ಅರ್ಜುನ್ ಸರ್ಜಾ-ಶ್ರುತಿ ಮೀಟೂ ಫೈಟ್: ಹೈಕೋರ್ಟ್ ನಲ್ಲಿ ಇಂದು ಅರ್ಜಿ ವಿಚಾರಣೆ
'ವಿಸ್ಮಯ' ಚಿತ್ರದ ಚಿತ್ರೀಕರಣದ ರಿಹರ್ಸಲ್ ವೇಳೆ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದರು ಎಂದು #ಮೀಟೂ ಅಭಿಯಾನದ ಅಡಿ ನಟಿ ಶ್ರುತಿ ಹರಿಹರನ್ ಆರೋಪಿಸಿದ್ದರು. ಶ್ರುತಿ ಹರಿಹರನ್ ಮಾಡಿದ ಈ ಆರೋಪದಿಂದ ಸ್ಯಾಂಡಲ್ ವುಡ್ ನಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿ ಆಯ್ತು. ಬೇಸರಗೊಂಡ ನಟ ಅರ್ಜುನ್ ಸರ್ಜಾ, ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅತ್ತ ಅರ್ಜುನ್ ಸರ್ಜಾ ಕೋರ್ಟ್ ಮೊರೆ ಹೋಗುತ್ತಿದ್ದಂತೆಯೇ, ನಟಿ ಶ್ರುತಿ ಹರಿಹರನ್ ಪೊಲೀಸ್ ಕಂಪ್ಲೇಂಟ್ ಕೊಟ್ಟರು. ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ನಲ್ಲಿ ಎಫ್.ಐ.ಆರ್ ದಾಖಲಾಯ್ತು. ತಮ್ಮ ವಿರುದ್ಧ ದಾಖಲಾಗಿರುವ ಎಫ್.ಐ.ಆರ್ ರದ್ದು ಕೋರಿ ಹೈಕೋರ್ಟ್ ಗೆ ಅರ್ಜುನ್ ಸರ್ಜಾ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮಾಡಬಹುದೇ ಹೊರತು, ಅರ್ಜುನ್ ಸರ್ಜಾ ರನ್ನ ಬಂಧಿಸುವಂತಿಲ್ಲ ಎಂದು ಕೋರ್ಟ್ ಆದೇಶ ನೀಡಿತ್ತು. ಅದರಂತೆ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ನಲ್ಲಿ ಹಾಜರ್ ಆಗಿ ತಮ್ಮ ಹೇಳಿಕೆಯನ್ನ ಅರ್ಜುನ್ ಸರ್ಜಾ ನೀಡಿದ್ದಾಗಿದೆ.

ಪ್ರಕರಣದ ಸಾಕ್ಷಿಗಳಾದ ಸಹಾಯಕ ನಿರ್ದೇಶಕ, ಮೇಕಪ್ ಆರ್ಟಿಸ್ಟ್, 'ವಿಸ್ಮಯ' ನಿರ್ಮಾಪಕ ಹಾಗೂ ನಿರ್ದೇಶಕರು ಕೂಡ ತಮ್ಮ ಹೇಳಿಕೆಗಳನ್ನ ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ದಾಖಲಿಸಿದ್ದಾರೆ. ಶ್ರುತಿ ಹರಿಹರನ್ ಹೇಳಿದ ಹಾಗೆ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟವಾಗಿ 'ವಿಸ್ಮಯ' ನಿರ್ಮಾಪಕ ಮತ್ತು ನಿರ್ದೇಶಕ ತಿಳಿಸಿದ್ದಾರೆ.
ಇವತ್ತು ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಲಿದೆ.


Click it and Unblock the Notifications











