ಅಭಿನಯ ಚಕ್ರವರ್ತಿ ಅನ್ನಿಸಿಕೊಂಡ ಸುದೀಪ್
ಕಿಚ್ಚ ಸುದೀಪ್ ಈಗ 'ಅಭಿನಯ ಚಕ್ರವರ್ತಿ'. ಈ ಬಿರುದನ್ನು ಕರ್ನಾಟಕ ರಕ್ಷಣಾ ವೇದಿಕೆ ದಯಪಾಲಿಸಿದೆ. ಕರವೇ ಸಾಂಸ್ಕೃತಿಕ ಘಟಕವು 11ನೇ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಈ ಬಿರುದನ್ನು ಪುಟ್ಟಣ್ಣ ಚೆಟ್ಟಿ ಪುರಭರವನದಲ್ಲಿ ಶುಕ್ರವಾರ (ಜೂ.29) ಸಂಜೆ ಪ್ರದಾನ ಮಾಡಿತು.
ರೆಬೆಲ್ ಸ್ಟಾರ್ ಅಂಬರೀಶ್ ಅವರು ಸುದೀಪ್ ಅವರಿಗೆ 'ಅಭಿನಯ ಚಕ್ರವರ್ತಿ' ಕಿರೀಟವನ್ನು ತೊಡಿಸಿದರು. ಜಯಮೃತ್ಯಂಜಯ ಮಹಾಸ್ವಾಮೀಜಿ ಅವರ ಸಾನಿಧ್ಯದಲ್ಲಿ ಗೃಹ ಸಚಿವ ಆರ್.ಅಶೋಕ್ ಅವರು ಸಮಾರಂಭವನ್ನು ಉದ್ಘಾಟಿಸಿದರು.
ಈ ವರ್ಣರಂಜಿತ ಸಮಾರಂಭದ ಅಧ್ಯಕ್ಷತೆಯನ್ನು ಟಿ.ಎ.ನಾರಾಯಣಗೌಡ ಅವರು ವಹಿಸಿದ್ದರು. ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶ್ರೀರಾಮುಲು, ಕೆವಿ ಚಂದ್ರಶೇಖರ್, ಸಿನಿಮಾ ತಾರೆಗಳಾದ ತಾರಾ ವೇಣು, ಕ್ರೇಜಿಸ್ಟಾರ್ ರವಿಚಂದ್ರನ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿನಯ ಶಾರದೆ ಜಯಂತಿ, ಗುರುರಾಜ್ ಹೊಸಕೋಟೆ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಸುದೀಪ್ ಅವರನ್ನು ಈ ಹಿಂದೆ ಕಿಚ್ಚ, ನಲ್ಲ ಎಂದು ಕರೆಯುತ್ತಿದ್ದರು. ಅವರಿಗೆ ಯಾವುದೇ 'ಸ್ಟಾರ್' ಬಿರುದು ಇರಲಿಲ್ಲ. ಈಗವರ ಮುಡಿಗೆ 'ಅಭಿನಯ ಚಕ್ರವರ್ತಿ' ಎಂಬ ಬಿರುದು ಬಿದ್ದಿದೆ.
ಕೆಂಪೇಗೌಡ ಹಾಗೂ ವಿಷ್ಣುವರ್ಧನ ಚಿತ್ರಗಳ ಬಳಿಕ ಸುದೀಪ್ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದರು. ಏತನ್ಮಧ್ಯೆ ತೆಲುಗು ಹಾಗೂ ತಮಿಳಿನ ದ್ವಿಭಾಷಾ ಚಿತ್ರ 'ಈಗ' ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಈ ಚಿತ್ರದ ಮೂಲಕ ಸುದೀಪ್ ಪರಭಾಷೆಗಳ ಭವಿಷ್ಯ ನಿರ್ಧಾರವಾಗಲಿದೆ.
ಕನ್ವರ್ ಲಾಲ್, ಕೋಟಿಗೊಬ್ಬ 2, ಬಚ್ಚನ್, ಪೊಲೀಸ್ ಸ್ಟೋರಿ 3 ಕನ್ನಡ ಚಿತ್ರಗಳು ಸುದೀಪ್ ಕೈಯಲ್ಲಿವೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಈಗ ಚಿತ್ರವಂತೂ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಸುದೀಪ್ ಬಾಲಿವುಡ್ ನಲ್ಲೂ ಒಂದು ಕೈ ನೋಡಿದ್ದು ಅಲ್ಲೂ ಒಂದಷ್ಟು ಹೆಸರು ಮಾಡಿದ್ದಾರೆ.
ಸುದೀಪ್ ಕನ್ನಡ ಚಿತ್ರರಂಗದ ಬಹುದೊಡ್ಡ ಆಸ್ತಿ. ಇತರ ಚಿತ್ರರಂಗಗಳಲ್ಲಿ ಎಷ್ಟೇ ಖ್ಯಾತಿ ಪಡೆದರೂ ಕನ್ನಡವೇ ನನ್ನ ಉಸಿರು ಎಂದು ಕನ್ನಡ ಚಿತ್ರರಂಗದಲ್ಲಿ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತ ನೆಲೆ ನಿಂತವರು.
ಮೂರು ಬಾರಿ ಸತತವಾಗಿ ಪ್ರತಿಷ್ಠಿತ ಫಿಲಂಫೇರ್ ಪ್ರಶಸ್ತಿ ಪಡೆದದ್ದು ಸುದೀಪ್ ಹೆಗ್ಗಳಿಕೆ. ಸ್ವಾತಿಮುತ್ತು ಚಿತ್ರದ ಅಭಿನಯಕ್ಕಾಗಿ ಅವರಿಗೆ ಕರ್ನಾಟಕ ಸರ್ಕಾರ ನೀಡುವ ಅತ್ಯುತ್ತಮ ಪ್ರಶಸ್ತಿಯೂ ಲಭಿಸಿದೆ. ಸುದೀಪ್ ಪ್ರಶಸ್ತಿಗಳನ್ನು ಮೀರಿ ಬೆಳೆದಿದ್ದಾರೆ. ಬೆಳೆಯುತ್ತಲೇ ಇದ್ದಾರೆ ಎಂದು ಸುದೀಪ್ ಅವರನ್ನು ನಾರಾಯಣಗೌಡರು ಬಣ್ಣಿಸಿದರು. (ಒನ್ ಇಂಡಿಯಾ ಕನ್ನಡ)


Click it and Unblock the Notifications












