ಸುದೀಪರ 'ಈಗ' ಆಸ್ಕರ್ ಅಂಗಳದಲ್ಲಿ ಹಾರುವುದೇ?

'ಈಗ' ಚಿತ್ರ ಉಳಿದ 18 ಚಿತ್ರಗಳ ಜೊತೆ ಪೈಪೋಟಿ ನಡೆಸಿ ಭಾರತದಿಂದ ಅಧಿಕೃತವಾಗಿ ಆಸ್ಕರ್ ಗೆ ನಾಮಾಂಕಣಗೊಳ್ಳವುದೇ ಕಾದು ನೋಡಬೇಕಿದೆ. ಇದುವರೆವಿಗೂ ಭಾರತದಿಂದ 'ವಿದೇಶಿ ಭಾಷಾ ಅತ್ಯುತ್ತಮ ಚಿತ್ರ' ವಿಭಾಗದಲ್ಲಿ ಲಗಾನ್, ಮದರ್ ಇಂಡಿಯಾ ಹಾಗೂ ಸಲಾಂ ಬಾಂಬೆ ಅಧಿಕೃತವಾಗಿ ಸ್ಪರ್ಧಿಸಿತ್ತು.
ಜುಲೈನಲ್ಲಿ ಹಾರಾಟ ಆರಂಭಿಸಿದ ಈಗ ಎಂಬ ನೊಣ ಇನ್ನೂ ಕೂಡಾ ಎಲ್ಲೆಡೆ ಸದ್ದು ಮಾಡುತ್ತಿದೆ. ಈಗ ಚಿತ್ರ ಮೂಲಕ ಕನ್ನಡದ ಕಿಚ್ಚ ಸುದೀಪ್ ಇಡೀ ಭಾರತದಲ್ಲಿ ಮನೆ ಮಾತಾಗಿದ್ದಾರೆ. ನಾನಿ, ಸಮಂತಾ ಅಭಿನಯದ ಈ ಚಿತ್ರಕ್ಕೆ ಎಂಎ ಕೀರವಾಣಿ ಸಂಗೀತವಿದೆ. ರಾಜಮೌಳಿ ಮತ್ತೊಮ್ಮೆ ತಮ್ಮ ಅದ್ಭುತ ಕೈಚಳಕದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಈ ಬಾರಿ ಆಸ್ಕರ್ ಎಂಟ್ರಿಗೆ ಕಾದಿರುವ 18 ಚಿತ್ರಗಳ ಪಟ್ಟಿಯಲ್ಲಿ 'ಬರ್ಫಿ', ಹೀರೋಯಿನ್', 'ಕಹಾನಿ' ಹಾಗೂ ಗ್ಯಾಂಗ್ಸ್ ಆಫ್ ವಸ್ಸೆಪುರ್ ಕೂಡಾ ಇದೆ. ದಕ್ಷಿಣ ಭಾರತದ ಫಿಲಂ ಚೇಂಬರ್ ಆಫ್ ಕಾಮರ್ಸ್ ನ ಕಚೇರಿಯಲ್ಲಿ 16 ಜನರ ಆಯ್ಕೆ ಸಮಿತಿ ಸೆ.18 ರಿಂದ 26ರ ತನಕ 18 ಚಿತ್ರಗಳನ್ನು ವೀಕ್ಷಿಸಿ ಅಂತಿಮ ಆಯ್ಕೆಯನ್ನು ಘೋಷಿಸಲಿದೆ.
ಆಸ್ಕರ್ ಆಯ್ಕೆ ಎಂಟ್ರಿ ಫೀ: ಆಸ್ಕರ್ ಅಂಗಳಕ್ಕೆ ಚಿತ್ರ ಸೇರಬೇಕಾದರೆ ಜ್ಯೂರಿ ಸದಸ್ಯರ ಕೃಪೆ ಕೂಡಾ ಇರಬೇಕಾಗುತ್ತದೆ. ಜೊತೆಗೆ ಪ್ರವೇಶ ಶುಲ್ಕ ಕೂಡಾ ದುಬಾರಿಯಾಗಿದ್ದು 50,000 ರು ಕಟ್ಟಬೇಕು. ಕಡಿಮೆ ಬಜೆಟ್ ನಲ್ಲಿ ಉತ್ತಮ ಚಿತ್ರ ತೆಗೆಯುವ ನಿರ್ಮಾಪಕ, ನಿರ್ದೇಶಕರಿಗೆ ಇದು ಭಾರಿ ಹೊಡೆತ ಎನ್ನಬಹುದು ಎಂದು ಈಗ ಚಿತ್ರದ ಸಹ ನಿರ್ಮಾಪಕ ಸುರೇಶ್ ಬಾಬು ಹೇಳಿದ್ದಾರೆ.
ಆದರೆ, ಇದು ಇಲ್ಲಿಗೆ ನಿಲ್ಲುವುದಿಲ್ಲ ಹಾಗೂ ಹೀಗೂ 50,000 ರು ಕಟ್ಟಿ, ಆಯ್ಕೆದಾರರ ಕೃಪೆಯೂ ಸಿಕ್ಕಿ ಆಸ್ಕರ್ ಗೆ ನಾಮಾಂಕಣಗೊಂಡರೂ ಚಿತ್ರವನ್ನು ಹಾಲಿವುಡ್ ಅಂಗಳದಲ್ಲಿ ಪ್ರಚಾರ ಮಾಡಲು ಭಾರಿ ದುಡ್ಡು ಖರ್ಚು ಮಾಡಬೇಕಾಗುತ್ತದೆ. ಹಾಲಿವುಡ್ ನಲ್ಲಿ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲು ಕನಿಷ್ಠವೆಂದರೂ 50 ಲಕ್ಷ ರು ಆದರೂ ವ್ಯಯಿಸಬೇಕಾಗುತ್ತದೆ. 5000ಕ್ಕೂ ಅಧಿಕ ಅಕಾಡೆಮಿ ಸದಸ್ಯರ ಮನಸ್ಸಿಗೆ ಚಿತ್ರ ಓಕೆ ಏನಿಸಿದರೆ ಮಾತ್ರ ಚಿತ್ರ ಪ್ರಶಸ್ತಿ ಗೆಲ್ಲಲು ಸಾಧ್ಯ.ಹೀಗಾಗಿ ಆಸ್ಕರ್ ಗೆಲ್ಲುವುದೆಂದರೆ ಸುಲಭದ ಮಾತಲ್ಲ.


Click it and Unblock the Notifications











