ಬೆಟ್ ಗೆಲ್ಲೋದು ಯಾರು: ತರುಣ್, ವಿಜಯರಾಘವೇಂದ್ರ?
ತರುಣ್ ಚಂದ್ರ ಮತ್ತು ವಿಜಯರಾಘವೇಂದ್ರ ಇಬ್ಬರೂ ಒಳ್ಳೆಯ ಸ್ನೇಹಿತರು. ಈಗಂತೂ ಅವರಿಬ್ಬರೂ ಪಕ್ಕಾ ಸ್ನೇಹಿತರು ಎಂಬುದು 'ಸ್ನೇಹಿತರು' ಚಿತ್ರದಲ್ಲಿ ಅವರಿಬ್ಬರೂ ಒಟ್ಟಿಗೆ ಅಭಿನಯಿಸುವ ಮೂಲಕ ಜಗಜ್ಜಾಹೀರು. ಅಂದಹಾಗೆ, ಈ 'ಸ್ನೇಹಿತರು' ಚಿತ್ರದ ಬಳಗದಲ್ಲಿ ಇವರಿಬ್ಬರನ್ನು ಹೊರತುಪಡಿಸಿ ಸೃಜನ್ ಲೋಕೇಶ್, ಪಯಣ ಖ್ಯಾತಿಯ ರವಿಶಂಕರ್ ಕೂಡ ಇದ್ದಾರೆ. ಇವರೆಲ್ಲರಿಗೆ ಜೋಡಿಯಾಗಿ ಪ್ರಣೀತಾ ನಟಿಸಿದ್ದಾರೆ. ಮಾ ಸ್ನೇಹಿತ್ ಜಾದೂ ಕೂಡ ಇದೆ.
ಹೇಳಬೇಕಾಗಿರುವ ವಿಷಯ ಇದಲ್ಲ, ಸ್ನೇಹಿತರ 'ಬೆಟ್'ಗೆ ಸಂಬಂಧಿಸಿದ್ದು. ವಿಜಯ ರಾಘವೇಂದ್ರ ಹಾಗೂ ತರುಣ್ ಶೂಟಿಂಗ್ ನಡೆಯುತ್ತಿದ್ದ ವೇಳೆಯಲ್ಲಿ ಒಂದು ವಿಷಯಕ್ಕೆ ಬೆಟ್ ಕಟ್ಟಿಕೊಂಡಿದ್ದಾರೆ. 'ಸ್ನೇಹಿತರು' ಚಿತ್ರದಲ್ಲಿರುವ ವಿ ಹರಿಕೃಷ್ಣ ಸಂಗೀತ ಹಾಗೂ ಸೋನು ನಿಗಮ್ ಗಾಯನದ 'ಬಡಪಾಯಿ ಹೃದಯಕ್ಕೆ...' ಹಾಡು ಇರುವ ಎಲ್ಲಾ ಹಾಡುಗಳನ್ನು ಹಿಂದಿಕ್ಕಿ ನಂ 1 ಸ್ಥಾನಕ್ಕೆ ಲಗ್ಗೆ ಇಡುತ್ತೆ, ಸೂಪರ್ ಹಿಟ್ ಆಗುತ್ತೆ ಎಂಬುದು ತರುಣ್ ಚಾಲೆಂಜ್.
ಅದಕ್ಕೊಪ್ಪದ ವಿಜಯರಾಘವೇಂದ್ರ, "ಹಾಡು ಹಿಟ್ ಆಗುವುದೇನೋ ಸರಿ. ಆದರೆ ಸೂಪರ್ ಹಿಟ್ ಅಥವಾ ನಂ 1 ಸ್ಥಾನ ಸಾಧ್ಯವಿಲ್ಲ" ಎಂದಿದ್ದಾರೆ. ಸರಿ, ಈ ವಿಷಯಕ್ಕೆ ಇಬ್ಬರಲ್ಲಿ ಬೆಟ್ ಒಪ್ಪಂದವಾಗಿದೆ. ಚಾಲೆಂಜ್ ಸೋತವರು ತಮ್ಮ ಸ್ವಂತ ಖರ್ಚಿನಲ್ಲಿ ಗೆದ್ದವರನ್ನು ಗೋವಾ ಟ್ರಿಪ್ ಗೆ ಕರೆದೊಯ್ಯಬೇಕು. ಅಲ್ಲಿನ ಎಲ್ಲಾ ಖರ್ಚನ್ನು ಅವರೇ ಭರಿಸಬೇಕು. ಇದಕ್ಕೊಪ್ಪಿ ಇಬ್ಬರೂ ಬೆಟ್ ಕಟ್ಟಿದ್ದಾರೆ.
ಇತ್ತೀಚಿಗೆ ಆಡಿಯೋ ಬಿಡುಗಡೆಯಲ್ಲಿ ನೆರೆದಿದ್ದವರೆಲ್ಲರ ಎದುರೇ ಈ ಸ್ನೇಹಿತರ ಬೆಟ್ ಸಂಗತಿ ಬಹಿರಂಗವಾಗಿದೆ. ತಾನು ಗೆದ್ದೇ ಗೆಲ್ಲುತ್ತೇನೆ ಎಂಬ ನಂಬಿಕೆಯಿರುವ ತರುಣ್ ಚಂದ್ರ ಎಲ್ಲರೆದುರು ವಿಜಯ ರಾಘವೇಂದ್ರರಿಗೆ ಬೆಟ್ ಬಗ್ಗೆ ನೆನಪಿಸಿದ್ದಾರೆ. ಆಶ್ಚರ್ಯವೆಂಬಂತೆ, ತಮಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಆಗಲೇ ನಿರ್ಧರಿಸಿದಂತೆ ವಿಜಯ್ ರಾಘವೇಂದ್ರ "ತರುಣ್ ಗೆ ಈಗಾಗಲೇ ನಾನು ಗೋವಾಗೆ ಅಡ್ವಾನ್ಸ್ ಬುಕ್ಕಿಂಗ್ ಮಾಡಿದ್ದೇನೆ" ಎಂದುಬಿಡೋದೇ!
ಅದೇನೆ ಇರಲಿ, ಸದ್ಯ ಮಾರುಕಟ್ಟೆಯಲ್ಲಿರುವ ತಮ್ಮ ಸ್ನೇಹಿತರು ಚಿತ್ರದ ಆಡಿಯೋದಲ್ಲಿರುವ ಹಾಡುಗಳ ಯಶಸ್ಸಿನ ಬಗ್ಗೆ ಈ ಇಬ್ಬರೂ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇನ್ನು ಸ್ವಲ್ಪ ದಿನದಲ್ಲೇ ಫಲಿತಾಂಶ ಪ್ರಕಟವಾಗಲಿದೆ. ಯಾರು ಯಾರನ್ನು ಗೋವಾಗೆ ಕರೆದುಕೊಂಡು ಹೋಗಿ ಖರ್ಚು ಭರಿಸಲಿದ್ದಾರೆ ಎಂಬುದಷ್ಟೇ ಕುತೂಹಲದ ಸಂಗತಿ. ಇವರಿಬ್ಬರ ಪಾಡು ಗೊತ್ತಿಲ್ಲದ 'ಬಡಪಾಯಿ ಹೃದಯಕ್ಕೆ...' ಹಾಡು ಮಾತ್ರ ತನ್ನ ಪಾಡಿಗೆ ತಾನು ಸಾಕಷ್ಟು ಜನರ ಕಿವಿ ತಲುಪುತ್ತಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











