ತೆಲುಗು ನಟ ಸೃಜನ್ ಮೇಲೆ ಅತ್ಯಾಚಾರ ಯತ್ನದ ಆರೋಪ: ದೂರು ಕೊಟ್ಟ ಯುವ ನಟಿ
ಕನ್ನಡ ಚಿತ್ರಗಳಲ್ಲೂ ನಟಿಸಿದ ಮಲಯಾಳಂ ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಇನ್ನೂ ಮಾಸುವ ಮುನ್ನವೇ ಟಾಲಿವುಡ್ ನಲ್ಲಿ ಅಂಥದ್ದೇ ಘಟನೆಯೊಂದು ನಡೆದಿದೆ.
ದೊಡ್ಡ ನಟಿಯಾಗಬೇಕು ಎಂದು ಆಸೆ ಹೊತ್ತು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಯುವ ನಟಿ ಮೇಲೆ ಅತ್ಯಾಚಾರ ಯತ್ನ ನಡೆದಿದೆ. ಚಲಿಸುತ್ತಿರುವ ಕಾರಿನಲ್ಲಿ ತೆಲುಗು ನಟ ಸೃಜನ್ ಹಾಗೂ ನಿರ್ದೇಶಕ ಚಲಪತಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಯುವ ನಟಿಯೊಬ್ಬರು ವಿಜಯವಾಡ ಪೊಲೀಸರಿಗೆ ದೂರು ನೀಡಿದ್ದಾರೆ.. ಮುಂದೆ ಓದಿರಿ...

ಚಾನ್ಸ್ ನೀಡುತ್ತೇವೆ ಎಂದು ನಂಬಿಸಿದ ಕಿಡಿಗೇಡಿಗಳು
ಪೊಲೀಸರಿಗೆ 'ಆ' ನಟಿ ದೂರು ನೀಡಿರುವ ಪ್ರಕಾರ, ಸಿನಿಮಾದಲ್ಲಿ ನಟಿಸಲು ಚಾನ್ಸ್ ನೀಡುತ್ತೇವೆ ಎಂದು 'ಆ' ಯುವ ನಟಿಯನ್ನ ತೆಲುಗು ನಟ ಸೃಜನ್ ಹಾಗೂ ನಿರ್ದೇಶಕ ಚಲಪತಿ ನಂಬಿಸಿದ್ದರು. ಜೊತೆಗೆ ಚಿತ್ರೀಕರಣಕ್ಕೆಂದು ಭೀಮಾವರಂಗೆ ಬರಬೇಕೆಂದು 'ಆ' ಯುವ ನಟಿಗೆ ಕಿಡಿಗೇಡಿಗಳಿಬ್ಬರು ತಿಳಿಸಿದ್ದರು.

ಕಾರಿನಲ್ಲಿ ಪ್ರಯಾಣ..
ಆಗಸ್ಟ್ 13 ರಂದು ಹೈದರಾಬಾದ್ ನಿಂದ ಭೀಮಾವರಂಗೆ ರೈಲಿನಲ್ಲಿ 'ಆ' ಯುವ ನಟಿ ಪ್ರಯಾಣ ಮಾಡಬೇಕಾಗಿತ್ತು. ಆದ್ರೆ, ಅಷ್ಟರಲ್ಲಿ ಪ್ರತ್ಯಕ್ಷರಾದ ನಟ ಸೃಜನ್ ಹಾಗೂ ನಿರ್ದೇಶಕ ಚಲಪತಿ ರೈಲಿನಲ್ಲಿ ಪ್ರಯಾಣ ಬೇಡ, ಕಾರಿನಲ್ಲಿ ಪ್ರಯಾಣಿಸಬೇಕೆಂದು ಒತ್ತಾಯಿಸಿದ್ದಾರೆ.

ಅತ್ಯಾಚಾರಕ್ಕೆ ಯತ್ನ
ನಟ ಸೃಜನ್ ಹಾಗೂ ನಿರ್ದೇಶಕ ಚಲಪತಿ ಒತ್ತಾಯಕ್ಕೆ ಮಣಿದ 'ಆ' ಯುವ ನಟಿ, ತಮ್ಮ ಕಾರಿನಲ್ಲಿಯೇ ಇಬ್ಬರೊಂದಿಗೆ ಭೀಮಾವರಂಗೆ ಪ್ರಯಾಣ ಆರಂಭಿಸಿದರು. ಪಯಣ ಆರಂಭವಾಗುತ್ತಿದ್ದಂತೆಯೇ, ಕಾರಿನಲ್ಲಿ ಆಕೆಯೊಂದಿಗೆ ಸೃಜನ್ ಹಾಗೂ ಚಲಪತಿ ಅಸಭ್ಯವಾಗಿ ವರ್ತಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ನಟಿ ಪ್ರತಿಭಟಿಸುತ್ತಿದ್ದಂತೆಯೇ, ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ 'ಆ' ನಟಿ ತಿಳಿಸಿದ್ದಾರೆ.

ಲಾರಿಗೆ ಗುದ್ದಿ ಅಪಘಾತ
ನಟಿಯ ಕಾರ್ ನ ಯರ್ರಾಬಿರ್ರಿ ಓಡಿಸುತ್ತಿದ್ದ ನಿರ್ದೇಶಕ ಚಲಪತಿ ಲಾರಿಗೆ ಗುದ್ದಿದ್ದಾನೆ. ಅಪಘಾತದಲ್ಲಿ 'ಆ' ನಟಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ನಂತರ ತಮ್ಮ ಫೋನ್ ನಿಂದ ಸ್ನೇಹಿತರಿಗೆ ಲೋಕೇಷನ್ ಕಳುಹಿಸಿ, ಸ್ನೇಹಿತರ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ನಿರ್ದೇಶಕ ಚಲಪತಿ ಪೊಲೀಸರ ವಶದಲ್ಲಿ
ಇಷ್ಟೆಲ್ಲ ಆದ್ಮೇಲೆ ತಮ್ಮ ತಪ್ಪನ್ನ ಒಪ್ಪಿಕೊಂಡ ಚಲಪತಿ ಹಾಗೂ ಸೃಜನ್, ಪೊಲೀಸ್ ಗೆ ದೂರು ನೀಡಬಾರದೆಂದು 'ಆ' ನಟಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ ದೂರು ನೀಡಿದರೆ ಯಾವುದೇ ಸಿನಿಮಾದಲ್ಲಿ ಅವಕಾಶ ಕೊಡಿಸದಂತೆ ಬ್ಲಾಕ್ ಮೇಲ್ ಮಾಡಿದ್ದಾರೆ. ಆದ್ರೆ, ಕಿಡಿಗೇಡಿಗಳ ಬೆದರಿಕೆಗೆ ಹೆದರದ 'ಆ' ನಟಿ ವಿಜಯವಾಡ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಿರ್ದೇಶಕ ಚಲಪತಿಯನ್ನ ವಶಕ್ಕೆ ಪಡೆದಿದ್ದಾರೆ. ನಟ ಸೃಜನ್ ಎಸ್ಕೇಪ್ ಆಗಿದ್ದಾನೆ.


Click it and Unblock the Notifications











