'ಲಕ್ಷ್ಮಣ' ಟೀಸರ್ ಬಿಡುಗಡೆಗೆ ರಾಜಮೌಳಿ ಬರೋದು ಪಕ್ಕಾ
ಖ್ಯಾತ ನಿರ್ದೇಶಕ ಆರ್ ಚಂದ್ರು ಅವರ ಆಕ್ಷನ್-ಕಟ್ ನಲ್ಲಿ ಮೂಡಿಬರುತ್ತಿರುವ, ನವ ಪ್ರತಿಭೆ ನಟ ಅನೂಪ್ ಅವರ 'ಲಕ್ಷ್ಮಣ' ಚಿತ್ರದ ಟೀಸರ್ ಬಿಡುಗಡೆ ಮಾಡಲು 'ಬಾಹುಬಲಿ' ಸಿನಿಮಾ ಖ್ಯಾತಿಯ ತೆಲುಗಿನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
'ಲಕ್ಷ್ಮಣ' ಚಿತ್ರದ ಟೀಸರ್ ಬಿಡುಗಡೆಗೆ ಎಸ್ ಎಸ್ ರಾಜಮೌಳಿ ಬರ್ತಾರೆ ಅಂತ ಈ ಮೊದಲು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ಅಲ್ವಾ.
ಇದೀಗ ರಾಜಮೌಳಿ ಬರುತ್ತಿರುವುದು ಪಕ್ಕಾ ಆಗಿದ್ದು, ಮುಂಬೈನಲ್ಲಿ ಟೀಸರ್ ನಿರ್ಮಾಣದ ಕೆಲಸ ನಡೆಯುತ್ತಿದೆ. ಇನ್ನೇನು ಮುಂದಿನ 10 ದಿನಗಳಲ್ಲಿ ಪ್ರೇಕ್ಷಕರಿಗೆ ಲಭ್ಯವಾಗಲಿದೆ.
'ರಾಜಮೌಳಿ ಅವರು ಒಪ್ಪಿಕೊಂಡಿದ್ದು, ತುಂಬಾ ಸಂತಸ ತಂದಿದೆ. ಇದು ತೆಲುಗಿನ ಖ್ಯಾತ ನಿರ್ದೇಶಕರಿಗೆ ನಮ್ಮ ಕೆಲಸವನ್ನು ತೋರಿಸುವ ಅವಕಾಶ ದೊರೆತಂತಾಗಿದೆ', ಎಂದು ನಿರ್ದೇಶಕ ಆರ್ ಚಂದ್ರು ನುಡಿಯುತ್ತಾರೆ.['ಲಕ್ಷ್ಮಣ'ನ ಟ್ರೈಲರ್ ಬಿಡುಗಡೆಗೆ, ರಾಜಮೌಳಿ ಬರಬಹುದಾ?]
'ನಾಯಕ ಅನೂಪ್ ಅವರಿಗೆ ಒಳ್ಳೆಯ ಕಂಠ ಇದೆ. ಆದ್ದರಿಂದ ಅವರೇ ಡಬ್ ಮಾಡಿದ್ದಾರೆ. ಕನ್ನಡ ಚಿತ್ರೋದ್ಯಮದಲ್ಲಿ ಮುಂದಿನ ದಿನಗಳಲ್ಲಿ ಬೆಳಗಲಿರುವ ನಟ ಅವರು.
'ಸದ್ಯಕ್ಕೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಅನೂಪ್ ಅವರು ಹೊಸಬರಾದರೂ ಕೂಡ ನುರಿತ ನಟನಂತೆ ನಟಿಸಿದ್ದಾರೆ. ಕನ್ನಡ ಚೆನ್ನಾಗಿ ಬಲ್ಲ ನಟಿ ಮೇಘನಾ ರಾಜ್ ಅವರು ಚಿತ್ರದ ನಾಯಕಿಯಾಗಿದ್ದು, ಅನೂಪ್ ಗೆ ಅವರು ಸರಿಯಾದ ಜೋಡಿ' ಎಂದು ನಿರ್ದೇಶಕ ಚಂದ್ರು ಅವರು ತಿಳಿಸಿದ್ದಾರೆ.
ಈಗಾಗಲೇ ಸಿನಿಮಾ ಡಬ್ಬಿಂಗ್ ಹಂತದಲ್ಲಿದ್ದು, ಇನ್ನೇನು ಚಿತ್ರದ 3 ಹಾಡುಗಳಷ್ಟೇ, ಚಿತ್ರೀಕರಣಕ್ಕೆ ಬಾಕಿ ಉಳಿದಿದೆ. ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ.


Click it and Unblock the Notifications













