ಏಪ್ರಿಲ್ ನಲ್ಲಿ ಪ್ರೇಕ್ಷಕರ ಮುಂದೆ ಸುದೀಪ್ 'ಮಾಣಿಕ್ಯ'
ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಿತ್ರಗಳಲ್ಲಿ ಸುದೀಪ್ ಆಕ್ಷನ್ ಕಟ್ ಹೇಳಿ ಅಭಿನಯಿಸಿರುವ 'ಮಾಣಿಕ್ಯ' ಚಿತ್ರವೂ ಒಂದು. ಈ ಚಿತ್ರ ಯುಗಾದಿ ಹಬ್ಬಕ್ಕೆ (ಮಾ.31) ಪ್ರೇಕ್ಷಕರ ಮುಂದೆ ಬರಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆ ಮುಂದಕ್ಕೆ ಹೋಗಿದೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎನ್ನುತ್ತವೆ ಮೂಲಗಳು. ಏಪ್ರಿಲ್ 17ಕ್ಕೆ ಚುನಾವಣೆ ನಡೆಯಲಿದ್ದು ಮತದಾನದ ಬಳಿಕ ಚಿತ್ರ ತೆರೆಗೆ ಅಪ್ಪಳಿಸಲಿದೆ. ಬಹುಶಃ ಏಪ್ರಿಲ್ ಕೊನೆ ವಾರದಲ್ಲಿ ತೆರೆಗೆ ಬರಲಿದೆ. ['ಮಾಣಿಕ್ಯ' ಮೇಕಿಂಗ್ ವಿಡಿಯೋ ಹೈಲೈಟ್ಸ್]
ಈ ಬಗ್ಗೆ ಸುದೀಪ್ ಟ್ವೀಟಿಸಿದ್ದು, "ಚಿತ್ರದ ಆಡಿಯೋವನ್ನು ಮಾರ್ಚ್ 25ಕ್ಕೆ ನಿಮ್ಮ ಕೈಗಿಡುತ್ತಿದ್ದೇವೆ. ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ದಿನಾಂಕವನ್ನು ಶೀಘ್ರದಲ್ಲೇ ತಿಳಿಸುತ್ತೇವೆ" ಎಂದಿದ್ದಾರೆ. ಇನ್ನು ಪಿಯುಸಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ.ಆಡಿಯೋ ಬಿಡುಗಡೆ ಬಳಿಕ ಚಿತ್ರಕ್ಕೆ ಪ್ರಚಾರ ನೀಡಲು ಸ್ವಲ್ಪ ಸಮಯ ಬೇಕೇಬೇಕಾಗುತ್ತದೆ. ಏಪ್ರಿಲ್ ಕೊನೆಗೆ ಚಿತ್ರ ಬಿಡುಗಡೆಯಾವುವ ಎಲ್ಲಾ ಸಾಧ್ಯತೆಗಳಿವೆ. ನಲ್ಲ ಸುದೀಪ್ ಹಾಗೂ ಮಲ್ಲ ರವಿಚಂದ್ರನ್ ಇದೇ ಮೊದಲ ಸಲ ಒಟ್ಟಿಗೆ ಅಭಿನಯಿಸುತ್ತಿರುವ ಚಿತ್ರ ಇದಾಗಿದೆ.
ಇದೇ ಮೊದಲ ಬಾರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಂದೆಯ ಪಾತ್ರ ಪೋಷಿಸಿದ್ದಾರೆ. ಈ ಮಾತನ್ನು ಸ್ವತಃ ರವಿ ತಮ್ಮ ಕ್ರೇಜಿಸ್ಟಾರ್ ಚಿತ್ರದಲ್ಲಿ ಬಹಿರಂಗಪಡಿಸಿದ್ದರು. ಈಗಾಗಲೆ ಚಿತ್ರದ ಮೊದಲ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು ಚಿತ್ರಪ್ರೇಮಿಗಳ ಕುತೂಹಲವನ್ನು ಸ್ವಲ್ಪಮಟ್ಟಿಗೆ ತಣಿಸಿದೆ.
ಇನ್ನೂ ಮೂರು ಮೇಕಿಂಗ್ ಟ್ರೇಲರ್ ಗಳು ಮುಂಬರುವ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿವೆ. ತೆಲುಗಿನ ಯಶಸ್ವಿ ಚಿತ್ರ ಮಿರ್ಚಿ ರಿಮೇಕ್ ಇದಾಗಿದೆ. ಮೂಲ ಚಿತ್ರದಲ್ಲಿ ಪ್ರಭಾಸ್, ಸತ್ಯರಾಜ್, ಅನುಷ್ಕಾ ಶೆಟ್ಟಿ, ರಿಚಾ ಗಂಗೋಪಾಧ್ಯಾಯ ಮುಂತಾದವರು ಅಭಿನಯಿಸಿದ್ದರು. ಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದ 'ಮಿರ್ಚಿ' ಚಿತ್ರ ಬಾಕ್ಸ್ ಆಫೀಸಲ್ಲಿ ರು.103 ಕೋಟಿ ಗಳಿಸಿ ದಾಖಲೆ ನಿರ್ಮಿಸಿದೆ.
ಈ ಚಿತ್ರದ ಆಕ್ಷನ್ ಕಟ್ ಜೊತೆಗೆ ಕಥೆ, ಚಿತ್ರಕಥೆಯನ್ನೂ ಸುದೀಪ್ ಅವರೇ ಹೆಣೆದಿರುವುದು ವಿಶೇಷ. ಅರ್ಜುನ್ ಜನ್ಯ ಸಂಗೀತವಿರುವ ಚಿತ್ರದ ಪಾತ್ರವರ್ಗದಲ್ಲಿ ರಮ್ಯಕೃಷ್ಣ ಸಹ ಇದ್ದಾರೆ. ಈ ಚಿತ್ರದ ಬಂಗಲೆ ಸೆಟ್ ಗಾಗಿ ಸುಮಾರು ರು.30 ಲಕ್ಷ ಖರ್ಚು ಮಾಡಲಾಗಿದೆ. ಪಾತ್ರವರ್ಗದಲ್ಲಿ ರಮ್ಯಾ ಕೃಷ್ಣ, ವರಲಕ್ಷ್ಮಿ ಶರತ್ ಕುಮಾರ್, ಸಾಧುಕೋಕಿಲ, ಶೋಭರಾಜ್, ರವಿಶಂಕರ್ ಮುಂತಾದ ಕಲಾವಿದರು ಇದ್ದಾರೆ.


Click it and Unblock the Notifications












