"ಹೊಸಪೇಟೆ ಘಟನೆ ನನ್ನ ಕೆನ್ನೆಗೆ ಹೊಡೆದಂತಾಯ್ತು.. ದರ್ಶನ್ ಲಕ್ಷ್ಮಿಪುತ್ರ ಆಗ್ತಾರೆ ಎಂದ್ರು ಅಮ್ಮ": ವಿನೋದ್ ರಾಜ್
ನಟ ದರ್ಶನ್ ಮೇಲೆ ಚಪ್ಪಲಿ ತೂರಿದ ಘಟನೆ ಸಂಬಂಧ ನಟ ವಿನೋದ್ ರಾಜ್ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಘಟನೆ ಬಗ್ಗೆ ತಮ್ಮ ತಾಯಿ ಹಿರಿಯ ನಟಿ ಲೀಲಾವತಿ ಏನು ಹೇಳಿದರು ಎನ್ನುವುದನ್ನು ತಿಳಿಸಿದ್ದಾರೆ.
ಡಿಸೆಂಬರ್ 18ರಂದು ಹೊಸಪೇಟೆಯಲ್ಲಿ 'ಕ್ರಾಂತಿ' ಸಿನಿಮಾ 2ನೇ ಸಾಂಗ್ ರಿಲೀಸ್ ಕಾರ್ಯಕ್ರಮ ನಡೆದಿತ್ತು. ಚಿತ್ರತಂಡ ಬರುವ ಸುದ್ದಿ ಕೇಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಇಡೀ ಚಿತ್ರತಂಡ ವೇದಿಕೆ ಏರಿತ್ತು. ನಟಿ ರಚಿತಾ ರಾಮ್ ಮಾತನಾಡುವ ವೇಳೆಯಲ್ಲಿ ಪಕ್ಕದಲ್ಲೇ ನಿಂತಿದ್ದ ದರ್ಶನ್ ಮೇಲೆ ಕಿಡಿಗೇಡಿ ಚಪ್ಪಲಿ ಎಸೆದಿದ್ದ. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ತಪ್ಪಿತಸ್ಥನನ್ನು ಬಂಧಿಸುವಂತೆ ಆಗ್ರಹ ವ್ಯಕ್ತವಾಗುತ್ತಿದೆ. ಸಾಕಷ್ಟು ಸೆಲೆಬ್ರೆಟಿಗಳು ಘಟನೆಯನ್ನು ಖಂಡಿಸಿದ್ದಾರೆ.
ನಟ ವಿನೋದ್ ರಾಜ್ ಕೂಡ ಈ ಘಟನೆ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಅವರ ಮೇಲೆ ಈ ರೀತಿ ಚಪ್ಪಲಿ ಎಸೆದಿದ್ದು, ನನ್ನ ಕೆನ್ನೆಗೆ ಹೊಡೆದಂತೆ ಆಯಿತು ಎಂದಿದ್ದಾರೆ. ತಾಯಿ ಲೀಲಾವತಿ ಅವರು ಕೂಡ ಈ ಬಗ್ಗೆ ಮಾತನಾಡಿದರು. ದರ್ಶನ್ಗೆ ಇನ್ನು ಮುಂದೆ ಯಶಸ್ಸು ಸಿಕ್ತು ಎಂದು ಹೇಳಿದ್ದಾಗಿ ವಿವರಿಸಿದ್ದಾರೆ.

ನಮ್ಮ ನಡುವೆ ಭಿನ್ನಾಭಿಪ್ರಾಯ ಬೇಡ
"ಘಟನೆ ನಡೆದಿರುವುದು ನೋಡಿದರೆ. ನಾವು ಯಾವ ರೀತಿ ನಡೆದುಕೊಳ್ಳುತ್ತೇವೆ. ನಮ್ಮ ಮನೋಭಾವನೆಗಳು ಏನು? ಮನಸ್ಥಿತಿ ಏನು? ದರ್ಶನ್ ಬೇರೆ ಯಾರು ಅಲ್ಲ. ಹಿರಿಯರನ್ನು ಇಟ್ಟುಕೊಂಡು ಮುಂದಿನ ಪೀಳಿಗೆಯನ್ನು ಗೌರವಿಸುತ್ತೀವಿ. ತೂಗುದೀಪ ಶ್ರೀನಿವಾಸ್ ನಮಗೆ ಬೇಡದವರಾ? ಅವರು ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ದರ್ಶನ್ ಅವರ ಮಗ ಅಲ್ಲವೇ, ಯಾಕೆ ಈ ಭಿನ್ನಾಭಿಪ್ರಾಯ ನಮ್ಮ ನಡುವೆ ಬರಬೇಕು. ಬರಬಾರದು ಅಲ್ಲವೇ, ಖಂಡಿತ ಬರಲೇಬಾರದು" ಎಂದು ಹೇಳಿದ್ದಾರೆ.

ಹೃದಯಕ್ಕೆ ಚುಚ್ಚಿದಂತೆ ಆಗಿರುತ್ತದೆ
"ಆ ಘಟನೆ ನೋಡಿದಾಗ ನನ್ನ ಕೆನ್ನೆಗೆ ಹೊಡೆದಂತೆ ಆಗುತ್ತದೆ. ಅಷ್ಟು ನೋವಾಗುತ್ತದೆ. ಕನ್ನಡಿಗರಿಗೆ ಒಂದು ಮಾತು ಹೇಳುತ್ತೇನೆ. ಬೇಕು ಅಂದಾಗೆ ಕೆಲ ವಸ್ತುಗಳು ಸಿಗುವುದಿಲ್ಲ. ನಂತರ ನೊಂದುಕೊಂಡು ಬೇಸರ ಮಾಡಿಕೊಳ್ಳಬಾರದು. ಇದ್ದಾಗ ನಾವೆಲ್ಲಾ ಪ್ರೀತಿಯಿಂದ ಒಗ್ಗಟ್ಟಾಗಿ ಬಾಳಬೇಕು. ದೇವರು ಎಲ್ಲರಿಗಿಂತ ದೊಡ್ಡವನು. ನಾವು ಮಾಡುವ ತಪ್ಪಿನಿಂದ ನಮ್ಮವರಿಗೆ ತೊಂದರೆ ಆಗಬಹುದು. ಯಾರಿಗೂ ಅದು ತಟ್ಟಬಾರದು. ಆ ಘಟನೆ ಆದಮೇಲೂ ಚಿನ್ನ ಹೋಗ್ಲಿ ಬಿಡು ಎಂದರು. ಅದರೊಳಗೆ ಎಷ್ಟು ನೋವಾಗಿರಬಹುದು. ಹೃದಯಕ್ಕೆ ಈಟಿ ಚುಚ್ಚಿದಂತೆ ಆಗಿರುತ್ತದೆ. ನನಗೆ ಅಷ್ಟು ನೋವು ಆಗಿದೆ ಅಂದರೆ ಯಾರಿಗೆ ನೋವಾಗಲು ಸಾಧ್ಯವಿಲ್ಲ ಹೇಳಿ"

ದರ್ಶನ್ ಲಕ್ಷ್ಮಿಪುತ್ರ ಆಗ್ತಾರೆ
ತಾಯಿಯವರು ಒಂದು ಮಾತು ಹೇಳಿದರು. ಬಿದ್ದಿದ್ದು ಅವರ ಮೇಲೆ ಲಕ್ಷ್ಮಿ ಬಿಡಪ್ಪ. ಲಕ್ಷ್ಮಿಪುತ್ರ ಆಗಿಬಿಡ್ತಾರೆ. ನಮ್ಮ ಅದೇ ಮಾತು ಹೇಳಿದರು. ಚಪ್ಪಲಿ ಬಿತ್ತು ಅಂದರು. ಬಿದ್ದರೆ ಲಕ್ಷ್ಮಿ ಬಿದ್ದಿರುವುದು. ಲಕ್ಷ್ಮಿ ಒಲಿದುಬಿಡುತ್ತಾಳೆ ಬಿಡಪ್ಪ, ಮುಂದೆ ಯಾವುದಾದರೂ ಸಿನಿಮಾ ರಿಲೀಸ್ ಆಗಿ ಬಂಫರ್ ಹಿಟ್ ಆಗುತ್ತದೆ ಎಂದರು" ಅಂತ ವಿನೋದ್ ರಾಜ್ ತಮ್ಮ ತಾಯಿ ಲೀಲಾವತಿ ಅವರ ಮಾತುಗಳನ್ನು ವಿವರಿಸಿದರು.

ಭಾನುವಾರ 3ನೇ ಹಾಡು ಬಿಡುಗಡೆ
ಇನ್ನು ಹೊಸಪೇಟೆ ಘಟನೆ ಮಾಸುವ ಮುನ್ನವೇ 'ಕ್ರಾಂತಿ' ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. 'ಪುಷ್ಪವತಿ' ಎಂದು ಶುರುವಾಗುವ ಸ್ಪೆಷಲ್ ಸಾಂಗ್ನ ಹುಬ್ಬಳ್ಳಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಇಡೀ ಚಿತ್ರತಂಡ ಅಭಿಮಾನಿಗಳ ಸಮ್ಮುಖದಲ್ಲಿ ಸಾಂಗ್ ರಿಲೀಸ್ ಮಾಡಲಿದೆ. ಜನವರಿ 26ಕ್ಕೆ 'ಕ್ರಾಂತಿ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ತೆರೆಗೆ ಬರಲಿದೆ.


Click it and Unblock the Notifications











