'ಕೆ.ಜಿ.ಎಫ್' ಬಿಡುಗಡೆ ಆಗುತ್ತಾ? ಇಲ್ವಾ? ಅಭಿಮಾನಿಗಳಲ್ಲಿ ಗೊಂದಲ!
ದೇಶದಾದ್ಯಂತ 'ಕೆ.ಜಿ.ಎಫ್' ಫೀವರ್ ಜೋರಾಗಿದೆ. 'ಕೆ.ಜಿ.ಎಫ್' ಚಿತ್ರವನ್ನ ಬರಮಾಡಿಕೊಳ್ಳಲು ಅಭಿಮಾನಿಗಳೆಲ್ಲಾ ಭರ್ಜರಿ ತಯಾರಿ ನಡೆಸುತ್ತಿರುವಾಗಲೇ, ಬಿಗ್ ಶಾಕಿಂಗ್ ನ್ಯೂಸ್ ಸಿಕ್ಕಿದೆ.
'ಕೆ.ಜಿ.ಎಫ್' ಚಿತ್ರ ಬಿಡುಗಡೆಗೆ ಬೆಂಗಳೂರಿನ ಸಿವಿಲ್ ಕೋರ್ಟ್ ಮಧ್ಯಂತರ ತಡೆ ನೀಡಿದೆ. ಜನವರಿ 7, 2019 ರವರೆಗೂ 'ಕೆ.ಜಿ.ಎಫ್' ಬಿಡುಗಡೆಗೆ ತಡೆ ನೀಡಲಾಗಿದೆ.
ರೌಡಿ ತಂಗಂ ಜೀವನಚರಿತ್ರೆಯ ಹಕ್ಕು ಪಡೆದಿದ್ದ ರಾಜೇಶ್ವರಿ ಕಂಬೈನ್ಸ್ ನ ವೆಂಕಟೇಶ್ ಎಂಬುವರು 'ಕೆ.ಜಿ.ಎಫ್' ಸಿನಿಮಾ ರೌಡಿ ತಂಗಂ ಕಥೆ ಹೊಂದಿದೆ ಎಂದು ಆರೋಪಿಸಿ, ಬಿಡುಗಡೆಗೆ ತಡೆ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ.

ನ್ಯಾಯಾಲಯ ಬಿಡುಗಡೆಗೆ ತಡೆ ನೀಡಿರುವ ಕಾರಣ, ನಾಳೆ ಚಿತ್ರ ಬಿಡುಗಡೆ ಆಗುತ್ತೋ, ಇಲ್ವೋ ಎಂಬ ಗೊಂದಲದಲ್ಲಿದ್ದಾರೆ ಅಭಿಮಾನಿಗಳು. ಇತ್ತ ಕೋರ್ಟ್ ನಿಂದ ತಡೆಯಾಜ್ಞೆಯ ಆದೇಶದ ಪ್ರತಿ ನಮ್ಮ ಕೈ ಸೇರಿಲ್ಲ ಅಂತ ಚಿತ್ರತಂಡ ತಿಳಿಸಿದೆ.
''ಇದುವರೆಗೆ ನಮಗೆ ತಡೆಯಾಜ್ಞೆ ಅಂತ ಯಾವುದೇ ನೋಟೀಸ್ ಬಂದಿಲ್ಲ. ನಾಳೆ ಚಿತ್ರ ಬಿಡುಗಡೆ ಆಗಲಿದೆ. ಕೋರ್ಟ್ ನಿಂದ ಆದೇಶ ಬಂದರೆ, ಅದಕ್ಕೆ ಉತ್ತರ ಕೊಡುವೆ. ನಾನು ಆಫೀಸ್ ನಲ್ಲಿ ಇಲ್ಲ. ನನಗೆ ಯಾವುದೇ ನೋಟೀಸ್ ಅಧಿಕೃತವಾಗಿ ಬಂದಿಲ್ಲ. 'ಕೆ.ಜಿ.ಎಫ್' ಚಿತ್ರದಲ್ಲಿ ಯಾವ ರೌಡಿ ಕಥೆಯೂ ಇಲ್ಲ'' ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಸ್ಪಷ್ಟ ಪಡಿಸಿದ್ದಾರೆ.
ಒಟ್ನಲ್ಲಿ, 'ಕೆ.ಜಿ.ಎಫ್' ನೋಡಲು ತುದಿಗಾಲಿನಲ್ಲಿ ನಿಂತಿದ್ದ ಅಭಿಮಾನಿಗಳಿಗೆ ಸದ್ಯ ಕನ್ಫ್ಯೂಶನ್ ಕಾಡುತ್ತಿರುವುದು ಸುಳ್ಳಲ್ಲ.


Click it and Unblock the Notifications











