್ ಅವರು ಪ್ರಧಾನಿ ಪರಿಹಾರ ನಿಧಿ, ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿ, ಕೊಲ್ಕತ್ತಾ ಪರಿಹಾರ ನಿಧಿಗೆ ಹಣ ದೇಣಿಗೆ ನೀಡಿದ್ದಾರೆ. ಜೊತೆಗೆ ಪಿಪಿಇ ಕಿಟ್ಗಳು, ಉಚಿತ ಮಾಸ್ಕ್ಗಳು, ಸಾವಿರಾರು ಜನರಿಗೆ ಆಹಾರ, ದಿನಸಿ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ.

ನಾಲ್ಕಂತಸ್ತಿನ ಕಟ್ಟಡ ಬಿಟ್ಟು ಕೊಟ್ಟ ಶಾರುಖ್ ಖಾನ್
ಮುಖ್ಯವಾಗಿ ತಮ್ಮ ಒಡೆತನದ ನಾಲ್ಕಂತಸ್ತಿನ ದೊಡ್ಡ ಕಟ್ಟಡವನ್ನು ಕೊರೊನಾ ರೋಗಿಗಳ ಉಪಚಾರಕ್ಕಾಗಿ ಈಗಾಗಲೇ ಅವರು ಬಿಟ್ಟುಕೊಟ್ಟಿದ್ದಾರೆ. ಮುಂಬೈ ನಲ್ಲಿರುವ ಈ ಕಟ್ಟಡವನ್ನು ಮುಂಬೈ ಪಾಲಿಕೆ ಕೊರೊನಾ ರೋಗಿಗಳ ಉಪಚಾರಕ್ಕೆ ಬಳಸಿಕೊಳ್ಳುತ್ತಿದೆ.


Click it and Unblock the Notifications











