ಸಾಯುವ ಮೂರು ದಿನ ಮುಂಚೆ ಚಿರು ಹೇಳಿದ್ದ ಮಾತು ನೆನಪಿಸಿಕೊಂಡ ಸುಂದರ್ ರಾಜ್
ನಟ ಚಿರಂಜೀವಿ ಸರ್ಜಾ ಅಗಲಿ ಒಂದೂವರೆ ವರ್ಷ ದಾಟಿದೆ. ಇಂದು ಚಿರು ಪುತ್ರನ ನಾಮಕರಣ ಮುಗಿದಿದೆ. ಕುಟುಂಬದ ಎಲ್ಲರೂ ಇಂದು ಚಿರುವನ್ನು ಬಹುವಾಗಿ ಮಿಸ್ ಮಾಡಿಕೊಂಡಿದ್ದಾರೆ.
ಚಿರು-ಮೇಘನಾ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರಿಡಲಾಗಿದೆ. ನಾಮಕರಣ ಶಾಸ್ತ್ರದ ಬಳಿಕ ಸುದ್ದಿಗೋಷ್ಠಿ ಏರ್ಪಿಡಿಸಿ ಮೇಘನಾ, ಚಿರು ಮಾವ, ನಟ ಸುಂದರ್ ರಾಜ್, ಧ್ರುವ ಸರ್ಜಾ ಅವರುಗಳು ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾವುಕವಾಗಿ ಮಾತನಾಡಿದ ನಟ ಸುಂದರ್ ರಾಜ್, ಚಿರು ಸರ್ಜಾ ಸಾಯುವುದಕ್ಕೆ ಮೂರು ದಿನ ಮುಂಚೆ ಹೇಳಿದ್ದ ಮಾತುಗಳನ್ನು ನೆನಪಿಸಿಕೊಂಡರು. ''ಚಿರು ಅಂದು ಏಕೆ ಹಾಗೆ ಹೇಳಿದ್ದ ಎಂಬುದು ಈಗ ಅರ್ಥವಾಗುತ್ತಿದೆ'' ಎಂದರು ಸುಂದರ್ ರಾಜ್.
2020ರ ಜುಲೈ 04 ರಂದು ಮನೆಯಲ್ಲಿದ್ದ ಚಿರು ಸರ್ಜಾ, ಸುಂದರ್ ರಾಜ್ ಬಳಿ, ''ನಾನು ಫಿನಿಕ್ಸ್ ಹಕ್ಕಿ ಇದ್ದಂತೆ ಮತ್ತೆ ಹುಟ್ಟು ಬರ್ತೀನಿ'' ಅಂದಿದ್ದರಂತೆ. ಯಾವುದೊ ಆಟವಾಡುವ ಸಮಯಕ್ಕೆ ಚಿರು ಸರ್ಜಾ ಹಾಗೆ ಹೇಳಿದ್ದರಂತೆ.

''ಚಿರು ಯಾಕೆ ಅಂದು ಹಾಗೆ ಅಂದಿದ್ದ ಅನ್ನುವುದು ಈಗ ಗೊತ್ತಾಗುತ್ತಿದೆ''
ಈ ಬಗ್ಗೆ ಇಂದು ನೆನಪಿಸಿಕೊಂಡು ಸುಂದರ್ ರಾಜ್, ''ಚಿರು ಸರ್ಜಾ ಅಂದು ಯಾಕೆ ಈ ಮಾತು ಹೇಳಿದ್ದ ಎಂಬುದು ಈಗ ಮನದಟ್ಟಾಗುತ್ತಿದೆ. ಚಿರು ಮಗ ಅವನ ರೂಪವನ್ನೇ ಹೊತ್ತು ಬಂದುಬಿಟ್ಟಿದ್ದಾನೆ. ಅಂದು ಚಿರು ತನ್ನನ್ನು ಯಾಕೆ ಫಿನಿಕ್ಸ್ ಬರ್ಡ್ಗೆ ಹೋಲಿಸಿಕೊಂಡನೊ, ಸಿನಿಮಾ ಉದ್ಯಮದಲ್ಲಿ ತಾನು ಪುಟಿದೇಳುವ ಬಗ್ಗೆಯೋ ಅಥವಾ ಆಡುತ್ತಿದ್ದ ಆಟದಲ್ಲಿ ಪುಟಿದೇಳುವ ಬಗ್ಗೆಯೋ ಚಿರು ಹಾಗೆ ಹೇಳಿದ್ದಾನೆ ಎಂದುಕೊಂಡಿದ್ದೆ. ಆದರೆ ಈಗ ಅರ್ಥವಾಗುತ್ತಿದೆ ಅವನು ಯಾಕೆ ಆ ಮಾತು ಹೇಳಿದ್ದನೆಂದು'' ಎಂದಿದ್ದಾರೆ ಸುಂದರ್ ರಾಜ್.

ಜೂನ್ 4 ರಂದು ಒಂದು ಮಾತು ಹೇಳಿದ್ದ: ಸುಂದರ್
ಜೂನ್ 4 ರಂದು ನಮ್ಮ ಮನೆಯಲ್ಲಿ ಅವನು ಈ ಮಾತು ಹೇಳಿದ, ಜೂನ್ 5ರಂದು ಹುಟ್ಟುಹಬ್ಬದ ಪಾರ್ಟಿ ಮಾಡಿದ, ಜೂನ್ 7 ರಂದು ಅವನು ನಮ್ಮನ್ನೆಲ್ಲ ಬಿಟ್ಟು ಹೊರಟು ಬಿಟ್ಟ. ಯಾರಿಗೂ ಸಣ್ಣ ಸುಳಿವು ಸಹ ಕೊಡದೆ ಅವನು ಹೊರಟುಬಿಟ್ಟ. ಆದರೆ ನನ್ನ ಕಿವಿಯಲ್ಲಿ ಸದಾ ಅವನು ಹೇಳಿದ್ದ ಫಿನಿಕ್ಸ್ ಬರ್ಡ್ ಮಾತುಗಳೇ ಗುನುಗುತ್ತಿದ್ದವು. ಅವನ ತದ್ರೂಪವನ್ನೇ ಮಗ ಹೊತ್ತುಕೊಂಡು ಬಂದಿದ್ದಾನೆ'' ಎಂದರು ಸುಂದರ್ ರಾಜ್.

2020 ಎಲ್ಲರಿಗೂ ಕರಾಳ ವರ್ಷ: ಸುಂದರ್
''2020 ಎಲ್ಲರಿಗೂ ಕರಾಳ ವರ್ಷ, ನಮಗಂತೂ ಬಹಳ ಕರಾಳ ವರ್ಷವಾಗಿತ್ತು. ಆದರೆ ಜೀವನದಲ್ಲಿ ಒಂದು ಸಿಲ್ವರ್ ಲೈನ್ ಅನ್ನು ಸಹ 2020 ಕರುಣಿಸಿದ. ಅಕ್ಟೋಬರ್ 22ಕ್ಕೆ ಮೊಮ್ಮಗ ಹುಟ್ಟಿದ. ದೇವರಲ್ಲಿ ನಮಗೆ ನಂಬಿಕೆ ಇದೆ ನಮಗೆ. ಏನೇ ಕಳೆದುಕೊಂಡರೂ ಮತ್ತೊಂದು ಕಡೆ ನೆಮ್ಮದಿ ಕೊಡುತ್ತಾನೆ, ಸತ್ಯವನ್ನ ಉಳಿಸುತ್ತಾನೆ. ಹಾಗಾಗಿಯೇ ಚಿರು ಮರುಜನ್ಮ ಹೊತ್ತು ಬಂದಿದ್ದಾನೆ. ಮರುಜನ್ಮ ಹೊತ್ತು ಬಂದಿರುವ ಚಿರುಗೆ ಇಂದು ನಾಮಕರಣವಾಗಿದೆ'' ಎಂದರು ಸುಂದರ್ ರಾಜ್.

ರಾಜ್ ಹಾಗೂ ಸರ್ಜಾ ಕುಟುಂಬ ಅವನ ನೆರಳಾಗಿ ಇರಲಿದ್ದೇವೆ: ಸುಂದರ್
''ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ್ದೇವೆ. ಹೆಸರಿನಲ್ಲೇ ಇರುವಂತೆ ಎರಡೂ ಕುಟುಂಬಕ್ಕೆ ಕೊಂಡಿಯಾಗಿ ಅವನು ಇರಲಿದ್ದಾನೆ. ರಾಜ್ ಕುಟುಂಬದ ಎಲ್ಲರೂ, ಹಾಗೂ ಸರ್ಜಾ ಕುಟುಂಬದ ಎಲ್ಲರೂ ಅವನಿಗೆ ನೆರಳಾಗಿ ಇರಲಿದ್ದೇವೆ. ಅರ್ಜುನ್ ಸರ್ಜಾ ಅವರು ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಕಾರಣ ಅವರು ಇಂದು ಇಲ್ಲಿಗೆ ಬರಲಾಗಲಿಲ್ಲ. ಆದರೆ ಅವರು ಸಹ ನಮ್ಮೊಂದಿಗೆ ಸದಾ ಇರಲಿದ್ದಾರೆ'' ಎಂದರು ಸುಂದರ್ ರಾಜ್.


Click it and Unblock the Notifications











