'ಜೇಮ್ಸ್' ಪ್ರಿ ರಿಲೀಸ್ ಕಾರ್ಯಕ್ರಮ: ವೇದಿಕೆ ಮೇಲೆ ಶಿವಣ್ಣ ಭಾವುಕ
ಪುನೀತ್ ರಾಜ್ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ ಅದ್ಧೂರಿಯಾಗಿ ನೆರವೇರಿದೆ. ಸಂಪೂರ್ಣ ಪುನೀತ್ ಮಯವಾಗಿದ್ದ ಕಾರ್ಯಕ್ರಮದಲ್ಲಿ ವೇದಿಕೆ ಏರಿ ಮಾತನಾಡಿದವರೆಲ್ಲ ಅಪ್ಪುವನ್ನು ನೆನೆದು ಭಾವುಕರಾಗಿದ್ದಾರೆ.
ಅದರಲ್ಲಿಯೂ ರಾಘವೇಂದ್ರ ರಾಜ್ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರುಗಳು ಆಡಿದ ಮಾತುಗಳು ದೊಡ್ಮನೆ ಕುಟುಂಬದ ಅಭಿಮಾನಿಗಳಿಗೆ ದುಃಖ ಉಮ್ಮಳಿಸುವಂತೆ ಮಾಡಿದವು.
ಮೊದಲಿಗೆ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್ ಬಹಳ ಭಾವುಕರಾದರು. ನಾನು ನನ್ನ ತಮ್ಮನನ್ನು ಹುಡುಕಿಕೊಂಡು ಹೋಗುತ್ತೇನೆ ಎಂದುಬಿಟ್ಟರು. ಇದನ್ನು ಕೇಳಿ ಶಿವಣ್ಣ ಬಹಳ ದುಃಖಿತರಾದರು. ಶಿವಣ್ಣ ಮಾತನಾಡುವ ಸರದಿ ಬಂದಾಗ ಶಿವಣ್ಣನ ಬಾಯಿಂದ ಮಾತು ಹೊರಡಲಿಲ್ಲ, ತೀವ್ರ ಭಾವೋದ್ವೇಗಕ್ಕೆ ಒಳಗಾದ ಅವರು ರಾಘವೇಂದ್ರ ರಾಜ್ಕುಮಾರ್ ಅವರನ್ನು ತಬ್ಬಿಕೊಂಡು ಅತ್ತು ಬಿಟ್ಟರು.

ನಂತರ ಸಾವರಿಸಿಕೊಂಡು ಮಾತನಾಡಿದ ಶಿವಣ್ಣ, ಮೊದಲಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ, 'ಜೇಮ್ಸ್' ಸಿನಿಮಾದ ನಟರಿಗೆ, ತಂತ್ರಜ್ಞರಿಗೆ ವಂದಿಸಿ, ಅಭಿನಂದಿಸಿದರು. ''ರಾಘು ಮಾತನಾಡಿದ್ದು ನೋವು ಜಾಸ್ತಿಯಾಯಿತು. ಇವರೀರ್ವರೂ ನನಗಿಂತ ಚಿಕ್ಕವರು. ನಾನು ಹೇಗೆ ಇದನ್ನೆಲ್ಲಾ ನೋಡುತ್ತಾ ಇರಬೇಕು?'' ಎಂದು ಬೇಸರದಿಂದಲೇ ಪ್ರಶ್ನೆ ಮಾಡಿದರು.
ಹೊರಗಿನಿಂದ ನೋಡುವುದಕ್ಕೆ ಚೆನ್ನಾಗಿಯೇ ಇರುತ್ತೇವೆ. ಶೂಟಿಂಗ್ನಲ್ಲಿ ಭಾಗವಹಿಸುತ್ತೇವೆ, ಹಾಡುತ್ತೇವೆ, ಕುಣಿಯುತ್ತೇವೆ, ಡಬ್ಬಿಂಗ್ ಮಾಡುತ್ತೇವೆ. ಆದರೆ ಆ ನೋವು ಒಳಗಡೆಯೇ ಇದೆ. ಪುನೀತ್ ಅಕಾಲಿಕವಾಗಿ ನಮ್ಮನ್ನು ಬಿಟ್ಟು ಹೋದ, ರಾಘು ಆರೋಗ್ಯ ಹೀಗೆ ಆಯಿತು. ಇವರು ನನಗಿಂತಲೂ ಸಣ್ಣವರು ಇವರನ್ನು ಹೀಗೆಲ್ಲ ನೋಡುವುದು ನನಗೆ ಹೇಗೆ ತಾನೆ ಸಾಧ್ಯ?'' ಎಂದು ಮತ್ತೆ ಭಾವುಕರಾದರು ಶಿವಣ್ಣ.
ನಾವು ಐದು ಜನ ಸಹೋದರ-ಸಹೋದರಿಯರು ಒಟ್ಟಿಗೆ ಇದ್ದೆವು, ಈಗ ನಮ್ಮ ಜೊತೆ ಒಬ್ಬ ಇಲ್ಲ ಅದರಲ್ಲೂ ಚಿಕ್ಕವನಾಗಿದ್ದ ಅಪ್ಪು ಹೋಗಿದ್ದು ಎಂದೂ ಮಾಯದ ನೋವು. ಅಪ್ಪು ಎಲ್ಲರ ಮುದ್ದಿನ ಮಗನಾಗಿದ್ದ. ಎಲ್ಲರಿಗೂ ಅವನೆಂದರೆ ಅಚ್ಚು-ಮೆಚ್ಚು. ಅವನ ಅಗಲಿಕೆ ಯಾರಿಗೂ ಅರಗಿಸಿಕೊಳ್ಳಲು ಆಗಿಲ್ಲ. ಅಪ್ಪ-ಅಮ್ಮ ನಮ್ಮ ಜೊತೆ ನೂರಾರು ವರುಷ ಇರ್ತಾರೆ ಅಂದುಕೊಂಡಿದ್ದೆ. ಅವರು ಹೋಗಿಬಿಟ್ಟರು. ಆ ದುಃಖದಿಂದ ಚೇತರಿಸಿಕೊಳ್ಳುವ ಹೊತ್ತಿಗೆ ಅಪ್ಪು ಹೋಗಿಬಿಟ್ಟ'' ಎಂದಿದ್ದಾರೆ ಶಿವರಾಜ್ ಕುಮಾರ್.
'ಜೇಮ್ಸ್' ಸಿನಿಮಾಕ್ಕೆ ಡಬ್ಬಿಂಗ್ ಮಾಡಿದ ಬಗ್ಗೆ ಮಾತನಾಡಿದ ಶಿವಣ್ಣ, ''ಜೇಮ್ಸ್' ಸಿನಿಮಾಕ್ಕೆ ಡಬ್ಬಿಂಗ್ ಮಾಡಲು ಬಹಳ ಕಷ್ಟವಾಯಿತು. ಯಾವ ನಟನಿಗೂ ಇನ್ನೊಬ್ಬ ವ್ಯಕ್ತಿ ಧ್ವನಿ ನೀಡಲಾಗದು. ಅದರಲ್ಲೂ ಇಂಥಹಾ ಸನ್ನಿವೇಶದಲ್ಲಿ ಧ್ವನಿ ನೀಡುವುದು ಅದೂ ಸ್ವಂತ ತಮ್ಮನಿಗೆ ಧ್ವನಿ ನೀಡುವುದು ಬಹಳ ನೋವಿನ ಸಂಗತಿ. ಆದರೂ ಡಬ್ಬಿಂಗ್ ಮಾಡಿದ್ದೇನೆ'' ಎಂದಿದ್ದಾರೆ ಶಿವರಾಜ್ ಕುಮಾರ್.
''ಇಬ್ಬರೂ ಸೇರಿ ಒಟ್ಟಿಗೆ ಸಿನಿಮಾ ಮಾಡಬೇಕು ಎಂಬುದು ನಮ್ಮ ಬಹು ವರ್ಷಗಳ ಕನಸಾಗಿತ್ತು. ಕಳೆದ ಕೆಲ ವರ್ಷಗಳಿಂದ ಕತೆಗಳನ್ನು ಕೇಳುತ್ತಲೇ ಇದ್ದೆವು. ಆದರೆ ಅದು ಸಾಧ್ಯವೇ ಆಗಲಿಲ್ಲ. ಆದರೆ ಒಬ್ಬ ತೆಲುಗು ನಿರ್ದೇಶಕರು ಬಂದು ಕತೆ ಹೇಳಿದ್ದಾರೆ. ಆ ಸಿನಿಮಾದಲ್ಲಿ ನನ್ನನ್ನು ಅಪ್ಪುವನ್ನು ನೀವು ಒಟ್ಟಿಗೆ ನೋಡುತ್ತೀರ. ಆ ಸಿನಿಮಾ ನನ್ನ ಕಡೆಯಿಂದ ಅಪ್ಪುಗೆ ಡೆಡಿಕೇಶನ್ ಆಗಿರುತ್ತದೆ'' ಎಂದರು ಶಿವರಾಜ್ ಕುಮಾರ್. 'ಜೇಮ್ಸ್' ಸಿನಿಮಾದ ಬಿಡುಗಡೆ ದಿನ ನಾನು ಮೈಸೂರಿನಲ್ಲಿರುತ್ತೇನೆ. ಅಲ್ಲಿಯೇ ಸಿನಿಮಾ ನೋಡುತ್ತೇನೆ'' ಎಂದು ಭರವಸೆ ನೀಡಿದರು. ಅಲ್ಲದೆ ಸಿನಿಮಾದ 25ನೇ ದಿನಕ್ಕೆ ಹೊಸಪೇಟೆಗೆ ಹೋಗಿ ಅಲ್ಲಿ ಕಾರ್ಯಕ್ರಮ ಮಾಡುವುದಾಗಿಯೂ ಶಿವಣ್ಣ ಭರವಸೆ ನೀಡಿದರು.


Click it and Unblock the Notifications











