ಬ್ಯಾಂಕಾಕ್ ನಲ್ಲಿ ವನವಾಸ ಅನುಭವಿಸಿ ಬಂದ 'ಸಿಪಾಯಿ'
ಈ ರೀತಿಯ ಸಮಸ್ಯೆ, ಸಂಕಷ್ಟ, ವನವಾಸ ಇದುವರೆಗೂ ಯಾವ ಕನ್ನಡ ಚಿತ್ರಕ್ಕೂ ಎದುರಾಗಿಲ್ಲ. ಬ್ಯಾಂಕಾಕ್, ಪಟ್ಟಾಯದಲ್ಲಿ ಸಾಕಷ್ಟು ಕನ್ನಡ ಚಿತ್ರಗಳನ್ನು ಶೂಟ್ ಮಾಡಲಾಗಿದೆ. ಹಲವಾರು ರೊಮ್ಯಾಂಟಿಕ್ ಹಾಡುಗಳನ್ನು ಚಿತ್ರೀಕರಿಸಿಕೊಂಡು ಬಂದಿದ್ದಾರೆ.
ಆದರೆ ಬ್ಯಾಂಕಾಕ್ ಸಹವಾಸ ಬೇಡಪ್ಪಾ ಬೇಡ ಅನ್ನುವಷ್ಟು ಕಷ್ಟನಷ್ಟ ಅನುಭವಿಸಿ ಬೆಂಗಳೂರಿಗೆ ವಾಪಸ್ ಆಗಿವೆ 'ಸಿಪಾಯಿ' ಹಾಗೂ 'ಸಿಂಧೂರ' ಚಿತ್ರತಂಡಗಳು. 'ಸಿಪಾಯಿ' ಚಿತ್ರದ ಛಾಯಾಗ್ರಾಹಕರಾಗಿರುವ ಸಚಿನ್ ಪುರೋಹಿತ್ ಅವರು 'ಸಿಂಧೂರ' ಚಿತ್ರದ ನಾಯಕ ನಟ ಎಂಬುದು ವಿಶೇಷ.
ಸಚಿನ್ ಪುರೋಹಿತ್ ಸೇರಿದಂತೆ ಎರಡು ಚಿತ್ರತಂಡದ 16 ಮಂದಿಯನ್ನು ಥಾಯ್ ಲ್ಯಾಂಡ್ ಪೊಲೀಸರು ಬಂಧಿಸಿದ್ದರು. ಫೆಬ್ರವರಿ 5ಕ್ಕೆ ಥಾಯ್ ಲ್ಯಾಂಡ್ ಗೆ ತೆರಳಿದ ಎರಡು ಚಿತ್ರತಂಡಗಳು ಫೆಬ್ರವರಿ 6ರಂದು ಪಟ್ಟಾಯದ ನಿಕಿತಾ ಭವನ ಎಂಬಲ್ಲಿ ಚಿತ್ರೀಕರಣ ಮಾಡಿದೆ. ಅಲ್ಲಿಗೆ ಆಗಮಿಸಿದ ಎಮಿಗ್ರೇಷನ್ ಅಧಿಕಾರಿಗಳು ವರ್ಕ್ ಪರ್ಮಿಟ್ ಕೇಳಿದ್ದಾರೆ.

ಥಾಯ್ ಲ್ಯಾಂಡ್ ನಲ್ಲಿ 24 ದಿನಗಳ ವನವಾಸ
ವರ್ಕ್ ಪರ್ಮಿಶನ್ ಇಲ್ಲದ ಕಾರಣ ಕಕ್ಕಾಬಿಕ್ಕಿಯಾದ ಚಿತ್ರತಂಡವನ್ನು ಎಮಿಗ್ರೇಷನ್ ಅಧಿಕಾರಿಗಳು ವಶಕ್ಕೆ ಪಡೆದು ಅವರ ಪಾಸ್ ಪೋರ್ಟ್ ಗಳನ್ನು ಜಪ್ತಿ ಮಾಡಿಕೊಂಡು ಬಂಧಿಸಿದ್ದರು. ಸಿಪಾಯಿ ಮತ್ತು ಸಿಂಧೂರ ಚಿತ್ರತಂಡಗಳು ಥಾಯ್ ಲ್ಯಾಂಡ್ ನಲ್ಲಿ 24 ದಿನಗಳ ವನವಾಸ ಅನುಭವಿಸಿ ಇದೀಗ ಮನೆಗೆ ಮರಳಿವೆ.

ಪತ್ರಿಕಾಗೋಷ್ಠಿಯಲ್ಲಿ ಎಲ್ಲಾ ತಿಳಿಸುತ್ತಾರಂತೆ
ಮಂಗಳವಾರ (ಫೆ.24) ಮಧ್ಯರಾತ್ರಿ ಥಾಯ್ ಏರ್ ವೇಸ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಚಿತ್ರತಂಡ ಮಾಧ್ಯಮಗಳಿಗೆ ಉತ್ತರಿಸಲು ನಿರಾಕರಿಸಿವೆ. ಪತ್ರಿಕಾಗೋಷ್ಠಿಯಲ್ಲಿ ಎಲ್ಲಾ ವಿವರಗಳನ್ನು ನೀಡುವುದಾಗಿ ಹೇಳಿಕೊಂಡಿವೆ.

ಇಷ್ಟಕ್ಕೂ ಅಲ್ಲಿ ಏನಾಯಿತು? ಇವರನ್ನು ಬಂಧಿಸಿದ್ದೇಕೆ?
ಇಷ್ಟಕ್ಕೂ ಅಲ್ಲಿ ಏನಾಯಿತು? ಇವರನ್ನು ಬಂಧಿಸಿದ್ದೇಕೆ? ಎಂಬ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗದಿದ್ದರೂ ಇವರ ಬೇಜವಾಬ್ದಾರಿಯೇ ಕಾರಣ ಎನ್ನಲಾಗಿದೆ. ಇವರ ಬಳಿ ವರ್ಕ್ ಪರ್ಮಿಟ್ ಇಲ್ಲದಿರುವುದು, ಟೂರಿಸ್ಟ್ ವೀಸಾದಲ್ಲಿ ಹೋಗಿ ಚಿತ್ರೀಕರಣ ನಡೆಸಿರುವ ಆರೋಪಗಳು ಕೇಳಿಬಂದಿವೆ.

ಕೋ-ಆರ್ಡಿನೇಟರ್ ಮಾಡಿದ ಅವಾಂತರ
ಆದರೆ ವರ್ಕ್ ಪರ್ಮಿಷನ್ ಗಾಗಿ ಚಿತ್ರತಂಡ ಲೋಕಲ್ ಕೋ-ಆರ್ಡಿನೇಟರ್ ಒಬ್ಬರನ್ನು ನೆಚ್ಚಿಕೊಂಡಿತ್ತು. ಆ ಕೋ-ಆರ್ಡಿನೇಟರ್ ಮಾಡಿದ ಅವಾಂತರವೇ ಇದಕ್ಕೆ ಕಾರಣ ಎನ್ನಲಾಗಿದೆ. ಆದರೆ ಅಸಲಿ ಕಾರಣ ಇದಲ್ಲ, ಎರಡೂ ಚಿತ್ರತಂಡಗಳ ನಡುವೆ ಅಲ್ಲಿ ಗಲಾಟೆ ನಡೆದದ್ದು ಪೊಲೀಸ್ ಬಂಧನಕ್ಕೆ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ.

ಯಾವ ಕನ್ನಡ ಚಿತ್ರಕ್ಕೂ ಈ ರೀತಿ ಆಗಿಲ್ಲ
ಅದು ಏನೇ ಇರಲಿ ಇದುವರೆಗೂ ಕನ್ನಡದ ಸಾಕಷ್ಟು ಚಿತ್ರಗಳನ್ನು ಬ್ಯಾಂಕಾಕ್, ಪಟ್ಟಾಯಂನಲ್ಲಿ ಚಿತ್ರೀಕರಣಗೊಂಡಿವೆ. ಅವರ್ಯಾರಿಗೂ ಈ ರೀತಿಯ ಅನುಭವ ಆಗಿಲ್ಲ. ಇದೇ ಮೊದಲ ಬಾರಿಗೆ ಸಿಪಾಯಿ ಹಾಗೂ ಸಿಂಧೂರ ಚಿತ್ರತಂಡಗಳು ಎಡವಟ್ಟು ಮಾಡಿಕೊಂಡಿವೆ.

ರೆಬೆಲ್ ಸ್ಟಾರ್ ಅಂಬರೀಶ್ ಮಧ್ಯಪ್ರವೇಶ
ಸಿಪಾಯಿ ಹಾಗೂ ಸಿಂಧೂರ ಚಿತ್ರತಂಡಗಳಿಗೆ ಸಹಾಯ ಮಾಡಲು ಅವರನ್ನು ಅಲ್ಲಿಂದ ಕರೆತರಲು ವಸತಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಥಾಯ್ ಲ್ಯಾಂಡ್ ನ ಭಾರತೀಯ ರಾಯಬಾರಿ ರಾಮ್ ರಾಮಚಂದ್ರನ್ ಅವರು ಮಧ್ಯಪ್ರವೇಶಿಸಿದ್ದರು.


Click it and Unblock the Notifications











