ಯಾವ ಹೆಣ್ಣು ಮಾಡದ ಕಾರ್ಯ ನನ್ನ ಪತ್ನಿ ನನಗಾಗಿ ಮಾಡಿದ್ದಾಳೆ: ಭಾವುಕರಾದ ಶಿವಣ್ಣ
ನಟ ಶಿವರಾಜ್ ಕುಮಾರ್ ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾಗಳಲ್ಲಿ ಮಾತ್ರವೇ ಅವರು ಆದರ್ಶ ಪತಿಯಲ್ಲ ಬದಲಿಗೆ ನಿಜ ಜೀವನದಲ್ಲಿಯೂ ಆದರ್ಶ ಪತಿಯೇ.
ನಿನ್ನೆ ಸಂಜೆಯಷ್ಟೆ ಅದ್ಧೂರಿಯಾಗಿ 'ಭಜರಂಗಿ 2' ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ನಡೆದಿದೆ. ವೇದಿಕೆ ಮೇಲೆ ಸಿನಿಮಾ, ಚಿತ್ರರಂಗ, ಸಹ ನಟರು, ಸಹ ನಟಿಯರು ಎಲ್ಲ ವಿಷಯಗಳನ್ನು ಮಾತನಾಡಿರುವ ಶಿವರಾಜ್ ಕುಮಾರ್ ತಮ್ಮ ಪತ್ನಿ ಗೀತಾ ಶಿವರಾಜ್ಕುಮಾರ್ ಬಗ್ಗೆಯೂ ಮಾತನಾಡಿದ್ದಾರೆ.
''ನಮ್ಮ ಮನೆಯವರು (ಪತ್ನಿ ಗೀತಾ) ಇಂದು ಬಂದಿದ್ದಾರೆ. ಇಂದು ನಾವು ಇಷ್ಟರ ಮಟ್ಟಿಗೆ ಇದ್ದೀವೆಂದರೆ ಅವರು ಕಾರಣ. ನೋವು-ನಲಿವು, ಕಷ್ಟ-ಸುಖ ಎಲ್ಲದರಲ್ಲೂ ಅವರು ಜೊತೆಯಾಗಿದ್ದಾರೆ. ನನಗೇನಾದರೂ ಆದಾಗ ಅವರು ಸದಾ ನನ್ನ ಪಕ್ಕದಲ್ಲೇ ಇರುತ್ತಾರೆ'' ಎಂದಿದ್ದಾರೆ ಶಿವರಾಜ್ ಕುಮಾರ್.

ಬಹಳ ಕಷ್ಟಪಟ್ಟರು ಗೀತಾ: ಶಿವರಾಜ್ ಕುಮಾರ್
''ನನ್ನ ಕುಟುಂಬವೆಲ್ಲ ಸದಾ ನನ್ನ ಜೊತೆಗೆ ಇದ್ದೇ ಇರುತ್ತದೆ. ಫ್ಯಾಮಿಲಿ ಬಿಟ್ಟು, ನನ್ನದೇ ಕುಟುಂಬ ಅಂದ ನೋಡಿದಾಗ ಪತ್ನಿ ಗೀತಾ ಸದಾ ನನ್ನ ಬೆನ್ನೆಲುಬಾಗಿ ಇದ್ದಾರೆ. ನನಗೆ ಮೆದುಳು ಮತ್ತು ಹೃದಯದ ಸಮಸ್ಯೆ ಆಗಿತ್ತು. ಅದಾದಾಗ ಗೀತಾ ಬಹಳ ಕಷ್ಟಪಟ್ಟರು'' ಎಂದು ನೆನಪಿಸಿಕೊಂಡರು ಶಿವರಾಜ್ ಕುಮಾರ್.

''ಹೆಣ್ಣು ಮಕ್ಕಳು ಕೂದಲು ಕೊಡುವುದಿಲ್ಲ, ಆದರೆ ನನ್ನ ಪತ್ನಿ ನನಗಾಗಿ ಕೊಟ್ಟಳು''
''ಹೆಣ್ಣುಮಕ್ಕಳು ಯಾರೂ ಕೂದಲು ಕೊಡುವುದಿಲ್ಲ. ಆದರೆ ಆಕೆ ನನ್ನ ಪತ್ನಿ ನನಗಾಗಿ ಕೂದಲು ಕೊಟ್ಟರು. ಆ ಧೈರ್ಯ ಅವರು ಮಾಡಿದರು. ಹಾಗಾಗಿ ನಾನು ಆಕೆಯ ಬೆನ್ನೆಲುಬಾಗಿ ಸದಾ ನಿಲ್ಲುತ್ತೇನೆ. ಅವರು ಏನೇ ಮಾಡಿದರು ನನ್ನ ಬೆಂಬಲ ಇದ್ದೇ ಇರುತ್ತದೆ'' ಎಂದು ಹೆಮ್ಮೆಯಿಂದ ಹೇಳಿಕೊಂಡರು ಶಿವರಾಜ್ ಕುಮಾರ್. ಶಿವಣ್ಣನಿಗೆ ಆರೋಗ್ಯ ಸಮಸ್ಯೆ ಆಗಿದ್ದಾಗ ಹರಕೆ ಹೊತ್ತಿದ್ದ ಗೀತಾ ಶಿವರಾಜ್ ಕುಮಾರ್ ಕೂದಲು ಕೊಟ್ಟು ಹರಕೆ ತೀರಿಸಿದ್ದರು. ಕೂದಲು ಕೊಟ್ಟ ಬಳಿಕ ತಾವು ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ನಿಂತು ಚಿತ್ರ ತೆಗೆಸಿಕೊಂಡಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಸದಾ ಹೀಗೆ ನಗುತಿರು: ಪತ್ನಿಗೆ ಶಿವಣ್ಣ ಹಾರೈಕೆ
''ಲವ್ ಯು ಅ ಲಾಟ್'' ಎಂದು ಎದುರಿಗೆ ಕೂತಿದ್ದ ಪತ್ನಿಯನ್ನು ನೋಡುತ್ತಾ ಹೇಳಿದ ಶಿವಣ್ಣ, ''ಹೀಗೆ ಸದಾ ನಗುತ್ತಲೇ ಇರು'' ಎಂದು ಹರಸಿದರು. ಮತ್ತೆ 'ಭಜರಂಗಿ 2' ಸಿನಿಮಾದತ್ತ ಮಾತು ಹೊರಳಿಸಿದ ಶಿವರಾಜ್ ಕುಮಾರ್, ''ಈ ಸಿನಿಮಾ ಎಲ್ಲರಿಗೂ ಖುಷಿ ಕೊಡುತ್ತದೆ ಎಂದು ಭಾವಿಸಿದ್ದೇನೆ. ಎಲ್ಲರೂ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಹರಸಿ'' ಎಂದರು.

ಗೀತಾ ಶಿವರಾಜ್ ಕುಮಾರ್ ಬಗ್ಗೆ ಯಶ್ ಮಾತು
ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಯಶ್ ಸಹ, ಗೀತಾ ಶಿವರಾಜ್ ಕುಮಾರ್ ಬಗ್ಗೆ ಮಾತನಾಡಿದರು, ''ನಾನು, ರಾಧಿಕಾ ಆಗಾಗ ನಿಮ್ಮ ಬಗ್ಗೆ ಮಾತನಾಡುತ್ತಲೇ ಇರ್ತೀವಿ. ಶಿವಣ್ಣ ಹೀಗೆಲ್ಲ ಕುಣಿದಾಡಿ, ಹಾರಾಡಿ ಎನರ್ಜಿಯಿಂದ ಇರುವಂತೆ ಮಾಡುವುದರ ಹಿಂದೆ ನಿಮ್ಮ ಶ್ರಮ ದೊಡ್ಡದು. ಅವರ ಜೀವನವನ್ನು ಸಮನಾಗಿ ತೂಗಿಸಿಕೊಂಡು ಹೋಗುತ್ತಿರುವವರು ನೀವು. ಶಿವಣ್ಣ ಏನೇ ಸಾಧನೆ ಮಾಡಿದರು ಅದರ ಕ್ರೆಡಿಟ್ ಗೀತಕ್ಕನಿಗೆ ಸಲ್ಲಬೇಕು'' ಎಂದರು ಯಶ್.

ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆ
ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ಇದೇ ಶುಕ್ರವಾರ (ಅಕ್ಟೋಬರ್ 29)ಕ್ಕೆ ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾವನ್ನು ಎ ಹರ್ಷ ನಿರ್ದೇಶನ ಮಾಡಿದ್ದು, ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಭಾವನಾ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ವಿಶೇಷ ಪಾತ್ರದಲ್ಲಿ ಹಿರಿಯ ನಟಿ ಶ್ರುತಿ, ಸೌರವ್ ಲೋಕೇಶ್, ಚೆಲುವರಾಜ್, ಶಿವರಾಜ್ ಕೆ.ಆರ್.ಪೇಟೆ, ರಮೇಶ್ ಪಂಡಿತ್ ಇನ್ನೂ ಹಲವರು ನಟಿಸಿದ್ದಾರೆ.


Click it and Unblock the Notifications











