ಹೆಸರಿಗೆ ಮಸಿ ಬಳಿಯುವ ಯತ್ನ: ಕಿಡಿಗೇಡಿಗಳ ವಿರುದ್ಧ ದೂರು ಕೊಟ್ಟ ಶಿಲ್ಪಾ ಗಣೇಶ್
Recommended Video

ಸಾಮಾಜಿಕ ಜಾಲತಾಣಗಳಲ್ಲಿ ದಿನೇ ದಿನೇ ಫೇಕ್ ಅಕೌಂಟ್ ಗಳ ಹಾವಳಿ ಹೆಚ್ಚಾಗಿದೆ. ಸೆಲೆಬ್ರಿಟಿಗಳ ಹೆಸರಿನಲ್ಲಿ ಖಾತೆ ತೆರೆದು ಗಣ್ಯ ವ್ಯಕ್ತಿಗಳ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುವವರ ಸಂಖ್ಯೆ ಬೆಳೆಯುತ್ತಿದೆ. ಸದ್ಯ ಇಂಥದ್ದೇ ಸಂಕಷ್ಟಕ್ಕೆ ಶಿಲ್ಪಾ ಗಣೇಶ್ ಸಿಲುಕಿದ್ದಾರೆ.
ಹೇಳಿ ಕೇಳಿ ಶಿಲ್ಪಾ ಗಣೇಶ್ ಬಿಜೆಪಿ ಮಹಿಳಾ ಮೋರ್ಚ ರಾಜ್ಯ ಘಟಕದ ಉಪಾಧ್ಯಕ್ಷೆ. ಚಿತ್ರ ನಿರ್ಮಾಪಕಿಯೂ ಆಗಿರುವ ಶಿಲ್ಪಾ ಗಣೇಶ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.
ಇದನ್ನೇ ದುರುಪಯೋಗ ಪಡಿಸಿಕೊಂಡ ಕಿಡಿಗೇಡಿಗಳು, ಶಿಲ್ಪಾ ಗಣೇಶ್ ಹೆಸರಿನಲ್ಲಿ ನಾಡಪ್ರಭು ಕೆಂಪೇಗೌಡರ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿ ಅದನ್ನ ವಾಟ್ಸ್ ಆಪ್, ಟ್ವಿಟ್ಟರ್ ಸೇರಿದಂತೆ ಎಲ್ಲಾ ಕಡೆ ವೈರಲ್ ಮಾಡಿದರು. ವಿಷಯ ತಿಳಿದ ಶಿಲ್ಪಾ ಗಣೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಮುಂದೆ ಓದಿರಿ...

ಅವಹೇಳನಕಾರಿ ಪೋಸ್ಟ್
ನಾಡಪ್ರಭು ಕೆಂಪೇಗೌಡರ ಸಾಧನೆ ಬಗ್ಗೆ ಧಕ್ಕೆ ತರುವ ಪೋಸ್ಟ್ ಒಂದು ಶಿಲ್ಪಾ ಗಣೇಶ್ ಹೆಸರಿನಲ್ಲಿ ವೈರಲ್ ಆಗಿತ್ತು. ಆ ಪೋಸ್ಟ್ ನಲ್ಲಿ ಶಿಲ್ಪಾ ಗಣೇಶ್ ಬಗ್ಗೆ ಕೆಲವರು ಕೆಟ್ಟದಾಗಿ ಕೂಡ ಕಾಮೆಂಟ್ ಮಾಡಿದ್ದರು. ಇದೇ ಪೋಸ್ಟ್ ವಾಟ್ಸ್ ಆಪ್ ನಲ್ಲೂ ಹರಿದಾಡಿದ್ಮೇಲೆ ಶಿಲ್ಪಾ ಗಣೇಶ್ ಗಮನಕ್ಕೆ ಬಂದಿದೆ.

ಸ್ಪಷ್ಟನೆ ಕೊಟ್ಟ ಶಿಲ್ಪಾ ಗಣೇಶ್
''ನಾಡಪ್ರಭು ಕೆಂಪೇಗೌಡ ಅವರ ಮೇಲೆ ನನಗೆ ಅಪಾರವಾದ ಗೌರವವಿದೆ. ಅವರಿಗೆ ಅವಮಾನ ಮಾಡುವಂತಹ ಯಾವುದೇ ಹೇಳಿಕೆ ನಾನು ನೀಡಿಲ್ಲ. ಅಂತಹ ಯಾವುದೇ ಹೇಳಿಕೆ ನನ್ನ ವೈಯುಕ್ತಿಕ ಫೇಸ್ ಬುಕ್, ಟ್ವಿಟ್ಟರ್ ಖಾತೆಗಳಲ್ಲಿ ಹೇಳಿಲ್ಲ. ಯಾರೋ ಕಿಡಿಗೇಡಿಗಳು ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ. ಅಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧಾರಿಸಿದ್ದೇನೆ'' ಎಂದು ಫೇಸ್ ಬುಕ್ ನಲ್ಲಿ ಶಿಲ್ಪಾ ಗಣೇಶ್ ಸ್ಪಷ್ಟನೆ ಕೊಟ್ಟಿದ್ದರು.

ಪೊಲೀಸ್ ಠಾಣೆಗೆ ದೂರು
ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಶಿಲ್ಪಾ ಗಣೇಶ್ ದೂರು ನೀಡಿದ್ದಾರೆ. ಕಿಡಿಗೇಡಿಗಳು ಯಾರು ಎಂದು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.

ಶಿಲ್ಪಾ ಗಣೇಶ್ ಏನಂತಾರೆ.?
''ಒಂದು ಪೋಸ್ಟ್ ಕ್ರಿಯೇಟ್ ಮಾಡಿ, ಅದನ್ನ ಎಲ್ಲಾ ಗ್ರೂಪ್ ನಲ್ಲೂ ಶೇರ್ ಮಾಡಿದ್ದಾರೆ. ನನ್ನ ಹೆಸರಿಗೆ ಧಕ್ಕೆ ತರಲು ಈ ತರಹ ಯಾರೋ ಮಾಡಿದ್ದಾರೆ. ಇದು ಜಾಸ್ತಿ ಆಗಬಾರದು ಅಂತ ಪೊಲೀಸರಿಗೆ ದೂರು ಕೊಟ್ಟಿರುವೆ. ತನಿಖೆ ನಡೆಯುತ್ತಿದೆ'' ಎಂದಿದ್ದಾರೆ ಶಿಲ್ಪಾ ಗಣೇಶ್


Click it and Unblock the Notifications











